*ಬಿಡನಾಳ ರುದ್ರಭೂಮಿಯಲ್ಲಿ ಕೋರ್ಟ್ ಆದೇಶದಂತೆ ತಹಶೀಲ್ದಾರ್, ಸಿಐಡಿ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ*
ಹುಬ್ಬಳ್ಳಿ: ಐದು ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ಮಾಡಿ ಹತ್ಯೆ ಮಾಡಿ ಪೊಲೀಸರ ಗುಂಡೇಟಿಗೆ ಬಲಿಯಾದ ಬಿಹಾರ ಮೂಲದ ರಿತೇಶ್ ಶವವನ್ನು ಇಂದು ಮಣ್ಣು ಮಾಡಲಾಯಿತು .
ಹಂತಕ ರಿತೇಶ್ ಕುಮಾರನ ಅಂತ್ಯಸಂಸ್ಕಾರವನ್ನು ತಹಶೀಲ್ದಾರರು ಹಾಗೂ ಸಿಐಡಿ ಅಧಿಕಾರಿಗಳ ಸಮ್ಮುಖದಲ್ಲಿ ಬಿಡ್ನಾಳದ ರುದ್ರಭೂಮಿಯಲ್ಲಿ ಮಾಡಲಾಯಿತು . ಕಳೆದ ತಿಂಗಳ ದಿನಾಂಕ 13 ರಂದು ಅಶೋಕ್ ನಗರ ವ್ಯಾಪ್ತಿಯಲ್ಲಿ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯವೆಸಗಿ ಹತ್ಯೆ ಮಾಡಿದ್ದ ಹಂತಕ ರಿತೇಶ್ ಕುಮಾರ, ಅಂದೇ ಎನ್ ಕೌಂಟರ್ ಗೆ ಬಲಿಯಾಗಿದ್ದ.
ಹಂತಕನ ಕುಟುಂಬಸ್ಥರ ಪತ್ತೆಗೆ ವ್ಯಾಪಕ ಹುಡುಕಾಟ ನಡೆಸಿ ಯಾರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನದ ಮೇರೆಗೆ ಅಂತ್ಯ ಸಂಸ್ಕಾರನನ್ನು ಮಹಾನಗರ ಪಾಲಿಕೆಯ ವಾಹನದಲ್ಲಿ ಶವವನ್ನು ತೆಗೆದುಕೊಂಡು ಬಂದು ನೆರವೇರಿಸಲಾಯಿತು.ರಿತೇಶ ಶವವನ್ನು ಸುಡದೇ ಮಣ್ಣು ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು.
ರಿತೇಶ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಶಹರ ತಾಲೂಕು ದಂಡಾಧಿಕಾರಿ ಕಲಗೌಡ ಪಾಟೀಲ ಅಂತ್ಯಕ್ರಿಯೆ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.ಕೋರ್ಟ್ ನಿರ್ದೇಶನದ ಮೇಲೆ ಮಣ್ಣು ಮಾಡಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಹೆಚ್ಚಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಿಐಡಿ ಎಸ್.ಪಿ, ಉತ್ತರ ಎಸಿಪಿ ಶಿವಪ್ರಸಾದ್ ನಾಯಕ, ಪಾಲಿಕೆ ಅಧಿಕಾರಿಗಳು ಸೇರಿದಂತೆ ಇತರರು ಈ ವೇಳೆ ಇದ್ದರು.