*ಆಂಗ್ಲರ ನೆಲದಲ್ಲಿ ಕರ್ನಾಟಕ ಪೊಲೀಸ್ ಬಾವುಟ ಹಾರಿಸಿದ ಚನ್ನಣ್ಣವರ್ / ಕೆಎಂಸಿ ವಿದ್ಯಾರ್ಥಿ ಸಹಿತ ಆರು ಸದಸ್ಯರ ತಂಡದಿಂದ ಅಪರೂಪದ ಸಾಧನೆ*
ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮುರುಗೇಶ್ ಚನ್ನಣ್ಣವರ ಕರ್ನಾಟಕ ಪೊಲೀಸ್ ಧ್ವಜವನ್ನು ಆಂಗ್ಲ ನೆಲದಲ್ಲಿ ಹಾರಿಸಿ ಕೀರ್ತಿ ತಂದಿದ್ದಾರಲ್ಲದೇ, ಇವರನ್ನೊಳಗೊಂಡ 6 ಜನರ ಪ್ರೈಡ್ ಆಫ್ ಇಂಡಿಯಾ ತಂಡ ಭಾರತದ ತ್ರಿವರ್ಣ ಬಾವುಟವನ್ನು ಮುಗಿಲೆತ್ತರಕ್ಕೆ ಎತ್ತಿ ಹಿಡಿದು ಅಪರೂಪದ ಸಾಧನೆ ಮಾಡಿದೆ.
43 ಕಿ.ಮೀ. ಉದ್ದದ ಇಂಗ್ಲಿಷ್ ಕಾಲುವೆಯನ್ನು 13 ಗಂಟೆ 37 ನಿಮಿಷಗಳಲ್ಲಿ ರಿಲೇ ಈಜಿದ ಚನ್ನಣ್ಣವರ ಅಲ್ಲದೆ ಹುಬ್ಬಳ್ಳಿಯ ಕೆಎಂಸಿ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ, ಹರಿಯಾಣ ದ ಐಎಎಸ್ ಅಧಿಕಾರಿ ದೀಪಕ್ ಬಾಬುಲಾಲ ಕಾರವಾ, ವಿಕಲಾಂಗ ಈಜುಗಾರರಾದ ಗಣೇಶ್ ಬಾಲಾಜ, ರಾಜಬೀರ, ಮಹಾರಾಷ್ಟ್ರದ ಬಿಬಿಎ ವಿದ್ಯಾರ್ಥಿ ಮಾನವ ರಾಜೇಶ್ ಮೋರೆ ತಂಡ ಸ್ಮರಣೀಯ ಸಾಧನೆ ಮಾಡಿದೆ.
ಇಂಗ್ಲೆಂಡ್ನ ಸ್ಯಾಮ್ಥೈರ್ ಹೊಯ್ ದಡದಿಂದ ಆರಂಭವಾದ ಈ ಈಜು, ಫ್ರಾನ್ಸ್ನ ವಿಸ್ಸೆಂಟ್ ಬೀಚ್ನಲ್ಲಿ ಮುಕ್ತಾಯಾಗಿದ್ದು,
ಇಂಗ್ಲಿಷ್ ಚಾನೆಲ್ ಅಸೋಸಿಯೇಶನ್ ನಿಯಮದಂತೆ ಈ 6 ಈಜುಗಾರರು ಒಬ್ಬರ ನಂತರ ಒಬ್ಬರಂತೆ ಮೇಲ್ವಿಚಾರಕ ರಾಬ್ ಸ್ಮಿಥ್, ಪೈಲೆಟ್ ಸ್ಟುವರ್ಟ್ ಹಾಗೂ ಪ್ರಶಾಂತ್ ಕರ್ಮಾಕರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ 13 ರಿಂದ 16 ಡಿಗ್ರಿ ಸೆಲ್ಸಿಯಸ್ನಂತರ ಚಳಿ ಲೆಕ್ಕಿಸದೆ ಮುಂಬೈಗೆ ಅಪ್ಪಳಿಸುವ ಬೃಹತ್ ಅಲೆಗಳ ನಡುವೆಯೂ ಸಾಧನೆಯ ಕಿರೀಟ ಮುಡಿಗೇರಿಸಿಕೊಂಡಿದೆ. ಭಾರತ ತಂಡ 16 ರಂದು ಬೆಳಗಿನ 2.15 ಕ್ಕೆ ಈಜು ಆರಂಭಿಸಿದ್ದು, ಮಧ್ಯಾಹ್ನ 3.52 ಕ್ಕೆ ಮುಕ್ತಾಯಗೊಳಿಸಿದೆ.
ಕೆಎಂಸಿ ವಿದ್ಯಾರ್ಥಿ ಅಮನ್ ಶಾನಭಾಗ ಅವರೊಂದಿಗೆ ಕೆಲ ತಿಂಗಳ ಹಿಂದೆ ಶ್ರೀಲಂಕಾದಿಂದ ಭಾರತದ ಧನುಷ್ಕೋಡಿಯವರೆಗೆ ರಾಮ ಸೇತು ಮೂಲಕ 28 ಕಿ.ಮೀ. ಈಜಿದ್ದ ಜನಸ್ನೇಹಿ ಅಧಿಕಾರಿ ಚನ್ನಣ್ಣವರ ಐರನ್ಮ್ಯಾನ್ ಪ್ರಶಸ್ತಿ ,ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮುಂತಾದ ಸಾಧನೆಗಳ ಮೂಲಕ ರಾಜ್ಯದ ಬೆರಳೆಣಿಕೆಯ ಖಾಕಿ ಸಾಧಕರ ಪೈಕಿ ಒಬ್ಬರಾಗಿ ಇಲಾಖೆಗೆ ಕೀರ್ತಿ ತಂದಿದ್ದಾರೆ.