ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ರೈಲು ನಿಲ್ದಾಣದಲ್ಲಿ
ಮಹಾಕುಂಭಕ್ಕೆ ಹೋಗುವ ಎರಡು ರೈಲುಗಳು ತಡವಾಗಿ ಬಂದಿದ್ದರಿಂದ ವ್ಯಾಪಕ ಪ್ರಯಾಣಿಕರ ಸೇರಿದ್ದರಿಂದ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದ್ದು ಕನಿಷ್ಠ 18 ಜನರು ಸಾವಿಗೀಡಾಗಿದ್ದಾರೆ.
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಮಹಾ ಕುಂಭ ಮೇಳಕ್ಕಾಗಿ ತೆರಳಲು ಪ್ರಯಾಗ್ರಾಜ್ ರೈಲು ಹತ್ತುವಾಗ ಸಾವಿರಾರು ಮಂದಿ ಸೇರಿ ಜನದಟ್ಟಣೆ ಉಂಟಾದ್ದರಿಂದ ಫ್ಲಾಟ್ಫಾರ್ಮ್ ಸಂಖ್ಯೆ 13, 14ರಲ್ಲಿ ಈ ಘಟನೆ ಸಂಭವಿಸಿದೆ. ಯಾರೋ ವದಂತಿ ಹರಡಿದ್ದರಿಂದ ಪ್ರಯಾಣಿಕರಲ್ಲಿ ಭೀತಿ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಆರಂಭಿಕ ಮಾಹಿತಿ ಪ್ರಕಾರ ಫ್ಲಾಟ್ಫಾರ್ಮ್ನಲ್ಲಿ ಭಾರೀ ಜನದಟ್ಟಣೆಯಿಂದಾಗಿ ತೀವ್ರ ಉಸಿರುಗಟ್ಟುವಿಕೆ ಉಂಟಾಗಿ ನಾಲ್ವರು ಮಹಿಳಾ ಪ್ರಯಾಣಿಕರು ಪ್ರಜ್ಞಾಹೀನರಾದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಅವರನ್ನು ತಕ್ಷಣವೇ ಲೋಕನಾಯಕ ಜಯಪ್ರಕಾಶ್ (ಎಲ್ಎನ್ಜೆಪಿ) ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
14ನೇ ಪ್ಲಾಟ್ಫಾರಂನಲ್ಲಿ ಪ್ರಯಾಗ್ರಾಜ್ಗೆ ತೆರಳಬೇಕಾಗಿದ್ದ ಪ್ರಯಾಗ್ರಾಜ್ ಎಕ್ಸ್ಪ್ರೆಸ್ ರೈಲು ನಿಂತಿತ್ತು. ಆ ರೈಲಿಗೆ ಪ್ರವೇಶಿಸಲು ಏಕಕಾಲಕ್ಕೆ ಜನರು ನುಗ್ಗಿ ಬಂದರು. ಹೀಗಾಗಿ ಜನರು ಒಬ್ಬರ ಮೇಲೊಬ್ಬರು ಬಿದ್ದು ಹೋದರು. ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಪ್ರಕಾರ, ಜನರು ರೈಲು ಹತ್ತಲು ನಾಮುಂದು, ತಾಮುಂದು ಎಂಬ ಧಾವಂತದಿಂದ ನುಗ್ಗಿದರು. ಆಗ ಕೆಲವರು ನೆಲಕ್ಕೆ ಬಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿತು. ಕಾಲ್ತುಳಿತದಿಂದಾಗಿ ಬಟ್ಟೆ, ಚಪ್ಪಲಿಗಳು, ಶೂಗಳು ಮತ್ತು ಇತರ ವಸ್ತುಗಳು ಫ್ಲಾಟ್ಫಾರ್ಮ್ ಹಾಗೂ ಮೆಟ್ಟಿಲುಗಳ ಮೇಲೆ ಹರಡಿಕೊಂಡಿದ್ದ ದೃಶ್ಯವು ದುರ್ಘಟನೆ ಸಂಭವಿಸಿದ ಪ್ರಮಾಣಕ್ಕೆ ಸಾಕ್ಷಿಯಾಗಿತ್ತು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿ ಕಾಲ್ತುಳಿತ ಘಟನೆ ಹೇಗಾಯಿತು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಕಾಲ್ತುಳಿತದ ಬೆನ್ನಲ್ಲೇ ಪ್ರಯಾಗ್ರಾಜ್ಗೆ ಜನರು ಹೋಗಲು ಅನುಕೂಲ ಮಾಡುವ ನಿಟ್ಟಿನಲ್ಲಿ 4 ವಿಶೇಷ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.