*ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ*
ಬಾಗಲಕೋಟೆ : ವರನು ವಧುವಿನ ಕೊರಳಿಗೆ ತಾಳಿ ಕಟ್ಟಿದ ಅರ್ಧ ಗಂಟೆಯಲ್ಲೇ ತೀವ್ರ ಹೃದಯಾಘಾತದಿಂದ ಕಲ್ಯಾಣ ಮಂಟಪದಲ್ಲಿಯೇ ಮೃತಪಟ್ಟಿರುವ ಘಟನೆ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಇಂದು ನಡೆದಿದೆ.
ನವ ವಧುವಿನ ಅರಿಷಿಣ ಇನ್ನೂ ಆರುವ ಮೊದಲೇ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು,ರಾಜ್ಯ ಸೈಕ್ಲಿಂಗ್ ಅಸೋಶಿಯೇಶನ್ನಿನ ಕಾರ್ಯದರ್ಶಿಯಾಗಿರುವ ಶ್ರೀಶೈಲ ಕುರಣಿ ಅವರ ಪುತ್ರ ಪ್ರವೀಣ ಎಂಬವರೆ ಮೃತಪಟ್ಟವರಾಗಿದ್ದಾರೆ.
ಪ್ರವೀಣ ಕುರಣಿ (25) ಅವರ ವಿವಾಹ ಸ್ಥಳೀಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಮುಹೂರ್ತಕ್ಕೆ ಸರಿಯಾಗಿ ವಧುವಿಗೆ ತಾಳಿ ಕಟ್ಟಿ ಅಕ್ಷತಾ ಕಾರ್ಯ ನಡೆದು 15 ನಿಮಿಷಗಳ ನಂತರ ವರ ಪ್ರವೀಣಗೆ ಹೃದಯಾಘಾತವಾಗಿ ಮದುವೆ ಮಂಟಪದಲ್ಲಿಯೇ ಕುಸಿದು ಸಾವನ್ನಪ್ಪಿದರು.
ವಿವಾಹ ಸಮಾರಂಭಕ್ಕೆ ಆಗಮಿಸಿ ಸಂಭ್ರಮ ಪಡುತ್ತಿದ್ದ ಬಂಧು, ಬಾಂಧವರು, ಹಿತೈಷಿಗಳು ಕಣ್ಣು ಮುಂದೆಯೇ ನೋಡ ನೋಡುತ್ತಿದ್ದಂತೆ ಪ್ರವೀಣ ಸಾವನ್ನಪ್ಪಿದ್ದರು.
ತದನಂತರ ಮದುವೆ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿತು. ಜನ ಮಮ್ಮಲ ಮರಗಿದರು. ನೂರಾರು ಹೊಂಗನಸು ಹೊತ್ತು ನವಜೀವನಕ್ಕೆ ಕಾಲಿಡುವ ಮೊದಲೇ ಪ್ರವೀಣ
ಬದುಕಿಗೆ ವಿದಾಯ ಹೇಳಿದ್ದು ವಿಧಿಯಾಟದ ಮುಂದೆ ಎಲ್ಲವೂ ಗೌಣ ಎಂಬಂತಾಗಿತ್ತು.