*ದಾಂಡೇಲಿ ಸುತ್ತ ಮುತ್ತಲಿನ ಪ್ರದೇಶದಲ್ಲೂ ದೊಡ್ಡ ಪ್ರಮಾಣದಲ್ಲಿ ಭೂಮಿ* /*ಸಹೋದರಿ ಸರಿತಾಗೆ ಆಸ್ತಿ ಹಸ್ತಾಂತರ ವಿಚಾರದಲ್ಲಿ ಕೊಲೆ/ ಹತ್ಯೆ ಮಾಡಿದ ಪತ್ನಿ ಪಲ್ಲವಿ 14 ದಿನ ನ್ಯಾಯಾಂಗ ವಶಕ್ಕೆ*
ಹುಬ್ಬಳ್ಳಿ: ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದ್ದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಪತ್ನಿ ಪಲ್ಲವಿಯನ್ನು ಬಂಧಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪುತ್ರಿ ಕೃತಿಕಾಳನ್ನು ನಿಮಾನ್ಸ್ ಗೆ ದಾಖಲಿಸಲಾಗಿದೆ.
ನಿವೃತ್ತ ಐಜಿ ಮತ್ತು ಡಿಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಓಂ ಪ್ರಕಾಶ್ ಹತ್ಯೆ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿವ ನಿಟ್ಟಿನಲ್ಲಿ ತನಿಖೆ ಸಿಸಿಬಿಗೆ ವರ್ಗಾಯಿಸಲಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸಲಿದ್ದಾರೆಂದು ಹೇಳಿದ್ದಾರೆ.
ಓಂ ಪ್ರಕಾಶ್ ಆಸ್ತಿಯನ್ನು ತಮ್ಮ ತಂಗಿ ಸರಿತಾಗೆ ಹಸ್ತಾಂತರ ಮಾಡುವ ವಿಚಾರದಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ. ಮೊದಲು ದಾಂಡೇಲಿಯಲ್ಲಿದ್ದ ಸರಿತಾ 2014ರಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು.
17ಎಕರೆ ಇಪ್ಪತ್ತು ಗುಂಟೆ ಜಮೀನು ಪೈಕಿ ಐದು ಎಕರೆ ಜಮೀನು ತಂಗಿ ಸರಿತಾಗೆ ನೀಡಲು ಓಂ ಪ್ರಕಾಶ್ ಮುಂದಾಗಿದ್ದರು ಎನ್ನಲಾಗಿದೆ.
ಬಿಹಾರ ಮೂಲದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಬೆಂಗಳೂರು, ಕಾರವಾರ ಜಿಲ್ಲೆಯ ದಾಂಡೇಲಿ ಸುತ್ತ ಮುತ್ತ ಅಲ್ಲದೆ ಹುಬ್ಬಳ್ಳಿ ಸಹಿತ ಅನೇಕ ಕಡೆ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ದಾಂಡೇಲಿ ಬಳಿ ಕಾಳಿ ಹಿನ್ನೀರಿನ ಪ್ರದೇಶದಲ್ಲಿ ಓಂ ಪ್ರಕಾಶ್ ದೊಡ್ಡ ಪ್ರಮಾಣದಲ್ಲಿ ಜಮೀನು ಹೊಂದಿದ್ದು ರೆಸಾರ್ಟ್, ಹೋಂ ಸ್ಟೇ ಗೆ ನೀಡಿದ್ದು, ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ಹೊಸ ಬಸ್ ನಿಲ್ದಾಣದ ಸುತ್ತ ಮುತ್ತಲಿನ ಪರಿಸರದಲ್ಲಿ ಸಹ “ಕೋಟಿ ಕೋಟಿ” ಬೆಲೆ ಬಾಳುವ ನಿವೇಶನ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಪುತ್ರ ಕಾರ್ತಿಕೇಶ ನೀಡಿದ ದೂರಿನ ಮೇರೆಗೆ ತಾಯಿ ಪಲ್ಲವಿ, ಸಹೋದರಿ ಕೃತಿ ವಿರುದ್ಧ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 103(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಓಂ ಪ್ರಕಾಶ ಅವರ ಪುತ್ರ ಕಾರ್ತಿಕೇಶ ನೀಡಿನ ದೂರಿನಲ್ಲಿ, ಒಂದು ವಾರದಿಂದ ತಾಯಿ ಪಲ್ಲವಿ ಅವರು ತಂದೆಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ಅವರು ತಮ್ಮ ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಎರಡು ದಿನಗಳ ಬಳಿಕ ತಾಯಿ ಹಾಗೂ ತಂಗಿ ಇಬ್ಬರೂ ಅಲ್ಲಿಗೆ ಹೋಗಿ, ಅವರನ್ನು ಕರೆ ತಂದಿದ್ದರು ಎಂದು ಹೇಳಿದ್ದಾರೆ.