ಹುಬ್ಬಳ್ಳಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಬುಧವಾರ ಮಧ್ಯಾಹ್ನ ನಗರದ ರೇಲ್ವೆ ಗುತ್ತಿಗೆದಾರ ಮೋಹನ್ ಚವ್ಹಾಣ ಅಪಹರಣ ಪ್ರಕರಣದಲ್ಲಿ ಹತ್ತು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹು-ಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಕಾರ್ಯಾಚರಣೆ ವಿವರ ನೀಡಿದರು. ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತೋಳನಕೆರೆ ಬಳಿಯ ಕಚೇರಿಯಿಂದ ಗುತ್ತಿಗೆದಾರ ಮೋಹನ್ ಚವ್ಹಾಣ ಎಂಬುವರನ್ನು ಬಸಪ್ಪ ದಳವಾಯಿ ಸೇರಿದಂತೆ 15-20 ಕ್ಕೂ ಅಧಿಕ ಜನರ ತಂಡ ಮಾರಕಾಸ್ತ್ರಗಳನ್ನು ತೋರಿಸಿ, ಹಲ್ಲೆ ಮಾಡಿ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದರು.
ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಒಳಗಾದವರ ಸಹೋದರ ಅರವಿಂದ್ ಚವ್ಹಾಣ ಎಂಬುವವರು ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ನಗರದ ವಿಮಾನ ನಿಲ್ದಾಣದ ಬಳಿ ಕಾರನ್ನು ತಡೆಯಲು ಯತ್ನಿಸಿದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದರು.ಈ ಆರೋಪಿಗಳನ್ನು ಬೆನ್ನತ್ತಿದ ಪೊಲೀಸರು ಧಾರವಾಡದ ಕೆ.ಸಿ. ಪಾರ್ಕ್ ಬಳಿ ಪ್ರಮುಖ ಆರೋಪಿ ಬಸಪ್ಪ ದಳವಾಯಿ ಸೇರಿದಂತೆ ೧೦ ಜನರನ್ನು ಪೊಲೀಸರು ವಶಕ್ಕೆ ಪಡೆಯಲಾಯಿತು ಎಂದರು.
ಅಪಹರಣಕ್ಕೆ ಒಳಗಾಗಿದ್ದ ಗುತ್ತಿಗೆದಾರ ಮೋಹನ್ ನನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ಬಳಿ ವಶಕ್ಕೆ ಪಡೆಯಲಾಗಿದೆ ಎಂದರು. ಹಣಕಾಸಿನ ವ್ಯವಹಾರ ಕಾರಣಕ್ಕಾಗಿ ಈ ಅಪಹರಣ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಒಟ್ಟಾರೆ ಈ ಘಟನೆ ಕುರಿತು ಮೂರು ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಪ್ರಮುಖ ಆರೋಪಿ ಬಸಪ್ಪ ದಳವಾಯಿ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.
ಕೃಷ್ಣಪ್ಪ ಬಡಿಗೇರ,ಮಾಜೀದ ನದಾಫ್, ರುದ್ರಪ್ಪ ಭಜಂತ್ರಿ,
ಶಂಕರ ಹಿರೇಮೇತ್ರಿ, ನಜೀರ್ ಮಕಾನದಾರ, ಹನುಮಂತ, ಚನ್ನಪ್ಪ ಮಣ್ಣವಡ್ಡರ, ಶೇಖಪ್ಪ ವಡ್ಡರ, ಭೀಮಪ್ಪ ಬಂಧಿಸಿದ್ದು,
ಈ ಘಟನೆ ಕುರಿತಂತೆ ಇನ್ನೂ ೧೦ ಅಧಿಕ ಜನರು ಭಾಗಿಯಾಗಿರುವ ಶಂಕೆ ಇದ್ದು, ಆದಷ್ಟು ಬೇಗ ಅವರನ್ನು ವಶಕ್ಕೆ ಪಡೆಯುವುದಾಗಿ ಹೇಳಿದರು.
ರೇಲ್ವೆ ಗುತ್ತಿಗೆದಾರ ಮೋಹನ್ ಚವ್ಹಾಣ ಕಾಮಗಾರಿ ನೀಡಿದ್ದ ಉಪ ಗುತ್ತಿಗೆದಾರ ಬಸಪ್ಪಗೆ ನೀಡಬೇಕಾದ ಹಣ ನೀಡದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಬುಧವಾರ ನಡೆದ ಈ ಘಟನೆಯನ್ನು ಕನ್ನಡ ಧ್ವನಿ ಮೊದಲು ಪ್ರಕಟಿಸಿದ್ದು ವ್ಯಾಪಕ ವೈರಲ್ ಆಗಿತ್ತು.