ಹದಿನೆಂಟು ತಿಂಗಳು ಕಳೆದರೂ ಮುಗಿಯದ ರಸ್ತೆ ಕಾಮಗಾರಿ : ಜನತೆಯ ಹಿಡಿಶಾಪ
ಹುಬ್ಬಳ್ಳಿ: ವಾಣಿಜ್ಯನಗರಿ ಹಿರಿಮೆಯ ಹುಬ್ಬಳ್ಳಿಯ ಅತ್ಯಂತ ಜನನಿಬಿಡ ಸಿಬಿಟಿ ಕಿಲ್ಲಾ ಪ್ರದೇಶದ ಒಂದನೇ ಕ್ರಾಸ್ ಜನ ಸುಮಾರು ಎರಡು ವರ್ಷದಿಂದ ಅಕ್ಷರಶಃ
ನರಕಯಾತನೆ ಅನುಭವಿಸುತ್ತಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಹೌದು, ಈ ರಸ್ತೆಯ ಆದ್ವಾನದ ಕಾರಣಕ್ಕೆ ಈಗಾಗಲೇ ಇಲ್ಲಿ ಮೂವರು ಪ್ರಾಣ ಕಳೆದುಕೊಂಡಿರುವುದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅರಿವಿದ್ದರೂ, ಮೌನಕ್ಕೆ ಶರಣಾಗಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ಒಳಚರಂಡಿ ಲೈನ್
ಅಳವಡಿಕೆಗಾಗಿ 2023ರ ನವೆಂಬರ್ ತಿಂಗಳಲ್ಲಿ ಆರಂಭವಾದ ಕಾಮಗಾರಿ ಇನ್ನೂ ನಾಲ್ಕು ತಿಂಗಳ ಕಳೆದರೆ ಎರಡು ವರ್ಷ ಪೂರ್ಣಗೊಳ್ಳುವಂತಿದ್ದರೂ ಅಧಿಕಾರಿಗಳಲ್ಲಿ ಸಮರ್ಪಕ ಪ್ಲಾನಿಂಗ್, ದೂರದೃಷ್ಟಿ ಇಲ್ಲದ ಕಾರಣಕ್ಕೆ ಕುಂಟುತ್ತ ಸಾಗಿದ್ದು, ಮತ್ತಷ್ಟು ಬಲಿಗಾಗಿ ಲೆಕ್ಕ ಹಾಕುತ್ತಿದೆ.
ಪಾಲಿಕೆಯ ವಾರ್ಡ್ ನಂ. 64ರ ವ್ಯಾಪ್ತಿಗೆ ಒಳಪಡುವ ಸಿಬಿಟಿ
ಕಿಲ್ಲಾ ಓಣಿಯ ಒಂದನೇ ಕ್ರಾಸ್ ಜನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ. ಪ್ರಯೋಜನವಾಗಿಲ್ಲ.ಹದಿನೇಳು ತಿಂಗಳ ಹಿಂದೆ ಯುಜಿಡಿ ಲೈನ್ ಅಳವಡಿಸುವ ಸಲುವಾಗಿ ಮೊದಲು ರಸ್ತೆ ಮಧ್ಯಭಾಗವನ್ನು ಅಗೆಯಲಾಯಿತು. ಅದಾದ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಗಟಾರು
ನಿರ್ಮಿಸುವ ಸಂಬಂಧ ಅಗೆಯಲಾಯಿತು. ಆ ವೇಳೆ ಕಾಮಗಾರಿಗಳೆಲ್ಲ ಮುಗಿದವು ಇನ್ನು ರಸ್ತೆ ನಿರ್ಮಾಣ ಆಗುತ್ತೆ ಎಂದು ಸಂತಸದಲ್ಲಿದ್ದ ಕಿಲ್ಲಾ ನಿವಾಸಿಗಳಿಗೆ ಎಲ್ ಆ್ಯಂಡ್ ಟಿ
ಅಧಿಕಾರಿಗಳು ನಿರಂತರ ನೀರು ಪೂರೈಕೆ ಯೋಜನೆಗಾಗಿ ಪೈಪ್
ಲೈನ್ ಅಳವಡಿಕೆಗೆ ಮತ್ತೆ ತಗ್ಗು ತೆಗೆದು ಶೋಚನೀಯ ಸ್ಥಿತಿಗೆ ಕಾರಣರಾಗಿದ್ದಾರೆ.
ಅಪೂರ್ಣ ರಸ್ತೆಯಿಂದಾಗಿ ಯಾವುದೇ ವಾಹನಗಳ ಸಂಚಾರ ಸಾಧ್ಯವಾಗುತ್ತಿಲ್ಲ. ಸ್ಥಳಕ್ಕೆ ಆಂಬುಲೆನ್ಸ್ ಸಹ ಬಾರದಂತಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡವರನ್ನು ಮುಖ್ಯ ರಸ್ತೆಯವರೆಗೂ ಹೊತ್ತು ಒಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಎಎಂ ಫೋರ್ಟ್ ಅಪಾರ್ಟ್ಮೆಂಟ್ನ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ನಿವಾಸಿಯೊಬ್ಬರು ರಸ್ತೆಯ ಸ್ಥಿತಿಯಿಂದಾಗಿ ಯಾವುದೇ ಆಂಬ್ಯುಲೆನ್ಸ್ ಅಥವಾ ವಾಹನ
ಸಮಯಕ್ಕೆ ಸರಿಯಾಗಿ ಬಾರದೇ ಇತ್ತೀಚೆಗೆ ಕೊನೆಯುಸಿರೆಳೆದಿದ್ದಾರೆ. ಇದೇ ರೀತಿಯಾಗಿ
ಅನೇಕ ಸಾವು-ನೋವು ಸಂಭವಿಸಿದ್ದು ಬಿದ್ದು ಗಾಯಗೊಂಡವರ ಸಂಖ್ಯೆಗೆ ಲೆಕ್ಕವೇ ಇಲ್ಲ.
ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆ…
ಮೊದಲೇ ರಸ್ತೆ ಹದಗೆಟ್ಟು ಹೋಗಿದೆ. ಇಂತಹ ಸ್ಥಿತಿಯಲ್ಲೂ ಸಿಬಿಟಿ ಸುತ್ತಮುತ್ತಲೂ ವ್ಯಾಪಾರ ಮಾಡುವ ದೂಡುವ ಗಾಡಿಗಳ ಮಾಲೀಕರು, ತಮ್ಮ ವ್ಯಾಪಾರ ಮುಗಿದ ತಕ್ಷಣ ಕಿಲ್ಲೇ
ಓಣಿಯ ರಸ್ತೆಯ ಇಕ್ಕೆಲಗಳಲ್ಲಿ ದೂಡುವ ಗಾಡಿಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ದ್ವಿಚಕ್ರ ವಾಹನಗಳಲ್ಲೂ ಓಡಾಡುವುದು ಕಷ್ಟವಾಗಿದೆ ಎಂಬುದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಒಳಚರಂಡಿ ಪೈಪ್ ಲೈನ್ ಅಳವಡಿಕೆಗಾಗಿ ಏಳು ಎಂಟು ಅಡಿ ನೆಲ ಅಗೆಯಲಾಗಿತ್ತು. ಕಾಮಗಾರಿಪೂರ್ಣಗೊಂಡ ತಕ್ಷಣ ರಸ್ತೆ ನಿರ್ಮಾಣ ಅಸಾಧ್ಯ ಏಕೆಂದರೆ ಭೂಮಿ ಕುಸಿಯುವ ಸಾಧ್ಯತೆ
ಇರುತ್ತದೆ. ಇದಾದ ಬಳಿಕ ಒಂದೊಂದೇ ಕಾಮಗಾರಿ ನಡೆದಿದ್ದು
ಈಗ ನಿರಂತರ ನೀರು ಪೂರೈಕೆಯ ಪೈಪ್ ಲೈನ್ ಅಳವಡಿಸಲಾಗುತ್ತಿದೆ. ಅದೂಪೂರ್ಣಗೊಂಡಿದೆ. ಈ ತಿಂಗಳ ಅಂತ್ಯದಲ್ಲಿ ರಸ್ತೆ ನಿರ್ಮಾಣವಾಗಲಿದೆಯೆಂದು ಪಾಲಿಕೆ ಸದಸ್ಯೆ
ಪೂಜಾ ಶೇಜವಾಡಕರ್ ಹೇಳುತ್ತಾರೆ.