*ಸಿಎಂ ಕುರ್ಚಿಗಾಗಿ ರಾಹುಲ್ ಪಕ್ಕದಲ್ಲಿರಲು ಸಿದ್ದು-ಡಿಕೆಶಿ ಪೈಪೋಟಿ*
ಹೊಸದಿಲ್ಲಿ: ಬೆಂಗಳೂರಿನಲ್ಲಿ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಇಂಥ ಸ್ಥಿತಿಯಲ್ಲಿ ನೀವು ವಿಜಯನಗರಕ್ಕೆ ಹೋಗಿ ಸಂಭ್ರಮಾಚರಣೆ ಮಾಡುತ್ತಿದ್ದೀರಲ್ಲ? ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ…ನಿಮಗೆ ಸ್ವಲ್ಪವೂ ನಾಚಿಕೆ ಆಗುವುದಿಲ್ಲವೇ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಸಂಜೆ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಬೆಂಗಳೂರು ಜಲಾವೃತವಾಗಿ ಜನ ಸತ್ತರೂ ಇವರು ವಿಜಯನಗರಕ್ಕೆ ಹೋಗಿ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶ ಎನ್ನುತ್ತ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಿಜಕ್ಕೂ ಇವರಿಗೆ ರಾಜ್ಯದ ಜನಜೀವನದ ಬಗ್ಗೆ ಕಾಳಜಿಯೇ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ಒಂದೇ ಒಂದು ರಸ್ತೆಯ ತೆಗ್ಗು-ಗುಂಡಿ ಮುಚ್ಚಿಲ್ಲ. ಮಣ್ಣು ಸಹ ಹಾಕಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಮಂತ್ರಿ.ಯಾಗಿದ್ದರೂ ಆಡಳಿತದ ಕಡೆ ಗಮನವಿಲ್ಲ. ಬೆಂಗಳೂರಿನ ರಾಜಕಾಲುವೆ ಸಹ ಸ್ವಚ್ಛಗೊಳಿಸಿದ ಇವರು ಖಜಾನೆ ಮಾತ್ರ ಸ್ವಚ್ಛಗೊಳಿಸುತ್ತಿದ್ದಾರಷ್ಟೇ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಬರೀ ಗುಂಪುಗಾರಿಕೆ ಮಾಡುತ್ತ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಪಕ್ಕದಲ್ಲಿ ಕಾಣಿಸಿಕೊಳ್ಳಲು ಪರಸ್ಪರ ಹಾತೊರೆಯುತ್ತಿದ್ದಾರೆ ವಿನಃ ರಾಜ್ಯದ ಅಭಿವೃದ್ಧಿ, ಜನ ಜೀವನದ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಸಂಪೂರ್ಣ ಆಡಳಿತ ವೈಫಲ್ಯ ಕಂಡಿದ್ದಾರೆ. ಲಂಚ ಹೊಡೆಯಲು ಇಡೀ ಸರ್ಕಾರವನ್ನು ಫ್ರೀ ಬಿಟ್ಟು ಬಿಟ್ಟಿದ್ದಾರೆ. ವಾಲ್ಮೀಕಿ, ಮೂಡಾ ಹಗರಣ, ಈಗ ಕಾರ್ಮಿಕ ಇಲಾಖೆಯಲ್ಲೂ ಹಗರಣ ನಡೆದಿದೆ. ಇದೆಲ್ಲವನ್ನೂ ಮುಚ್ಚಿಡಲು ಪ್ರಯತ್ನಿಸುತ್ತಿರುವುದೇ ಇವರ ೨ ವರ್ಷದ ಸಾಧನೆ ಎಂದು ಸಚಿವ ಜೋಶಿ ದೂರಿದರು.
ರಾಜ್ಯ ಸರ್ಕಾರದಲ್ಲಿ ವೇತನ ಕೊಡಲೂ ಹಣವಿಲ್ಲದಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 303 ಕೋಟಿ ಬಾಕಿಯನ್ನು ಇನ್ನೂ ಕೊಟ್ಟಿಲ್ಲ. ಇವರು ಅದ್ಯಾವ ಸ್ಥಿತಿಯಲ್ಲಿ ಸರ್ಕಾರ ನಡೆಸುತ್ತಿದ್ದಾರೋ ಗೊತ್ತಿಲ್ಲ? ಎಂದರು.
ನೀರು, ಹಾಲಿನಿಂದ ಹಿಡಿದು ಆಲ್ಕೋಹಾಲ್ವರೆಗೂ 48 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಜೀವ ಹಿಂಡುತ್ತಿರುವುದೇ ಇವರ ಬಹು ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಬರೀ ಸುಳ್ಳು ಹೇಳುತ್ತಿದ್ದರಿಂದಲೇ ಅವನತಿಗೆ ಬಂದಿದೆ. ನೆಹರು ಕಾಲಘಟ್ಟ ಬಿಟ್ಟರೆ ನಂತರದಲ್ಲಿ ಕಾಂಗ್ರೆಸ್ ಒಮ್ಮೆಯೂ ಮೂರು ಬಾರಿ ಅಧಿಕಾರಕ್ಕೆ ಬಂದ ಉದಾಹರಣೆಯಿಲ್ಲ. ಆದರೆ, ಎನ್ಡಿಎ ಆಡಳಿತದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ. ಭಯೋತ್ಪಾದನೆ ವಿರುದ್ಧ ಪ್ರಥಮದಿಂದಲೂ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದ್ದಾರೆ ಎಂದು ಕೈ ನಾಯಕರಿಗೆ ತಿವಿದರು.