ಹಾವೇರಿ : ವೇಗವಾಗಿ ಚಲಿಸುತ್ತಿದ್ದ ಆಡಿ ಕಾರು ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ಮೃತಪಟ್ಟು,ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಮೋಟೆಬೆನ್ನೂರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಗುರುವಾರ ಸಂಭವಿಸಿದೆ.
ಹರಿಹರದ ಸೈಯದ್ ರ್ಹಾನ್ ಇಮಾಮವುಲ್ಲಾ (20), ಉಮ್ಮೇರಾ ಸೈಯದ್ ಇನಾಮುಲ್ಲಾ(11), ಗೋವಾದ ಆಲೀಷಾ ಅಕ್ಬರ್ ನಾರಂಗಿ (22), ಗೋವಾದ ಪುರಾಖಾನ್ ಅಕ್ಬರ್ ನಾರಂಗಿ (14), ರಾಣೆಬೆನ್ನೂರಿನ ಉಮ್ಮೀಶೀಫಾ ಅಫ್ರಾಜ್ ಉದಗಟ್ಟಿ (13), ಧಾರವಾಡದ ಆಶೀಯಾ ಖಲಂದರ (12) ಸಾವಿಗೀಡಾಗಿದ್ದಾರೆ.
ಗೋವಾ ಮೂಲದ ಮೇಹಕ್ ರಶೀದ್ ನಾರಂಗಿ, (18) ರಾಣೆಬೆನ್ನೂರಿನ ಉಮ್ಮೀತಸ್ಕೀನ್ ಅಪ್ರೋಜ್ ಉದಗಟ್ಟಿ (11) ಗಂಭೀರವಾಗಿ ಗಾಯಗೊಂಡಿದ್ದು, ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ರಾಣೇಬೆನ್ನೂರು ನಗರದ ಬೇಕರಿ ವ್ಯಾಪಾರಿ ಅಫ್ರೋಜ್ ಎಂಬುವರ ಮನೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದಕ್ಕೆ ಗೋವಾ, ಧಾರವಾಡ, ಹರಿಹರ ಮುಂತಾದೆಡೆಯಿಂದ ಬಂಧು ಬಳಗದವರುಗಳು ಬಂದಿದ್ದರು. ಶಾಲೆಗಳಿಗೆ ರಜೆ ಇದ್ದಿದ್ದರಿಂದ ಗುರುವಾರ ಸಂಬಂಧಿಕರೆಲ್ಲ ಸೇರಿ ಒಂದು ಬಸ್ ಹಾಗೂ ಆಡಿ ಕಾರಿನಲ್ಲಿ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಗೋವಾಕ್ಕೆ ತೆರಳಲು ಪ್ರಯಾಣ ಬೆಳೆಸುತ್ತಿರುವಾಗಲೇ ಮರಣ ಮೃದಂಗದ ಸ್ಥಳ ಎಂದು ಕರೆಸಿಕೊಳ್ಳುವ ಮೋಟೆಬೆನ್ನೂರ ಬಳಿ ಅವಘಡ ಸಂಭವಿಸಿದೆ.ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಾವೇರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ
ಮೋಟೆಬೆನ್ನೂರು ಬಳಿ ಆಡಿ ಕಾರು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅತಿ ವೇಗದ ಚಲಾವಣೆ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.