*ನೆಟ್ಟಿಗರಿಂದ ಪಿಎಸ್ಐ ಅನ್ನಪೂರ್ಣ ಗೆ ಭದ್ರಕಾಳಿಯೆಂದು ಪ್ರಶಂಸೆ* / *ಕೊಲೆಯಾದ ಬಾಲಕಿ ನಿವಾಸದಲ್ಲಿ ಮುಗಿಲು ಮುಟ್ಟಿದ ಆಕ್ರಂದನ* / *ಸಚಿವ ಲಾಡ್ ಭೇಟಿ – ಸಾಂತ್ವನ*
ಹುಬ್ಬಳ್ಳಿ: ವಾಣಿಜ್ಯ ರಾಜಧಾನಿಯಲ್ಲಿ ನಡೆದ ಐದು ವರ್ಷದ ಬಾಲಕಿಯ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದ ಆರೋಪಿಯಾದ ಬಿಹಾರ ಮೂಲದ ರಿತೇಶ್ ಕುಮಾರ ಎನ್ಕೌಂಟರ್ ಮಾಡಿದ ಅಶೋಕ್ ನಗರ ಠಾಣಾ ಪಿಎಸ್ಐ ಅನ್ನಪೂರ್ಣ ಅವರಿಗೆ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆಯಲ್ಲದೇ, ಪ್ರಕರಣದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಖಡಕ್ ನಡೆಯ ಬಗ್ಗೆ ಸಾರ್ವತ್ರಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ 2017 ನೇ ಬ್ಯಾಚ್ ಅಧಿಕಾರಿ ಅನ್ನಪೂರ್ಣ ಆರ್ ಅವರೂ ಕಾಮ ಪಿಶಾಚಿ ರಿತೇಶ್ ಕುಮಾರ್ ಎನ್ಕೌಂಟರ್ ಘಟನೆಯಲ್ಲಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆಕೆಯ ದಿಟ್ಟತನ ಇಡಿ ರಾಜ್ಯವೇ ಕೊಂಡಾಡುತ್ತಿದೆ.
ಅರೋಪಿ ರಿತೀಶ ಕುಮಾರ್ ಓಡಿ ಹೋಗುತ್ತಿದ್ದಾಗ ಮೊದಲು ಮೂರು ಸುತ್ತು ಗುಂಡು ಹಾರಿಸಿ, ಬಳಿಕ ಆರೋಪಿಯು ಅದಕ್ಕೆ ಬೆದರದೇ ಕಲ್ಲು ತೂರಾಟ ನಡೆಸಿದಾಗ ಆತನ ಕಾಲಿಗೆ ಹಾಗೂ ಬೆನ್ನಿಗೆ ಗುಂಡು ಹೊಡೆದು ಲೇಡಿ ಸಿಂಗಮ್ ಬಿರುದಿಗೆ ಪಾತ್ರರಾಗಿದ್ದು, ಇವರು ಹುಬ್ಬಳ್ಳಿ ಶಹರ ಠಾಣೆ, ಸಿಇಎನ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಈ ಅಧಿಕಾರಿಯನ್ನು “ಭದ್ರಕಾಳಿ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಬಾಲಕಿಯ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಸಬ್ ಜೈ ಲ್ ಸಮೀಪದ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಹ ಇಂದು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕುರುಬ ಸಮುದಾಯದ ಸಂಪ್ರದಾಯದ ಪ್ರಕಾರ ಅಂತಿಮ ಪೂಜೆ, ಅಂತ್ಯ ಸಂಸ್ಕಾರ ನಡೆಸಲಾಯಿತು.
ಸಂಜೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಆಗಮಿಸಿ ಬಾಲಕಿ ಕುಟುಂಬದ ಸದಸ್ಯರನ್ನು ಭೇಟಿಯಾಗಲಿದ್ದಾರೆ.