*ಸುಳ್ಳು ಸುದ್ದಿ ಹರಿಬಿಡುತ್ತಿರುವ ಪಾಕ್ / ಕೇದಾರನಾಥ ಹೆಲಿಕಾಪ್ಟರ್ ಸೇವೆ ಸ್ಥಗಿತ*
ಹೊಸದಿಲ್ಲಿ: ಪಾಕಿಸ್ತಾನ ಸೇನೆಯು ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳಿಗೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡುತ್ತಿದ್ದು ಪಾಕಿಸ್ತಾನದ ಐದು ವಾಯುನೆಲೆಗಳ ಮೇಲೆ ಮತ್ತು ಎರಡು ರಾಡಾರ್ ಬೇಸ್ ಗಳನ್ನು ನಾಶಪಡಿಸಲಾಗಿದೆ.
ಡ್ರೋನ್ ದಾಳಿಗಳನ್ನು ನಡೆಸಲು ಪಾಕಿಸ್ತಾನ ಬಳಸುತ್ತಿದ್ದ ಮಿಲಿಟರಿ ಪೋಸ್ಟ್ಗಳು ಮತ್ತು ಲಾಂಚ್ಪ್ಯಾಡ್ಗಳನ್ನು ಭಾರತೀಯ ಸೇನಾಪಡೆಗಳು ನಾಶಪಡಿಸಿವೆ ಎಂದು ‘ಎಎನ್ಐ’ ವರದಿ ಮಾಡಿದೆ.
ರಾತ್ರಿಯಿಡೀ ನಡೆದ ಸಂಘಟಿತ ಗಡಿಯಾಚೆಗಿನ ದಾಳಿಗಳ ನಂತರ ಭಾರತದ ಮಿಲಿಟರಿ ಮೂಲಸೌಕರ್ಯಕ್ಕೆ ಭಾರಿ ಹಾನಿ ಉಂಟು ಮಾಡಿದೆ ಎಂಬ ಪಾಕಿಸ್ತಾನದ ಹೇಳಿಕೆಗಳನ್ನು ಭಾರತ ತಿರಸ್ಕರಿಸಿದೆ. ಪಾಕಿಸ್ತಾನವು ಸುಳ್ಳು ಸುದ್ದಿಗಳನ್ನು ಹರಿಯ ಬಿಡುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ, ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಬೆಳಿಗ್ಗೆ ಮಾಧ್ಯಮ ಗೋಷ್ಟಿಯಲ್ಲಿ ಹೇಳಿದರು.
ಪಾಕಿಸ್ತಾನಿ ಸೇನೆಯ ಕ್ರಮಗಳು ಪ್ರಚೋದನೆಯನ್ನುಂಟು ಮಾಡಿದವು ಮತ್ತು ಅದಕ್ಕೆ ಅನುಗುಣವಾಗಿ ಭಾರತವು ಪ್ರತೀಕಾರದ ಪ್ರದರ್ಶನ ಮಾಡಿದೆ .ರಫೀಕ್ ಶೋರಕೋಟ ಸೇರಿದಂತೆ ಐದು ವಾಯುನೆಲೆ ಧ್ವಂಸಗೊಳಿಸಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ವಿಕ್ರಂ ಹೇಳಿದರು.
ನಡೆಯುತ್ತಿರುವ ಸಂಘರ್ಷವನ್ನು ಹೆಚ್ಚು ಅಸ್ಥಿರಗೊಳಿಸಲು ಪಾಕಿಸ್ತಾನಿ ