*ತಡರಾತ್ರಿ ನಡೆದ ಘಟನೆಯಲ್ಲಿ ರಿಕ್ಕಿ ರೈ ಗೆ ಗಂಭೀರ ಗಾಯ*
ರಾಮನಗರ: ಅಂಡರ್ ವರ್ಲ್ಡ್ ಮಾಜಿ ಡಾನ್ ಹಾಗೂ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಕಾರಿನ ಮೇಲೆ ಬಿಡದಿ ಬಳಿಯ ಅದು ಅವರ ನಿವಾಸದ ಬಳಿ ರಾತ್ರಿ ಗುಂಡಿನ ದಾಳಿ ನಡೆದಿದೆ.
ಘಟನೆಯಲ್ಲಿ ರಿಕ್ಕಿ ಅವರ ಕೈ ಮತ್ತು ಮೂಗಿಗೆ ಗುಂಡೇಟು ತಗುಲಿ ಗಂಭೀರವಾದ ಗಾಯಗಳಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಿಡದಿ ಬಳಿಯ ನಿವಾಸದಿಂದ ಮನೆಯಿಂದ ರಾತ್ರಿ 1.30ರ ಸುಮಾರಿಗೆ ರಿಕ್ಕಿ ಅವರು ಗನ್ಮ್ಯಾನ್ ಮತ್ತು ಚಾಲಕನೊಂದಿಗೆ ಬೆಂಗಳೂರಿಗೆ ಹೊರಟ ವೇಳೆ ಮನೆ ಕಾಂಪೌಂಡ್ ದಾಟಿ ಹೊರಬಂದ ಕೂಡಲೇ ಕಾರಿನ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದು ,ಗಂಭೀರವಾಗಿ ಗಾಯಗೊಂಡ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.
ಘಟನೆಯಲ್ಲಿ ರಿಕ್ಕಿ ಜೊತೆಗಿದ್ದ ಕಾರು ಚಾಲಕ ಮತ್ತು ಗನ್ ಮ್ಯಾನ್ ಗೂ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರಿಗೂ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ಘಟನೆ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರಿಕ್ಕಿ ಅವರ ಮನೆಯಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿಯನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ. ಸ್ಥಳದಲ್ಲಿ ಮೊಬೈಲ್ ಮತ್ತು ಗುಂಡುಗಳು ಪತ್ತೆಯಾಗಿವೆ ಪೊಲೀಸ್ ಮೂಲಗಳು ತಿಳಿಸಿವೆ.ಎರಡು ದಿನಗಳ ಹಿಂದೆಯಷ್ಟೇ ರಿಕ್ಕಿ ರಷ್ಯಾದಿಂದ ಹಿಂದಿರುಗಿದ್ದರು. ಇವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು.ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಾರ್ಪ್ ಶೂಟರ್ ಮೂಲಕ ದಾಳಿ ನಡೆಸಿ ಹತ್ಯೆಗೆ ಪ್ರಯತ್ನಿಸಿರುವ ಸಾಧ್ಯತೆಯಿದೆ.