*ಚಾಕು ಇರಿತ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಲೀಕ್ ವಶಕ್ಕೆ* / *ಪಿಎಸ್ಐ ಸಹಿತ ಇಬ್ಬರಿಗೆ ಗಾಯ*
ಹುಬ್ಬಳ್ಳಿ: ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ
ಮಲೀಕ್ ಅದೋನಿಯನ್ನು ಇಂದು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಬಂಧಿಸಲ ಮುಂದಾದಾಗ, ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಅಧೋನಿಯ ಕಾಲಿಗೆ ಗುಂಡು ಹೊಡೆದಿದ್ದಾರೆ.
ಹೆಗ್ಗೇರಿ ನಿವಾಸಿ ಅಧೋನಿ ಪಿಎಸ್ಐ ವಿಶ್ವನಾಥ ಆಲದಮಟ್ಟಿ ಮತ್ತು ಕಾನ್ಸ್ಟೆಬಲ್ ಶರೀಫ ನದಾಫ್ ಮೇಲೆ ಹಲ್ಲೆ ಮಾಡಿದ್ದು ಇಬ್ಬರೂ ಗಾಯಗೊಂಡಿದ್ದಾರೆ.ಮೂವರನ್ನು ಕೆಎಂಸಿ-ಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ, ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ.
ಜನ್ನತ್ ನಗರದ ತೆಂಗಿನಕಾಯಿ ವ್ಯಾಪಾರಿ ಇರ್ಫಾನ್ ಸುಂಕದ ಅವರು, ರೌಡಿ ಶೀಟರ್ ಮಲೀಕ್ ಅದೋನಿಗೆ ೪ ಲಕ್ಷ ಸಾಲ ನೀಡಿದ್ದರು. ಅದನ್ನು ಕೇಳಲು ಅವರು ಸೋಮವಾರ ಸಂಜೆ ಹೆಗ್ಗೇರಿ ಬಳಿ ಹೋದಾಗ ಒಂಬತ್ತು ಮಂದಿಯ ಗುಂಪು, ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿತ್ತು. ನಂತರ ಮಲೀಕ್ ಅವರ ಎಡಗೈಗೆ ಮೂರು ಬಾರಿ ಚಾಕು ಇರಿದಿದ್ದ. ಮತ್ತೊಬ್ಬ ಆರೋಪಿ ವಾಸೀಮ್ ತಲ್ವಾರನಿಂದ ಕೊಲೆಗೆ ಯತ್ನಿಸಿದ್ದ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಿನ್ನೆ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪೊಲೀಸರು ಇಂದು ಬೆಳಿಗ್ಗೆ ಪ್ರಮುಖ ಆರೋಪಿ ಮಲೀಕ್ ವಶಕ್ಕೆ ಪಡೆಯಲು ರಾಘವೇಂದ್ರ ಕಾಲೊನಿ ಸ್ಮಶಾನ ಬಳಿ ತೆರಳಿದ್ದಾರೆ. ಆಗ ಖಾಕಿಗಳ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಗುಂಡು ಹಾರಿಸಿ ಬಂಧಿಸಿದ್ದಾರೆಂದು ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.