*ಅನ್ನದಾತರ ನೆರವಿಗೆ ಬಂದ ಕೇಂದ್ರ ಸಚಿವರು*
ಹುಬ್ಬಳ್ಳಿ: ರೈತರಿಗೆ 10 ಲಕ್ಷ ರೂ.ವರೆಗೆ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಿಬಿಲ್ ಸ್ಕೋರ್ ಪರಿಗಣಿಸಕೂಡದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚನೆ ನೀಡಿದರು.
ಧಾರವಾಡದ ಡಿಸಿ ಕಚೇರಿಯಲ್ಲಿ ಇಂದು ಬ್ಯಾಂಕ್ ಆಫ್ ಬರೋಡಾ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ಹಾಗೂ ಸಲಹಾ ಸಮಿತಿ ಸಭೆ ಉದ್ದೇಶಿಸಿ ಸಚಿವರು ಮಾತನಾಡಿದರು.
ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳ ಬೆಲೆ ಏರಿಕೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ಇಂದು ರೈತರು ಬಹಳ ಸಂಕಷ್ಟದಲ್ಲಿದ್ದಾರೆ ಎಂಬುದನ್ನು ಬ್ಯಾಂಕ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಸಚಿವರು, ಯಾವುದೇ ಕಾರಣಕ್ಕೂ ರೈತರಿಗೆ ಮರು ಸಾಲ ನೀಡುವಲ್ಲಿ ಹಿಂಜರಿಯಬೇಡಿ ಎಂದು ನಿರ್ದೇಶನ ನೀಡಿದರು.
ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಹಾಗಾಗಿ ರೈತರಿಗೆ 10 ಲಕ್ಷ ರೂ.ವರೆಗೂ ಸಾಲ ನೀಡಲು ಯಾವುದೇ ತೊಂದರೆಯಿಲ್ಲ. ಅಲ್ಲದೇ, ಸಿಬಿಲ್ ಸ್ಕೋರ್ ಸಹ ಪರಿಗಣಿಸುವ ಅಗತ್ಯವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
*ಎಲ್ಲಾ ಬ್ಯಾಂಕ್ ಗಳಿಗೆ ಲಿಖಿತ ಸೂಚನೆ:* ತಮ್ಮ ನಿರ್ದೇಶನದಂತೆ ರೈತರಿಗೆ 10 ಲಕ್ಷ ರೂ.ವರೆಗೆ ನೀಡುವ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣಿಸದಂತೆ
ಈ ಕೂಡಲೇ ಎಲ್ಲಾ ಬ್ಯಾಂಕ್ ಗಳಿಗೆ ಲಿಖಿತ ಸೂಚನೆ ನೀಡುವುದಾಗಿ ಲೀಡ್ ಬ್ಯಾಂಕ್ ಉನ್ನತ ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಬ್ಯಾಂಕ್ ನ ನಿರ್ವಹಣಾಧಿಕಾರಿ ಪ್ರಭುದೇವ್ ಹಾಗೂ ವಿವಿಧ ಬ್ಯಾಂಕ್ ಗಳ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.
*ಲಾಲೂಪ್ರಸಾದರಿಗೂ ಸಿಕ್ಕಿತ್ತು ಬೇಲ್!! ಕೊನೆಗೆ…*
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿದೆ. ಹಿಂದೆ ಲಾಲೂ ಪ್ರಸಾದ್ ಯಾದವ್ ಅವರಿಗೂ ಬೇಲ್ ಸಿಕ್ಕಿತ್ತು! ಆಮೇಲೆ ಶಿಕ್ಷೆಗೆ ಗುರಿಯಾದರು ಎಂದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ, ನ್ಯಾಯಾಲಯ ಅವರನ್ನು ಇನ್ನೂ ಆರೋಪಮುಕ್ತ ಮಾಡಿಲ್ಲ. ಬಿಜೆಪಿಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎಂದು ಹೇಳಿದರು.