ಶೀಲಾ ಕಾಟ್ಕರ್, ವಂಟಮೂರಿ, ಜ್ಯೋತಿ ಪಾಟೀಲ್, ಶೇಜವಾಡಕರ ಅಂತಿಮ ರೇಸ್ನಲ್ಲಿ/ ಹುಬ್ಬಳ್ಳಿಗೊ, ಧಾರವಾಡಕ್ಕೊ ಮುಂದುವರಿದ ಗೊಂದಲ /ಪ್ರಥಮ ಪ್ರಜೆ ಕೈ ತಪ್ಪಿದ ಕ್ಷೇತ್ರಕ್ಕೆ ಉಪಮೇಯರ್ ಸ್ಥಾನ*
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಉಪಮೇಯರ್ ಚುನಾವಣೆಗೆ ದಿನಾಂಕ 30ರ ಮುಹೂರ್ತ ನಿಗದಿಯಾಗಿದ್ದು, ಪ್ರಸಕ್ತ ಅಧಿಕಾರದಲ್ಲಿ ಇರುವ ಬಿಜೆಪಿ ಬಾವುಟ ನಿಶ್ಚಿತವಾಗಿದ್ದರೂ ಎರಡೂ ಸ್ಥಾನಗಳಿಗೂ ಪೈಪೋಟಿ ನಿಶ್ಚಿತವಾಗಿದೆ.
ಈಗಾಗಲೇ ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಪಕ್ಷದ ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಿದ್ದು, 29ರ ಸಂಜೆ ಅನಂತ ರೆಸಿಡೆನ್ಸಿ ಯಲ್ಲಿ ನಡೆವ ಸಭೆಯಲ್ಲಿ ಎಲ್ಲ ಸದಸ್ಯರ ಅಭಿಪ್ರಾಯ ಆಲಿಸಿ ಚುನಾವಣೆ ದಿನಾಂಕದ ಬೆಳಿಗ್ಗೆ ಉಭಯ ಸ್ಥಾನಕ್ಕೆ ಅಭ್ಯರ್ಥಿಗಳ ಅಂತಿಮಗೊಳಿಸುವ ಸಾಧ್ಯತೆಯಿದೆ.
ಪ್ರಸ್ತುತ ಅವಧಿಗೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪಮೇಯರ್ ಪಟ್ಟ ಹಿಂದುಳಿದ ಬ ವರ್ಗಕ್ಕೆ ನಿಗದಿಯಾಗಿದೆ. ಪೂರ್ವ ಕ್ಷೇತ್ರಕ್ಕೆ ಒತ್ತು ನೀಡುವ ದೃಷ್ಟಿಯಿಂದ ಆ ಕ್ಷೇತ್ರಕ್ಕೆ ಈ ಬಾರಿ ನಿಕ್ಕಿ ಎನ್ನಲಾಗುತ್ತಿದೆಯಾದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಅವರುಗಳ ಗ್ರೀನ್ ಸಿಗ್ನಲ್ ಅಂತಿಮ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗಾತಿಯಾಗಿದೆ.
ಪ್ರಸ್ತುತ ಬಿಜೆಪಿ ಆಡಳಿತ ಅವಧಿಯಲ್ಲಿ ಧಾರವಾಡದ ಈರೇಶ ಅಂಚಟಗೇರಿ, ಸೆಂಟ್ರಲ್ ವ್ಯಾಪ್ತಿಯ ವೀಣಾ ಬರದ್ವಾಡ ಹಾಗೂ ಪ್ರಸಕ್ತ ಪಶ್ಚಿಮ ಕ್ಷೇತ್ರದ ರಾಮಣ್ಣ ಬಡಿಗೇರ ಅವರುಗಳಿಗ ‘ಗೌನ್ ಭಾಗ್ಯ’ ದೊರೆತಿದ್ದು ಈ ಹಿನ್ನೆಲೆಯಲ್ಲಿ ಇಪ್ಪತ್ನಾಲ್ಕನೇ ಮೇಯರ್ ಪಟ್ಟ ಪೂರ್ವ ಕ್ಷೇತ್ರದ ಪಾಲಾಗುವ ಸಾಧ್ಯತೆ ಹೆಚ್ಚಿದೆಯಾದರೂ ರಾಮಣ್ಣ ಹುಬ್ಬಳ್ಳಿಯವರೇ ಆಗಿರುವುದರಿಂದ ಧಾರವಾಡಕ್ಕೆ ನೀಡಬೇಕೆಂಬ ಬೇಡಿಕೆ ಕೂಡ ಪ್ರಬಲವಾಗಿದೆ.
