* *ಪೇಡೆ ನಗರಿಯ ಮಾನವ ಹಕ್ಕುಗಳ ಪ್ರತಿಪಾದಕಿಗೆ ಮಹತ್ವದ ಹುದ್ದೆ*/ *ಕರ್ನಾಟಕ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ನಿಂದ ನೇಮಕ*
ಧಾರವಾಡ : ಬೆಂಗಳೂರಿನ ಕರ್ನಾಟಕ ಪ್ರದೇಶ ಕ್ಯಾಥೊಲಿಕ್ ಬಿಷಪ್ಸ್ ಕೌನ್ಸಿಲ್ (ಕೆಆರ್ಸಿಬಿಸಿ) ಧಾರವಾಡದ ಹಿರಿಯ ಸಾಮಾಜಿಕ ಹೋರಾಟಗಾರ್ತಿ ಡಾ. ಇಸಾಬೆಲ್ಲಾ ಸೆಲ್ವರಾಜ್ ಕ್ಸೇವಿಯರ್ ಅವರನ್ನು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳ (ಎಸ್ಸಿ/ಎಸ್ಟಿ/ಬಿಸಿ) ಪ್ರಾದೇಶಿಕ ಆಯೋಗದ ನೂತನ ಜಂಟಿ ಕಾರ್ಯದರ್ಶಿಯಾಗಿ ನೇಮಿಸಿದೆ.
ಕೆಆರ್ಸಿಬಿಸಿ ಅಧ್ಯಕ್ಷ ಮತ್ತು ಬೆಂಗಳೂರಿನ ಮೆಟ್ರೋಪಾಲಿಟನ್ ಆರ್ಚ್ಬಿಷಪ್ ಪೀಟರ್ ಮಚಾಡೊ ಅವರು ಈ ನೇಮಕಾತಿಯನ್ನು ದಿ.7ರಂದು ಪ್ರಕಟಿಸಿದ್ದಾರೆ.
ಡಾ. ಇಸಾಬೆಲ್ಲಾ ಅವರು ದಲಿತ ಆಯೋಗದೊಳಗೆ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ. ಇವರ ಅಧಿಕಾರ ಅವಧಿ ಮೂರು ವರ್ಷಗಳ ಕಾಲ ಇರುವದು.
ಡಾ. ಇಸಾಬೆಲ್ಲಾ, ಮಾನವ ಹಕ್ಕುಗಳ ಪ್ರತಿಪಾದಕಿ ಅಲ್ಲದೇ ಧಾರವಾಡದ ಸಾಧನಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಘ ಮತ್ತು ಮಾನವ ಹಕ್ಕುಗಳ ಕೇಂದ್ರದ ಸಂಸ್ಥಾಪಕರಾಗಿದ್ದಾರೆ. 2001 ರಿಂದ ಸಾಧನಾ ಸಂಸ್ಥೆಯು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಕೆಲಸ ಮಾಡಿದೆ, ಕಳ್ಳಸಾಗಣೆ, ಬಾಲ್ಯ ವಿವಾಹ, ದೌರ್ಜನ್ಯ ಮತ್ತು ಶೋಷಣೆಯಂತಹ ಸಮಸ್ಯೆಗಳನ್ನು ಪರಿಹರಿಸುತ್ತ ಬಂದಿದೆ.ಇತ್ತೀಚೆಗೆ ನಕ್ಸಲರ ಶರಣಾಗತಿಯಲ್ಲೂ ಇಸಾಬೆಲ್ಲಾ ಪ್ರಮುಖ ಪಾತ್ರ ವಹಿಸಿದ್ದರು.
ವಾಷಿಂಗ್ಟನ್ ಡಿಸಿ ಯಿಂದ ಆಧ್ಯಾತ್ಮಿಕತೆ ಮತ್ತು ನಾಯಕತ್ವದಲ್ಲಿ ಪಿಎಚ್ಡಿ ಜೊತೆಗೆ ಮನೋವಿಜ್ಞಾನ, ಹಿಂದಿ, ಸಮಾಜಶಾಸ್ತ್ರ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಇವರು ಪಡೆದವರಾಗಿದ್ದಾರೆ. ಕರ್ನಾಟಕದಾದ್ಯಂತ ಶಿಕ್ಷಣ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಹೆಸರಾಂತ ಪ್ರೇರಕ ಭಾಷಣಕಾರ ಮತ್ತು ತರಬೇತುದಾರರಾಗಿದ್ದಾರೆ.
ಇವರ ಸಮಾಜ ಸೇವೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು.
2016 ರಲ್ಲಿ, ಅವರು ದಲಿತ ಕ್ರಿಶ್ಚಿಯನ್ ವುಮೆನ್ ಫಾರ್ ಚೇಂಜ್ನ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಆಯೋಗಕ್ಕೆ KRCBC ಯು ಮೊದಲ ಮಹಿಳಾ ಜಂಟಿ ಕಾರ್ಯದರ್ಶಿಯಾಗಿ ನೇಮಿಸಿದ್ದು ಸಂತಸ ತಂದಿದೆ.
ನೊಂದ, ಬಡ ಸಮುದಾಯದ ಜನರಿಗೆ ನ್ಯಾಯ, ಘನತೆ ತಂದುಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ‘ಕನ್ನಡ ಧ್ವನಿ’ ಜೊತೆ ಮಾತನಾಡುತ್ತಾ ಹೇಳಿದರು.