*ಸಂವಿಧಾನದ ಅರಿವು ಮೂಡಿಸಲು ಬೃಹತ್ ಕಾರ್ಯಕ್ರಮ / ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಆಯೋಜನೆ*
ಧಾರವಾಡ :ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಧಾರವಾಡದ ವತಿಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ರವರ 134ನೇ ಜಯಂತ್ಯೋತ್ಸವದ ಅಂಗವಾಗಿ ದಿ 20 ರವಿವಾರ ದಂದು ಭೀಮೋತ್ಸವ 2025 ಕಾರ್ಯಕ್ರಮವನ್ನು ಡಾ.ಮಲ್ಲಿಕಾರ್ಜುನ ಮನಸೂರ ಕಲಾಭವನದ ಆವರಣ, ಕಡಪಾ ಮೈದಾನದಲ್ಲಿ ಏರ್ಪಡಿಸಲಾಗಿದೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಎಂ.ಅರವಿಂದ, ವೆಂಕಟೇಶ್ ಸಗಬಾಳ,ದಾನಪ್ಪ ಕಬ್ಬೇರ, ಅಶೋಕ್ ದೊಡಮನಿ. ಯಲ್ಲಪ್ಪ ಮಂಟೂರು , ರವಿ ಸಾಮ್ರಾಣಿ ,ಅಶೋಕ್ ಭಂಡಾರಿ, ಪರಮೇಶ್ವರ್ ಕಾಳೆ,ರಾಜೇಶ್ ಕೋಟೆನ್ನವರ. ಚಿದಾನಂದ ಸರಿಕರ, ಲಕ್ಷ್ಮಣ್ ಬಕಾಯಿ ಮುಂತಾದವರು ವಿವರ ನೀಡಿದರು.
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ ರವರ ಆದರ್ಶ, ತತ್ವ ಹಾಗೂ ಸಿದ್ಧಾಂತಗಳ ಆಚರಣೆ ಹಾಗೂ ಅವರ ಸಂವಿಧಾನದ ಮೂಲಕ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಅಲ್ಲದೆ ಸಂವಿಧಾನದ ಕುರಿತು ಜನತೆಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ರವರು, ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಅಬಕಾರಿ ಇಲಾಖೆಯ ಸಚಿವ ಆರ್.ಬಿ.ತಿಮ್ಮಾಪೂರ, ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ, ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅಲ್ಲದೇ ಧಾರವಾಡ ಜಿಲ್ಲೆಯ ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಎನ್.ಎಚ್.ಕೋನರೆಡ್ಡಿ ಸಹಿತ ಹಲವಾರು ಗಣ್ಯ-ಮಾನ್ಯರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿಜೀ, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಹಾಗೂ ಮನಸೂರಿನ ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು ಸಾನಿಧ್ಯವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ, ಜಿಲ್ಲೆಯ, ಹಾಗೂ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸುವ ಖ್ಯಾತ ಜನಪದ ಕಲಾತಂಡಗಳಿಂದ ಜನಪದ ವಾಹಿನಿಯ ಮೂಲಕ ಡಾ|| ಬಿ.ಆರ್. ಅಂಬೇಡ್ಕರ ರವರ ಭಾವಚಿತ್ರದ (ಸ್ತಬ್ಧಚಿತ್ರ) ಭವ್ಯ ಮೆರವಣಿಗೆಯೂ ಕೂಡ ಜರುಗಲಿದೆ. ನಾಡಿನ ಖ್ಯಾತ ಕಲಾವಿದರು ಆಗಮಿಸಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಲಿದ್ದಾರೆ. ಧಾರವಾಡ ಜಿಲ್ಲೆಯ, ನಾಡಿನ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಮುದಾಯದ ಸಂಘ ಸಂಸ್ಥೆಗಳು ಭಾಗವಹಿಸಲಿವೆ.