*ಖುಲ್ಲಾ ಜಾಗೆ ಆಕರಣೆ ಶುಲ್ಕದಲ್ಲಿಯೂ ಶೇ.50 ರಿಯಾಯ್ತಿ*/*ತೆರಿಗೆ ತುಂಬುವ*
*ಅವಧಿ ಮೇ ಅಂತ್ಯದವರೆಗೆ*ವಿಸ್ತರಣೆ / ನೇರವಾಗಿ ಅಖಾಡಕ್ಕೆ ಇಳಿದು ಯಶಸ್ವಿಯಾದ ಕೆಸಿಸಿಐ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರದ ಆಸ್ತಿ ಕರ ಏರಿಕೆ ಬಿಸಿ ವಿರುದ್ಧ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೇರವಾಗಿ ಅಖಾಡಕ್ಕೆ ಇಳಿದು ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದ ಪರಿಣಾಮ ಸದ್ಯದ ಮಟ್ಟಿಗೆ ಅವಳಿನಗರದ ಜನತೆ ದಿಢೀರ್ ಶಾಕ್ ನಿಂದ ಪಾರಾಗಿದ್ದಾರೆ.
ಇಂದು ದಿ.21ರಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರ ಜತೆ ಕರ ಹೆಚ್ಚಳ ಕುರಿತು ಕೂಲಂಕುಷವಾಗಿ ಚರ್ಚಿಸಿದ ನಂತರ ಪ್ರಥಮ ಪ್ರಜೆ ರಾಮಣ್ಣ ಬಡಿಗೇರ ಆಸ್ತಿ ಕರದ ನಿರ್ಣಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಕಟಿಸಿದರು.
ಪ್ರಮುಖವಾಗಿ ಯುಜಿಡಿ ಲೈನ್ ಶುಲ್ಕವನ್ನು ಸಂಪೂರ್ಣ ತೆಗೆದು ಹಾಕಲಾಗಿದೆ.ಖುಲ್ಲಾ ಜಾಗೆಯ ಮೇಲೆ ಆಕರಣೆ ಮಾಡುತ್ತಿರುವ ಆಸ್ತಿ ತೆರಿಗೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. (ಅಂದರೆ 0.50 ಪೈಸೆಯಿಂದ 0.25 ಪೈಸೆಗೆ ಇಳಿಕೆ)
ಎಸ್ಡಬ್ಲ್ಯೂಎಂ ಮೇಲಿನ ಸೆಸ್ನ್ನು ಸಂಪೂರ್ಣ ತೆಗೆದು ಹಾಕಲಾಗಿದೆ. ರಿಯಾಯಿತಿ ದರದ ಮೇಲೆ ತುಂಬುವ ಆಸ್ತಿ ತೆರಿಗೆ ಅವಧಿಯನ್ನು 2025 ಮೇ ತಿಂಗಳು ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದರು.
ಅಲ್ಲದೆ ಬೇರೆ ಬೇರೆ ವಲಯಗಳಲ್ಲಿ ಆಸ್ತಿ ಹೊಂದಿದಲ್ಲಿ ಬೇರೆ ಬೇರೆ ಚಲೊನ್ ಮೂಲಕ ಪ್ರತ್ಯೇಕವಾಗಿ ಪಾವತಿಸಬೇಕಿತ್ತು. ಅದರ ಬದಲಿಗೆ ಒಂದೇ ಕಡೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಸಭಾನಾಯಕ ವೀರಣ್ಣ ಸವಡಿ, ವಿಪಕ್ಷ ನಾಯಕ ರಾಜಶೇಖರ್ ಮುಕ್ತಿ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಸುವರ್ಣ ಕಲಕುಂಟಲ ಇತರರು ಇದ್ದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ.ಸಂಶಿಮಠ, ಗೌರವ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ, ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಎಚ್.ಸಿಂಘಿ, ಮಾಜಿ ಅಧ್ಯಕ್ಷರುಗಳಾದ ಶಂಕರಣ್ಣ ಮುನವಳ್ಳಿ, ರಮೇಶ ಎ. ಪಾಟೀಲ, ವಿನಯ ಜವಳಿ ಸಹ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಪಾಲಿಕೆ ಜತೆ
ನಡೆಸಿದ ಚರ್ಚೆಯಲ್ಲಿ ಆಯುಕ್ತರಾದ ರುದ್ರೇಶ ಫಾಳೆ, ಮಹಾಪೌರ ರಾಮಣ್ಣ ಬಡಿಗೇರ, ಉಪ ಮಹಾಪೌರೆ ಶ್ರೀಮತಿ ದುಗಮ್ಮ ಬಿಜವಾಡ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ ಹಾಗೂ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು .ನಮ್ಮ ಬಹುತೇಕ ಬೇಡಿಕೆಗೆ ಪಾಲಿಕೆ ಸ್ಪಂದಿಸಿದ್ದು ತೆರಿಗೆದಾರರು 2-3 ದಿನಗಳಲ್ಲಿ ಪಾಲಿಕೆಯು ನೀಡುವ ಪರಿಷ್ಕೃತ ಆಸ್ತಿ ತೆರಿಗೆ ಪಾವತಿಸುವ ಚಲನನ್ನು ಪಡೆದುಕೊಂಡು ನಂತರ ಆಸ್ತಿ ತೆರಿಗೆ ಪಾವತಿಸಬೇಕೆಂದು ಮನವಿ ಮಾಡಿದರು.