ವಿಜಯಪುರ : ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ನಡೆದ ಕೋಟ್ಯಾಂತರ ಮೌಲ್ಯದ ದರೋಡೆ ಪ್ರಕರಣವನ್ನು ಪೊಲೀಸರು ಬೇಧಿಸಿ ಹುಬ್ಬಳ್ಳಿ ಮೂಲದ ಅದೇ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಸಹಿತ ಮೂವರನ್ನು ಬಂಧಿಸಿದ್ದಾರೆ.
ಎಸ್ಪಿ ಲಕ್ಷ್ಮಣ ನಿಂಬರಗಿ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಅವರು, ಈ ಪ್ರಕರಣದಲ್ಲಿ ಹುಬ್ಬಳ್ಳಿಯ ಕೊಠಾರಿ ನಗರದ ಸೀನಿಯರ್ ಮ್ಯಾನೇಜರ್ ಕೆನರಾ ಬ್ಯಾಂಕ್ನ ವಿಜಯಕುಮಾರ ಮಿರಿಯಾಲ, ಹುಬ್ಬಳ್ಳಿ ಗದಗ ರಸ್ತೆಯ ಖಾಸಗಿ ಉದ್ಯೋಗಿಗಳಾದ ಚಂದ್ರಶೇಖರ ನೆರೆಲ್ಲಾ (38) ಹಾಗೂ ಸುನೀಲ ತಂದೆ ನಂರಸಿಂಹಲು ಮೋಕಾ(40), ಬಂಧಿತರು ಎಂದು ಹೇಳಿದರು
.
ಕಳೆದ ತಿಂಗಳು 25 ರಂದು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಲಾಕರ್ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿ (58,976.94 ಗ್ರಾಂ.) ಬಂಗಾರದ ಆಭರಣಗಳು ಹಾಗೂ ನಗದು ಹಣ ರೂ. 5,20,450/-ಹೀಗೆ ಒಟ್ಟು 53,31,20,450/- ಕೋಟಿ ರೂ. ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಲಾಗಿತ್ತು.
ಆರೋಪಿತರು ವ್ಯವಸ್ಥಿತವಾಗಿ ಒಳಸಂಚು ಮಾಡಿ ಬ್ಯಾಂಕಿನಲ್ಲಿದ್ದ ಬೃಹತ್ ಮೊತ್ತದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಲ್ಲದೇ, ತನಿಖೆಯ ದಿಕ್ಕು ತಪ್ಪಿಸುವಂತಹ ಹಲವಾರು ದೃಶ್ಯಾವಳಿಗಳನ್ನು ಸೃಷ್ಟಿಸಿದ್ದರೂ ಪ್ರಕರಣ ಭೇದಿಸಲಾಗಿದೆ ಅಲ್ಲದೇ, ಆರೋಪಿತರಿಂದ ಕೃತ್ಯಕ್ಕೆ ಬಳಸಿದ 02 ಕಾರುಗಳು ಹಾಗೂ ಕಾರುಗಳಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 10 ಕೋಟಿ 75 ಲಕ್ಷ ರೂ. ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಂಡು, ಇನ್ನುಳಿದ ಆರೋಪಿತರು ಹಾಗೂ ಕಳುವಾದ ವಸ್ತುಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದರು.
ಶಂಕರ ಮಾರಿಹಾಳ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು-1 ಮತ್ತು ರಾಮನಗೌಡ ಹಟ್ಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು-2 ಪತ್ರಿಕಾ ಗೋಷ್ಠಿಯಲ್ಲಿದ್ದರು.