*ಹುಬ್ಬಳ್ಳಿ ಒಂದನೇ ಅಧಿಕ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಸಲು ಹೈಕೋರ್ಟ್ ಸೂಚನೆ / ಬೆಳಗಾವಿಗೆ ವರ್ಗಾವಣೆ ಮಾಡಬೇಕೆಂಬ ಆರೋಪಿ ಮನವಿ ತಿರಸ್ಕೃತ*
ಹುಬ್ಬಳ್ಳಿ : ಇಡೀ ರಾಷ್ಟ್ರದಾದ್ಯಂತ ಸುದ್ದಿ ಮಾಡಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಟ್ರಯಲ್ ನಾಳೆಯಿಂದ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಪರಮೇಶ್ವರ್ ಪ್ರಸನ್ನ ಅವರು ಎದುರು ಆರಂಭವಾಗಲಿದೆ.
ನಗರದ ಬಿವಿಬಿ ಕಾಲೇಜಿನ ಆವರಣದಲ್ಲಿ ಹತ್ಯೆ ನಡೆದು ಒಂದು ವರ್ಷ, ಹತ್ತು ದಿನಗಳ ಬಳಿಕ ಟ್ರಯಲ್ ನಾಳೆಯಿಂದ ಆರಂಭವಾಗಲಿದ್ದು ಸಾಕ್ಷಿಗಳ ಎಫ್ ಡಿ ಟಿ ( ಫಿಕ್ಸಡ ಡೇಟ್ ಆಫ್ ಟ್ರಯಲ್ ) ನಿರ್ಧಾರವಾಗಲಿದೆ.
ಸಿಐಡಿ ಪರ ದೋಷಾರೋಪಣೆ ಪಟ್ಟಿ ಸಲ್ಲಿಕೆ ವೇಳೆ ಭಾಗಿಯಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಹೇಶ ವೈದ್ಯ ನೇಹಾ ಹಿರೇಮಠ ಪಾಲಕರ ಪರವಾಗಿ ವಾದ ಮಂಡನೆ ಮಾಡಲಿದ್ದು, ಆರೋಪಿ ಫೈಯಾಜ್ ಪರವಾಗಿ ಹುಬ್ಬಳ್ಳಿಯ ಯಾವುದೇ ವಕೀಲರು ಕೇಸ್ ತೆಗೆದುಕೊಳ್ಳದ ಹಿನ್ನಲೆ, ಹುಬ್ಬಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ವಕೀಲರ ನೇಮಕ ಮಾಡಲಾಗಿದೆ. ಆರೋಪಿ ಸೂಚಿಸುವ ವಕೀಲರೊಬ್ಬರ ನೇಮಕವಾಗಲಿದೆ.
ಪ್ರಕರಣವನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಆರೋಪಿ ಫಯಾಜ್ ಧಾರವಾಡ ಹೈಕೋರ್ಟ ಗೆ ಮನವಿ ಮಾಡಿದ್ದ.ಆರೋಪಿ ಪರ ವಕೀಲರಾದ ಝಡ್.ಆರ್.ಮುಲ್ಲಾ, ಹತ್ಯೆಯ ಆರೋಪಿ ಪರವಾಗಿ ವಾದ ಮಂಡನೆ ಮಾಡಿದ್ದರು.ಎರಡು ಕಡೆ ವಾದ ಆಲಿಸಿ ಹುಬ್ಬಳ್ಳಿಯ ಒಂದನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿಯೇ ವಿಚಾರಣೆ ಆರಂಭಿಸುವಂತೆ ಹೈಕೋರ್ಟ್ ತೀರ್ಪು ನೀಡಿತ್ತು.
ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಹತ್ಯೆ ಪ್ರಕರಣ ವಿಚಾರಣೆಯನ್ನು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಹತ್ಯೆಯನ್ನು ನೋಡಿರುವ ಪ್ರಮುಖ 99 ಸಾಕ್ಷಗಳು ಹುಬ್ಬಳ್ಳಿಯಲ್ಲಿವೆ. ಇಲ್ಲಿಯೇ ವಿಚಾರಣೆ ಆರಂಭ ಮಾಡಬೇಕೆಂದು. ನೇಹಾ ಪಾಲಕರ ಪರವಾಗಿ ಪರವಾಗಿ ರಾಘವೇಂದ್ರ ಎಸ್, ಎಂ.ಬಿ. ಹಿರೇಮಠ, ಪ್ರಕಾಶ್ ಅಂದಾನಿಮಠ ವಕೀಲರ ತಂಡ ಪ್ರತಿವಾದ ಮಾಡಿತ್ತು. ವಾದ ವಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸ ಅವರು ಆದೇಶ ನೀಡಿದ್ದಾರೆ.
ಕೂಡಲೇ ಪ್ರಕರಣ ಇತ್ಯರ್ಥಗೊಂಡು ಕೊಲೆಯ ಆರೋಪಿಗೆ ಶಿಕ್ಷೆಯಾಗಬೇಕೆಂದು ನೇಹಾ ತಂದೆ ನಿರಂಜನ ಹಿರೇಮಠ ಒತ್ತಾಯಿಸುತ್ತಾರೆ.ಇತ್ತೀಚೆಗೆ ನೇಹಾ ಪ್ರಥಮ ಪುಣ್ಯ ಸ್ಮರಣೆ ವೇಳೆಯೂ ನಿರಂಜನ ಇನ್ನೂ ವಿಚಾರಣೆ ಆರಂಭವಾಗಿಲ್ಲ. ಬೇಗ ನ್ಯಾಯ ದೊರಕಿಸಿಕೊಡಲು ಮನವಿ ಮಾಡಿದ್ದರು.