*ನೂತರ ಆಯುಕ್ತ ಡಾ.ಘಾಳಿ ಅಧಿಕಾರ ಸ್ವೀಕಾರ*
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಡಾ.ರುದೇಶ ಘಾಳಿ ಸೋಮವಾರ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಹೊಸ ಗಾಳಿ ಬೀಸಿದಂತಾಗಿದೆ.
ಇದುವರೆಗೆ ಆಯುಕ್ತರಾಗಿದ್ದ ಡಾ.ಈಶ್ವರ ಉಳ್ಳಾಗಡ್ಡಿ ಅವರ ಸ್ಥಾನದಲ್ಲಿ ಡಾ.ಘಾಳಿ ನಿಯುಕ್ತಿಗೊಂಡಿದ್ದು, ಈ ಮೊದಲು ಇವರು ಹು-ಧಾ ಸ್ಮಾರ್ಟ್ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಅಧಿಕಾರ ಸ್ವೀಕರಿಸಿದ ಕೂಡಲೇ ಅಧಿಕಾರ ವಹಿಸಿಕೊಂಡ ಕೂಡಲೇ ನೂತನ ಆಯುಕ್ತರು ಮಹಾನಗರದ ಪ್ರಗತಿಯಲ್ಲಿರುವ ನಿರಂತರ ನೀರು ಸರಬರಾಜು ರೋಜನೆಯ ಪ್ರಗತಿ ಪರಿಶಿಲನೆ ಅಲ್ಲದೇ ವಿವಿಧ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡಲು ಎಲ್ ಆಂಡ್ ಟಿ ನಿರ್ವಾಹಕರಿಗೆ ಸೂಚಿಸಿದರಲ್ಲದೇ ಎಲ್ಲ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದರು.
ಅಧಿಕಾರ ಸ್ವೀಕರಿಸಿದ ಮರುದಿನವೇ ಇಂದು ಪಾಲಿಕೆಯ ಮಾಸಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸುವಂತಾಗಿದೆ. ಹಿಂದಿನ ಆಯುಕ್ತರ ಕೆಲ ಧೋರಣೆ ಬಹುತೇಕ ಆಡಳಿತ ಮತ್ತು ವಿಪಕ್ಷ ಸದಸ್ಯರಿಗೆ ಅಪಥ್ಯವಾಗಿತ್ತಲ್ಲದೇ ನೂತನ ಆಯುಕ್ತರು ಸ್ಪಂಧಿಸುವರು, ಯಾವ ರೀತಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವರು ಎಂಬುದು ಕುತೂಹಲ ಕೆರಳಿಸಿದೆ.
ಸಾರ್ವಜನಿಕ ಸ್ನೇಹಿ ಅಧಿಕಾರಿ ಎಂದು ಕರೆಸಿಕೊಳ್ಳುವ ಡಾ.ಘಾಳಿ ಅವರು ಈ ಮೊದಲು ಶಾಲಾ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತರಾಗುವರೆಂಬ ವದಂತಿ ಹಬ್ಬಿತ್ತು. ಆದರೆ ಅಚ್ಚರಿಯೆಂಬಂತೆ ಪಾಲಿಕೆ ಆಯುಕ್ತರಾಗಿ ನೇಮಕಗೊಂಡಿದ್ದಾರೆ.