ಪೂರ್ವ ಕ್ಷೇತ್ರದ ವ್ಯಾಪ್ತಿಗೆ ಬರುವ 73ನೇ ವಾರ್ಡಿನ ಸದಸ್ಯೆ ಹಾಲಿ ಪೂರ್ವ ಅಧ್ಯಕ್ಷ ಮಂಜುನಾಥ ಕಾಟ್ಕರ್ ಪತ್ನಿ ಶೀಲಾ ಕಾಟ್ಕರ್,
ಮೀನಾಕ್ಷಿ ವಂಟಮೂರಿ (ವಾರ್ಡ್ 57), ಜ್ಯೋತಿ ಪಾಟೀಲ್(19ನೇ ವಾರ್ಡ್ ) ಹಾಗೂ ಪೂಜಾ ಶೇಜವಾಡಕರ (ವಾರ್ಡ್ 64) ಈ ನಾಲ್ವರ ಮಧ್ಯೆ ಪೈಪೋಟಿ ನಡೆದಿದೆ.
ಪ್ರೀತಿ ಖೋಡೆ, ಮಾಜಿ ಮೇಯರ್ ರಾಧಾಬಾಯಿ ಸಫಾರೆ,ರೂಪಾ ಶೆಟ್ಟಿ ,ಅನಿತಾ ಚಳಗೇರಿ ಮುಂತಾದವರು ಪರಿಗಣನೆಗೆ ಬರಬಹುದು.
ಉಪಮೇಯರ್ ಹಿಂದುಳಿದ ಬ ವರ್ಗದವರಿಗೆ ಸ್ಥಾನ ಮೀಸಲಿದ್ದು ಮೇಯರ್ ಪಟ್ಟ ಯಾವ ಕ್ಷೇತ್ರದ ಪಾಲಾಗುವದೆಂಬುದನ್ನು ಅವಲಂಬಿಸಿ ನಿರ್ಧಾರ ಪ್ರಕಟಗೊಳ್ಳಲಿದೆ .ಮೇಲ್ನೋಟಕ್ಕೆ ಸದಸ್ಯರಾದ ಸಂತೋಷ ಚವ್ಹಾಣ,ಶಂಕರ್ ಶೇಳಕೆ ಇಬ್ಬರೇ ಈ ಕೆಟಗರಿಯಲ್ಲಿ ಬರುವುದರಿಂದ ಇಬ್ಬರ ಹೆಸರುಗಳು ಪ್ರಸ್ತಾಪಕ್ಕೆ ಬರಬಹುದಾಗಿದೆ.
82 ಸದಸ್ಯ ಬಲ ಹೊಂದಿರುವ ಪಾಲಿಕೆಯಲ್ಲಿ ಬಿಜೆಪಿ 39 ಸದಸ್ಯ ಬಲ ಹೊಂದಿದ್ದು ಮೂರು ಪಕ್ಷೇತರ, ಓರ್ವ ಜೆಡಿಎಸ್ ಬೆಂಬಲದೊಂದಿಗೆ 43 ಸದಸ್ಯರ ಸಂಖ್ಯೆಯಾಲಿದೆ.ಅಲ್ಲದೇ ಐವರು ಜನ ಪ್ರತಿನಿಧಿಗಳ ಮತಾಧಿಕಾರವೂ ಇದೆ. ಇಬ್ಬರು ಪಕ್ಷೇತರರು ಸೇರಿದಂತೆ ಕಾಂಗ್ರೆಸ್ 35, ಎಐಎಂಐಎಂನ ಮೂರು ಸದಸ್ಯರು ಪಾಲಿಕೆಯಲ್ಲಿ ಇದ್ದಾರೆ.
ಚುನಾವಣೆಗೆ ಮುಂಚಿನ ದಿನ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು, ಶಾಸಕರು, ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಬಿಜೆಪಿ ಪಾಲಿಕೆ ಸದಸ್ಯರ ಸಭೆ ಕರೆದಿದ್ದಾರೆ. ಅಲ್ಲಿ ಚರ್ಚಿಸಿ ಒಮ್ಮತದಿಂದ ನಿರ್ಧಾರ ಕೈಗೊಂಡು ಅಂದೆ ರಾತ್ರಿ ಅಥವಾ ಮೂವತ್ತರಂದೇ ಅಂತಿಮಗೊಳಿಸಲಾಗುವುದು.
*ವೀರಣ್ಣ ಸವಡಿ*
ಮಾಜಿ ಮೇಯರ್ ಹಾಗೂ ಸಭಾನಾಯಕ
ಚುನಾವಣೆಯು ಜೂನ್ 30 ರಂದು ಬೆಳಿಗ್ಗೆ 9 ಗಂಟೆಗೆ ಪಾಲಿಕೆಯ ಸಭಾಭವನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಮಹಾಪೌರ ಹಾಗೂ ಉಪಮಹಾಪೌರರ ಸ್ಥಾನಗಳಿಗೆ ನಾಮಪತ್ರಗಳ ಸಲ್ಲಿಸುವುದು. ನಂತರ ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಅಭ್ಯರ್ಥಿಯು ಒಬ್ಬರಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಕೈ ಎತ್ತುವ ಮೂಲಕ ಮತದಾನ, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆಗಳು ಜರುಗಲಿವೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧ್ಯಕ್ಷಾಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್. ಬಿ.ಶೆಟ್ಟೆಣ್ಣವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.