ಹುಬ್ಬಳ್ಳಿ: ನೀರಿನಲ್ಲಿ ಯಾವ ಬಣ್ಣ ಹಾಕಿದರೂ ಅದು ಆ ಬಣ್ಣವೇ ತಾನಾಗುತ್ತದೆ.ಹಾಗೆಯೇ ಹುಬ್ಬಳ್ಳಿಯ ಹೊಟೆಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿಯವರು ಇಲ್ಲಿನ ಎಲ್ಲ ಸಮಾಜದ ಜನರೊಂದಿಗೆ ಬೆರೆತು ಅವರೊಳಗೊಂದಾಗಿ ಸದ್ದಿಲ್ಲದೆ ಸಾಮಾಜಿಕ ಕಾರ್ಯಗಳ ಮೂಲಕ ಅವಳಿನಗರದ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ಇತ್ತೀಚೆಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಬೆಂಗಳೂರಿನ ಸನಾತನ ಪೌಂಡೇಷನ್ ವತಿಯಿಂದ ಅವರ ಸಮಾಜ ಸೇವೆಯನ್ನು ಪರಿಗಣಿಸಿ “ವಿಕ್ರಮ ಪ್ರಶಸ್ತಿ ” ನೀಡಿ ಗೌರವಿಸಲಾಯಿತು.
ಸುಧಾಕರ ಶೆಟ್ಟಿ ದಂಪತಿಗೆ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂಧರ್ಭದಲ್ಲಿ ಶ್ರೀ ಕೃಷ್ಣ ಮಠದ ಪೂಜ್ಯ ಸ್ವಾಮೀಜಿಯವರು, ಗಣ್ಯರು ಉಪಸ್ಥಿತರಿದ್ದರು.
ಇದೇ ವರ್ಷ ಮಂತ್ರಾಲಯದಲ್ಲಿ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಪರಿಮಳ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಿದ್ದಾರೆ . ವಿವಿಧ ಸಂಘಟನೆಗಳಿಂದ ರಾಜ್ಯಾದ್ಯಂತ ಹಾಗೂ ಹೊರ ದೇಶಗಳಲ್ಲಿ ಸಹ ಇವರ ಸಾಧನೆ ಗುರುತಿಸಿ ನೂರಾರು ಪ್ರಶಸ್ತಿ, ಗೌರವ ಬಂದಿದೆ.
ಉಡುಪಿ ಬಳಿಯ ಕರ್ಜೆಯವರಾದ ಸುಗ್ಗಿ ಸುಧಾಕರ ಶೆಟ್ಟಿಯವರು ಒದಿದ್ದು ಕಡಿಮೆಯಾದರೂ ಜೀವನದಲ್ಲಿ ಕಲಿತದ್ದು ಹೆಚ್ಚು. ಸ್ವಂತ ಕಾಲ ಮೇಲೆ ನಿಲ್ಲಬೇಕು.ಕಾಲು ಚಾಚಬೇಕಾದರೆ ಹಾಸುಗೆಯನ್ನು ದೊಡ್ಡದಾಗಿ ಮಾಡಿಕೊಳ್ಳಬೇಕೆಂಬುದನ್ನು ಅವರು ಪ್ರತ್ಯಕ್ಷ ಅನುಭವದಿಂದ ಕಲಿತುಕೊಂಡವರು. ತಮ್ಮ 18ನೇ ವಯಸ್ಸಿಗೆ ಮನೆ ಬಿಟ್ಟು ಬಂದು ಹೋಟೆಲಿನಲ್ಲಿ ಮಾಣಿಯಾಗಿ ಕಾರ್ಯ ಆರಂಭಿಸಿ ಪರಿಶ್ರಮ, ಸಾಧಿಸಿ ತೋರಿಸಬೇಕೆಂಬ ಛಲದೊಂದಿಗೆ ಮುನ್ನುಗ್ಗಿ ಇಂದು ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ.
