*ಹಾರ್ಟ್ ಲ್ಯಾಂಪ್ ಕೃತಿ ಗೆ 57.34 ಲಕ್ಷ ರೂ ನಗದು ಪುರಸ್ಕಾರ / ಅನುವಾದಕಿ ದೀಪಾ ಬಸ್ತಿ ಜೊತೆ ಪ್ರಶಸ್ತಿ ಸ್ವೀಕಾರ*
ಬೆಂಗಳೂರು : ಹಾಸನ ಮೂಲದ ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಕನ್ನಡದ ಕತೆಗಳ (ಹೃದಯ ದೀಪ ) ಅನುವಾದ ʼಹಾರ್ಟ್ ಲ್ಯಾಂಪ್ʼ ಕೃತಿಗೆ 2025ನೇ ಸಾಲಿನ
ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ.
ಮೇ 21ರಂದು ಲಂಡನ್ನಲ್ಲಿ ನಡೆದ ಸಮಾರಂಭದಲ್ಲಿ ಈ ಕುರಿತ ಅಧಿಕೃತ ಘೋಷಣೆ ಹೊರಬಿದ್ದಿದ್ದು ,ಈ ಪ್ರಶಸ್ತಿಯು 57.34 ಲಕ್ಷ ನಗದನ್ನು ಒಳಗೊಂಡಿದೆ.
ಪಟ್ಟಿಯ ಶಾರ್ಟ್ ಲಿಸ್ಟ್ನಲ್ಲಿದ್ದ ಎಲ್ಲರನ್ನೂ ಲಂಡನ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಲೇಖಕಿ ಬಾನು ಮುಷ್ತಾಕ್ ಅವರು ಅನುವಾದಕಿ ದೀಪಾ ಬಸ್ತಿ ಜೊತೆ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬಾನು ಮುಷ್ತಾಕ್ 30 ವರ್ಷಗಳಿಗೂ ಹೆಚ್ಚು ಕಾಲ ಬರೆದ 12 ಸಣ್ಣ ಕಥೆಗಳ ಸಂಗ್ರಹವಾಗಿದ್ದು, ದಕ್ಷಿಣ ಭಾರತದ ಮಹಿಳೆಯರ ದೈನಂದಿನ ಜೀವನ ಮತ್ತು ಹೋರಾಟಗಳನ್ನು ವಿವರಿಸುತ್ತದೆ.
ಲಂಡನ್ನ ಟೇಟ್ ಮಾಡರ್ನ್ನಲ್ಲಿ ನಡೆದ ಸಮಾರಂಭದಲ್ಲಿ ಐವರು ಸದಸ್ಯರ ಮತದಾನ ಸಮಿತಿಯ ಅಧ್ಯಕ್ಷ ಹಾಗೂ ಲೇಖಕ ಮ್ಯಾಕ್ಸ್ ಪೋರ್ಟರ್ ಅವರು ಈ ಪ್ರಶಸ್ತಿಯನ್ನು ಘೋಷಿಸಿದರು.
ಸಣ್ಣ ಕಥೆಗಳ ಸಂಗ್ರಹಕ್ಕೆ ಇದೇ ಮೊದಲ ಬಾರಿಗೆ ಬೂಕರ್ ಪ್ರಶಸ್ತಿ ಬಂದಿದೆ. ವಕೀಲೆ, ಕಾರ್ಯಕರ್ತೆ ಹಾಗೂ ಬರಹಗಾರರೂ ಆಗಿರುವ ಮುಷ್ತಾಕ್ ಕಿರು-ಪಟ್ಟಿ ಓದುವ ಕಾರ್ಯಕ್ರಮದಲ್ಲಿ, ಈ ಕಥೆಗಳು “ಮಹಿಳೆಯರ ಬಗ್ಗೆ ಇದ್ದು- ಧರ್ಮ, ಸಮಾಜ ಮತ್ತು ರಾಜಕೀಯವು ಅವರಿಂದ ಪ್ರಶ್ನಾತೀತ ವಿಧೇಯತೆಯನ್ನು ಹೇಗೆ ಬಯಸುತ್ತದೆ ಮತ್ತು ಹಾಗೆ ಮಾಡುವುದರಿಂದ, ಅವರ ಮೇಲೆ ಅಮಾನವೀಯ ಕ್ರೌರ್ಯವನ್ನು ಹೇಗೆ ಹೇರುತ್ತದೆ, ಅವರನ್ನು ಕೇವಲ ಅಧೀನರನ್ನಾಗಿ ಮಾಡುತ್ತದೆ ಎಂಬ ಬಗ್ಗೆ ಇದೆ” ಎಂದು ಹೇಳಿದರು.
ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿಗೆ ಪುರಸ್ಕೃತರಾಗಿರುವ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ. ‘ಹೃದಯ ದೀಪ’ವನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳು ಎಂದಿದ್ದಾರೆ.