*ಕಿರುಕುಳ ನೀಡುವುದಕ್ಕೂ ಒಂದು ಮಿತಿ ಇರಬೇಕು : ವಿನಯ್ ಕುಲಕರ್ಣಿ*/ *ಐಶ್ವರ್ಯ ಗೌಡ ಜೊತೆ ನನ್ನ ಯಾವುದೇ ವ್ಯವಹಾರವಿಲ್ಲ*
ಬೆಂಗಳೂರು: ಬಹುಕೋಟಿ ಚಿನ್ನ ವಂಚನೆಯ ಪ್ರಕರಣದಲ್ಲಿ ಇ.ಡಿ ದಾಳಿಯ ಹಿಂದೆ ಕಾಣದ ಕೈಗಳಿದ್ದು, ತಮ್ಮ ಮೇಲೆ ಯಾವ್ಯಾವ ಪ್ರಕರಣ ದಾಖಲಿಸಬಹುದೋ ಅವೆಲ್ಲವನ್ನೂ ದಾಖಲಿಸಿ ಮುಗಿಸಿದ್ದಾರೆ. ಇದರಲ್ಲಿ ದೊಡ್ಡ ರಾಜಕೀಯ ಷಡ್ಯಂತ್ರ ಇದೆ ಎಂದು ಮಾಜಿ ಸಚಿವ, ಧಾರವಾಡ ಗ್ರಾಮೀಣ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಇ.ಡಿ ಅಧಿಕಾರಿಗಳ ಮ್ಯಾರಥಾನ್ ಪರಿಶೀಲನೆ ಮುಗಿದಮೇಲೆ ಮಾತನಾಡಿದ ಅವರು,
ಸತ್ಯಮೇವ ಜಯತೆ ಎಂಬ ತತ್ವದಲ್ಲಿ ನಂಬಿಕೆ ಇಟ್ಟ ಕೃಷಿಕ ನಾನು. ದಾಖಲೆಗಳನ್ನು ಇಟ್ಟುಕೊಳ್ಳುವಂಥಹ
ದೊಡ್ಡ ವ್ಯವಹಾರಗಳೂ ನನ್ನವು ಇಲ್ಲ. ಕಿರುಕುಳ ಕೊಡುವುದಕ್ಕೂ ಒಂದು ಮಿತಿ ಬೇಡವೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇ.ಡಿಯವರು ಬಂದಿದ್ದು ಒಂದಕ್ಕೆ, ಪರಿಶೀಲನೆ ಮಾಡುತ್ತಿರುವುದು ಇನ್ನೊಂದು. ನನ್ನ ವಿರುದ್ಧದ ಷಡ್ಯಂತ್ರ ಇಂದು, ನಿನ್ನೆಯದ್ದಲ್ಲ. ನಾನೋರ್ವ ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಜನರನ್ನು ಭೇಟಿಯಾಗಲು ಆಗುತ್ತಿಲ್ಲ. ನನಗೆ ನೀಡುತ್ತಿರುವ ಕಿರುಕುಳ ಮುಂದುವರೆದಿದೆ.
ಕಿರುಕುಳ ಕೊಡುವುದಕ್ಕೂ ಒಂದು ಮಿತಿಯಿರಬೇಕು. ಅಧಿಕಾರವಿದೆ ಎಂದು ಇ ಡಿ ಈ ರೀತಿ ಬಳಸಿಕೊಳ್ಳುತ್ತಿರುವುದು ನಿಜವಾಗಿಯೂ ನೋವಿನ ಸಂಗತಿ ಎಂದು ಮನದಾಳದ ಬೇಸರ ಹೊರ ಹಾಕಿದರು.
“ಐಶ್ವರ್ಯಾ ಗೌಡ ಜೊತೆ ನನ್ನ ಯಾವ ವ್ಯವಹಾರವೂ ಇಲ್ಲ, “ಹಣದ ವರ್ಗಾವಣೆಯೂ ಆಗಿಲ್ಲ. ಮಂಜುಳಾ ಪಾಟೀಲ್ ಮತ್ತು ಐಶ್ವರ್ಯಾ ಗೌಡ ನಡುವೆ ನಾನು ರಾಜಿ ಸಂಧಾನ ಮಾಡಿಸಿಲ್ಲ.
ಕೆಲ ತಿಂಗಳ ಹಿಂದೆ ಪ್ರಕರಣ ದಾಖಲಾದ ನಂತರ ಪರಿಚಯವಷ್ಟೇ . ಪ್ರಕರಣ ಮುಂದುವರೆಸುವುದು ಬೇಡ, ನನ್ನ ಹಣ ಕೊಡಿಸಿ ಎಂದು ಬಂದಾಗ ಕರೆದು ವಿಚಾರಿಸಿದ್ದೆ. ಅವರವರ ನಡುವೆ ಮಾತುಕತೆ ಸರಿ ಹೋಗಲಿಲ್ಲವಂತೆ.ಇಷ್ಟು ಮಾತ್ರ ನನಗೆ ಗೊತ್ತು. ಯಾರಿಗೆ ಮೋಸ ಮಾಡಿದರೂ ತಪ್ಪೇ” ಎಂದು ವಿನಯ್ ಹೇಳಿದರು.
ಇಡಿ ಇಲಾಖೆ ಸತತ 20 ಗಂಟೆಗಳಿಗೂ ಹೆಚ್ಚು ಕಾಲ ಐಶ್ವರ್ಯ ಗೌಡ ಹಾಗೂ ವಿನಯ್ ಕುಲಕರ್ಣಿ ನಿವಾಸದಲ್ಲಿ ಪರಿಶೀಲನೆ ನಡೆಸಿತ್ತು.ಅಲ್ಲದೆ ವಿನಯ್ ಕುಲಕರ್ಣಿ ವಶಕ್ಕೆ ಪಡೆಯಲಿದ್ದಾರೆ ಎಂಬ ಗುಸು ಗುಸು ದಟ್ಟವಾಗಿದೆ. ಈಗಾಗಲೇ ಕಿಂಗ್ ಪಿನ್ ಐಶ್ವರ್ಯ ಗೌಡಳನ್ನು ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.