ಏನೇ ಮಾಡಿದರೂ ಚೊಕ್ಕಟವಾಗಿಯೇ ಮಾಡುವ ಇವರು ಪ್ರಾಮಾಣಿಕ ಪ್ರಯತ್ನವಾದಿ.ಅಲ್ಲದೇ ಹುಟ್ಟೂರಿನಲ್ಲಿಯೂ ಪುರಾತನ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ದಿಪಡಿಸಿ ಸೈ ಎನಿಸಿಕೊಂಡಿದ್ದಾರಲ್ಲದೇ ಅದರ ಉದ್ಘಾಟನೆ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿತು. ಕೊಡುವ ಕೈಯನ್ನು ಪಡೆದುಕೊಂಡೇ ಬಂದಿರುವ ಶೆಟ್ಟರ ಬಳಿ ನೆರವು ಅಪೇಕ್ಷಿಸಿ ಹೋದವರು ಎಂದೂ ನಿರಾಶೆಗೊಂಡು ಬಂದಿಲ್ಲ. ಯಕ್ಷಗಾನ, ತಾಳಮದ್ದಳೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರು ಕಲಾವಿದರ ಬಗ್ಗೆ ಕಳಕಳಿ ಹೊಂದಿದ್ದಾರೆ.
ಎಲ್ಲ ರಾಜಕೀಯ ಪಕ್ಷಗಳ ಘಟಾನುಘಟಿ ಮುಖಂಡರು, ರಾಜ್ಯದ ಅತ್ಯುತ್ನತ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳ ಜತೆ ಉತ್ತಮ ಸಂಬಂಧ ಹೊಂದಿದ್ದಾರಲ್ಲದೇ ಯಾವುದೇ ಕೆಲಸಕ್ಕೆ ಕೈ ಹಾಕಿದಲ್ಲಿ ಅದನ್ನು ಪೂರ್ಣಗೊಳಿಸುವವರೆಗೆ ಅವರು ವಿರಮಿಸುವುದಿಲ್ಲ.
ತನ್ನದೇ ಇತಿಹಾಸ, ಹಿರಿಮೆ ಹೊಂದಿರುವ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಸುವರ್ಣ ಸಂಭ್ರಮದ ಅವಧಿಯಲ್ಲಿ ಅಧ್ಯಕ್ಷರಾಗಿ ಅವರು ಮಾಡಿದ ಕಾರ್ಯಗಳು ಸದಾ ನೆನಪಿನಲ್ಲಿ ಉಳಿಯುತ್ತದೆ.ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪ ನವೀಕರಣ, ಪ್ರಸನ್ನ ಗಣಪತಿ ದೇವಸ್ಥಾನ ಬ್ರಹ್ಮ ಕಲಶೋತ್ಸವ ಮಹತ್ವದ್ದಾಗಿದೆ.ಬಂಟರ ಭಾವೈಕ್ಯ ಸಮಾರಂಭ ಏರ್ಪಡಿಸಿ ಅಧಿಕಾರ ಸ್ವೀಕಾರ ಮಾಡಿದ್ದು ಇವರ ಹಿರಿಮೆಯಾಗಿದೆ.
ಭಗವದ್ಗೀತೆಯಲ್ಲಿ ಹೇಳಿದಂತೆ ‘ಫಲಾಫೇಕ್ಷೆ ಇಲ್ಲದ ಸೇವೆಯೇ ದೇವರಿಗೆ ಮೆಚ್ಚುಗೆ’ ಎಂಬುದು ನಾನು ಜೀವನದಲ್ಲಿ ಕಂಡುಕೊಂಡ ಸತ್ಯ. ಅದರಂತೆ ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಿದ್ದೇನೆ.
-ಸುಗ್ಗಿ ಸುಧಾಕರ ಶೆಟ್ಟಿ,
ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡ ಸುಧಾಕರ ಶೆಟ್ಟಿಯವರು ಎಲ್ಲರನ್ನೂ ಒಂದಾಗಿಸುವ ಗುಣದವರಾಗಿದ್ದು ಅವರಿಗೆ ಇನ್ನಷ್ಟು ಪ್ರಶಸ್ತಿ, ಗೌರವಗಳು ಅರಸಿ ಬರಲಿ . ಉದ್ಯೋಗದಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ.
ಮಹೇಶ ಶೆಟ್ಟಿ
ಅಧ್ಯಕ್ಷರು, ಧಾರವಾಡ ಹೊಟೆಲ್ ಒಡೆಯರ ಸಂಘ,