ಹುಬ್ಬಳ್ಳಿ: ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ. ವಚನಗಳಂತೆ ಬದುಕನ್ನು ರೂಪಿಸಿಕೊಳ್ಳಬೇಕು. ರಾಜಕಾರಣ ಸೃಷ್ಟಿಸುತ್ತಿರುವ ಜಾತಿ, ಧರ್ಮಗಳ ಕಿತ್ತಾಟದಿಂದ ದೂರವಿರಬೇಕು ಎಂದು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ಬಸವರಾಜ ಸಾದರ ಹೇಳಿದರು.

ರವಿವಾರ ಇಲ್ಲಿನ ಪಿ. ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದ್ದ ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನದಿಂದ ಸಂಗಮ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಡಾ. ಸಂಗಮೇಶ ಹಂಡಗಿ ಹಾಗೂ ಅವರ ತಲೆಮಾರಿನವರು ಆದರ್ಶ ಬದುಕು ಸಾಗಿಸಿದ್ದಾರೆ. ಇವರನ್ನು ಸದಾ ನೆನಪಿಸಿಕೊಳ್ಳಬೇಕು. ಹಿರಿಯರನ್ನು ಹಾಗೂ ಸಾಧಕರನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೆನಪಿಸಿಕೊಳ್ಳಬೇಕು. ಜಗತ್ತಿಗೆ ನೋವಾದರೆ ಅದಕ್ಕೆ ಪರಿಹಾರ ಸೂಚಿಸುವುದು ವಚನ ಸಾಹಿತ್ಯ. ವಚನಗಳಂತೆ ಬದುಕನ್ನು ರೂಪಿಸಿಕೊಳ್ಳದಿದ್ದರೆ ಶರಣರನ್ನು ನಾವೇ ಸಾಯಿಸಿದಂತೆ ಎಂದರು.

ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಅವರು ಸಂಗಮ ಸಿರಿ ಪ್ರಶಸ್ತಿ ಸ್ವೀಕರಿಸಿ ನಂತರ ಮಾತನಾಡಿ, ಮನುಷ್ಯನಿಗೆ ಪ್ರಮುಖವಾಗಿ ಮಾನವ ಮೌಲ್ಯಗಳು ಇರಬೇಕು. ಪ್ರತಿಯೊಬ್ಬರು ಸಮಾಜದ ಋಣ ತೀರಿಸಬೇಕು. ಬಸವಣ್ಣ ಸೇರಿದಂತೆ ಎಲ್ಲಾ ವಚನಕಾರರನ್ನು ಇನ್ನಷ್ಟು ತಿಳಿದುಕೊಳ್ಳಬೇಕು. ವಚನಗಳಲ್ಲಿನ ವೈಜ್ಞಾನಿಕ ತಳಹದಿ ಮೇಲೆ ಉಪನ್ಯಾಸಗಳು ನಡೆಯಬೇಕು. ಬಸವಣ್ಣನವರು ವೈಜ್ಞಾನಿಕ ವಿಚಾರಗಳನ್ನು ನೇರವಾಗಿ ಹೇಳಿದ್ದಾರೆ. ಆದರೆ ಅದನ್ನು ತಿಳಿದುಕೊಳ್ಳುವಲ್ಲಿ ನಾವು ಸಾಕಷ್ಟು ಹಿಂದೆ ಬಿದ್ದಿದ್ದೇವೆ. ವಚನಗಳನ್ನು ಅರ್ಥೈಸಿಕೊಳ್ಳಲು ಪಂಡೀತರಾಗಬೇಕೆಂದಿಲ್ಲ. ಆದರೆ ಅವುಗಳನ್ನು ಅರಿತುಕೊಳ್ಳುವ ತಾಳ್ಮೆ ವ್ಯವದಾನ ಬೇಕಾಗುತ್ತದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, 46 ಕೃತಿಗಳನ್ನು ಬರೆದಿರುವ ಸಂಗಮೇಶ ಹಂಡಗಿ ಅವರು ಇಂದಿಗೂ ಮುಂದಿಗೂ ಜೀವಂತವಾಗಿರುತ್ತಾರೆ ಎಂದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಾ. ಬoಡು ಕುಲಕರ್ಣಿ ಮಾತನಾಡಿ, ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ರಾಜ್ಯಮಟ್ಟದಲ್ಲಿ ನೀಡುತ್ತಿರುವ ಪ್ರಶಸ್ತಿ ರಾಷ್ಟ್ರಮಟ್ಟಕ್ಕೆ ಬೆಳೆಯಲಿ. ಇನ್ನಷ್ಟು ಸಾಹಿತ್ಯಕ್ಕೆ ಚಟುವಟಿಕೆ ನಡೆಯಲಿ ಎಂದು ಆಶಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ, ಸಾಹಿತಿ ಹಾಗೂ ಸಾಹಿತ್ಯಕ್ಕೆ ಸಾವಿಲ್ಲ. ನಡೆ ನುಡಿ ಒಂದಾಗಿರಬೇಕು. ಸ್ವಚ್ಛ ಸಮಾಜ ನಿರ್ಮಾಣವಾಗಬೇಕು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಗಮೇಶ ಹಂಡಗಿ ಅವರ ಕೃತಿಗಳನ್ನು ಮರುಮುದ್ರಣ ಮಾಡುವ ಕಾರ್ಯಕ್ಕೆ ಮುಂದಾಗುವುದಾಗಿ ಹೇಳಿದರು.

ಪ್ರತಿಷ್ಠಾನದ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ಮಾತನಾಡಿ, ಪ್ರತಿ ವರ್ಷವೂ ಪಾರದರ್ಶಕವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹಂಡಗಿ ಪ್ರತಿಷ್ಠಾನ ಕಾರ್ಯನಿರ್ವಹಿಸುತ್ತದೆಯೆಂದರು.
ರಾಯನಾಳ ರೇವಣಸಿದ್ದೇಶ್ವರ ಮಠದ ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಬಸವಣ್ಣನವರು ಮಾನವೀಯ ಮೌಲ್ಯಗಳನ್ನು ಸಾರಿದ್ದಾರೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಸಾಹಿತಿ ಮಹಾಂತಪ್ಪ ನಂದೂರು ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವೀರೇಶ ಹಂಡಗಿ ಸ್ವಾಗತಿಸಿದರು. ಡಾ. ಬಿ.ಎಸ್.ಮಾಳವಾಡ ಪರಿಚಯಿಸಿದರು. ಪ್ರೊ. ಗುರು ಹಂಜಗಿಮಠ ನಿರೂಪಿಸಿದರು. ರವೀಂದ್ರ ರಾಮದುರ್ಗಕರ್ ವಂದಿಸಿದರು.



