ಹುಬ್ಬಳ್ಳಿ : ಬಹಳ ವರ್ಷಗಳಿಂದ ಕಗ್ಗಂಟಾಗಿಯೇ ಉಳಿದಿರುವ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರೈಲ್ವೆ ಮಂತ್ರಿ ಸೋಮಣ್ಣ ನೇತೃತ್ವದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಭೆ ನಡೆಸಿ ಕಾರ್ಯತಂತ್ರ ರೂಪಿಸಲು ಇಂದು ಇಲ್ಲಿಯ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಉತ್ತರ ಕನ್ನಡ ಮತ್ತು ಹುಬ್ಬಳ್ಳಿ ಭಾಗದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಹುಬ್ಬಳ್ಳಿ- ಅಂಕೋಲಾ ರೈಲ್ವೇ ಯೋಜನೆಯ ಜಾರಿಗೆ ಇರುವ ತೊಡಕುಗಳು ಮತ್ತು ಸಾಧ್ಯತೆಗಳ ಕುರಿತಾಗಿ ವಿಸ್ತ್ರತ ಚರ್ಚೆ ನಡೆಸಿ, ಯೋಜನೆ ಜಾರಿ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು.
ಕೇಂದ್ರ ಮಂತ್ರಿ ಪ್ರಲ್ಹಾದ ಜೋಶಿ ಮತ್ತು ಸಂಬಂಧಿತ ಸಂಸದರನ್ನು ಸಂಪರ್ಕಿಸಿ ಚರ್ಚೆ ನಡೆಸುವುದು ಮತ್ತು ಹುಬ್ಬಳ್ಳಿಯಲ್ಲಿ ರೈಲ್ವೆ ಮಂತ್ರಿ ಸೋಮಣ್ಣ ನೇತೃತ್ವದಲ್ಲಿ ಸಭೆ ನಡೆಸಿ ಕೇಂದ್ರ- ರಾಜ್ಯ ಸರ್ಕಾರಕ್ಕೆ ಯೋಜನೆಯ ತ್ವರಿತ ಜಾರಿಯ ಕುರಿತಾಗಿ ಮನವರಿಕೆ ಮಾಡಲು ನಿರ್ಧಾರಿಸಲಾಯಿತು.
ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಮತ್ತು ರೈಲ್ವೆ ಯೋಜನೆಯ ಹೋರಾಟಗಾರ ವಸಂತ ಲದವಾ, ಯೋಜನೆಯ ಜಾರಿಗೆ ಹಿಂದಿನಿಂದಲೂ ನಡೆದ ಪ್ರಯತ್ನ ಮತ್ತು ಎದುರಾದ ಅಡೆತಡೆ ವಿವರಿಸಿದರಲ್ಲದೇ ಸರ್ಕಾರದ ಮೇಲೆ ಪಕ್ಷಾತೀತವಾಗಿ ಪ್ರಬಲ ಒತ್ತಡ ಹೇರಿದರೆ ಯೋಜನೆ ಜಾರಿ ಮಾಡಬಹುದು ಎಂದು ಹೇಳಿದರು.
ರೈಲ್ವೆ ಬಳಕೆದಾರರ ವಲಯ ಸಮಿತಿಯ ಸದಸ್ಯ ಮಹೇಂದ್ರ ಸಿಂಘಿ ಮಾತನಾಡಿ, ನಮ್ಮ ನಿಯೋಗದ ವತಿಯಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ಜನರಲ್ ಮ್ಯಾನೇಜರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸೋಣ. ನಂತರದಲ್ಲಿ ಮುಂದಿನ ಪ್ರಯತ್ನದ ಕಾರ್ಯಸೂಚಿ ರೂಪಿಸೋಣ ಎಂದು ಸಲಹೆ ನೀಡಿದರು.
ಕರಾವಳಿ ಮುಂಜಾವು ಸಂಪಾದಕ ಗಂಗಾಧರ ಹಿರೇಗುತ್ತಿ ಮಾತನಾಡಿ, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿ ಈ ಭಾಗದ ಅಭಿವೃದ್ದಿಗೆ ತೀರಾ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ- ಹುಬ್ಬಳ್ಳಿ ಭಾಗದ ಪ್ರಮುಖರು ಮತ್ತೊಮ್ಮೆ ಸಂಘಟಿತ ಪ್ರಯತ್ನ ನಡೆಸೋಣ ಎಂದರು.
ಉ.ಕ ಜಿಲ್ಲಾ ನಾಗರಿಕ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ನ್ಯಾಯಾಲಯದಿಂದ ಯೋಜನೆಗೆ ಇರುವ ತಡೆ ನಿವಾರಣೆ ಆಗಿರುವುದರಿಂದ ಯೋಜನೆ ಜಾರಿಗೆ ಸರ್ಕಾರದ ಮಟ್ಟದಲ್ಲಿ ಇಚ್ಛಾಶಕ್ತಿ ಪ್ರಕಟವಾಗಬೇಕಿದೆ ಎಂದರು.
ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಸಂಶಿಮಠ, ಕಾರ್ಯದರ್ಶಿ ರವೀಂದ್ರ ಬಳಿಗಾರ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರದ ಭರವಸೆ ನೀಡಿದರು.
ಉ.ಕ ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಉಪಾಧ್ಯಕ್ಷ ವೆಂಟು ಮಾಸ್ತರ ಶೀಳ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಪ್ರಮುಖರಾದ ಡಾ. ಮಹೇಶ ಗೋಳಿಕಟ್ಟೆ, ಪ್ರೀತಂ ಮಾಸೂರಕರ್ , ರವಿ ಟಿ.ನಾಯ್ಕ, ರಾಜಗೋಪಾಲ ಅಡಿ, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಕಾರ್ಯದರ್ಶಿ ವಿಠ್ಠಲದಾಸ ಕಾಮತ್ ಚರ್ಚೆಯಲ್ಲಿ ಪಾಲ್ಗೊಂಡರು.
*ಯೋಜನೆಗೆ ಅಡ್ಡಿಯಾಗದು*
ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಗೆ ಇರುವ ಕಾನೂನು ತೊಡಕು ಬಹುತೇಕ ಮುಗಿದಿದೆ. ನ್ಯಾಯಾಲಯ ಈಗಾಗಲೇ ರಾಹೆ, ರಾಜ್ಯ ಹೆದ್ದಾರಿ ಗುಂಟ ಕಡಿಮೆ ಪರಿಸರಕ್ಕೆ ಹಾನಿಯಾಗುವಂತೆ ಮತ್ತೊಮ್ಮೆ ಸರ್ವೇ ನಡೆಸಿ ವರದಿ ಸಿದ್ಧಪಡಿಸಲು ಸೂಚಿಸಿದೆ. ಈ ವರದಿಗೆ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಸಂರಕ್ಷಣಾ ಮಂಡಳಿಯಿಂದ ಒಪ್ಪಿಗೆ ಸಿಕ್ಕಲ್ಲಿ ಯೋಜನೆ ಜಾರಿಯಾಗಲು ಅಡ್ಡಿಯಿಲ್ಲ. ಕೇಂದ್ರ – ರಾಜ್ಯ ಸರ್ಕಾರಗಳು ಯೋಜನಾಪರ ಇರುವ ಕಾರಣ ತೊಂದರೆಯಾಗದು ಎಂದು ಯೋಜನೆಯ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ನ್ಯಾಯವಾದಿ ಅಕ್ಷಯ ಕೊಲ್ಲೆ ಮಾಹಿತಿ ನೀಡಿದರು.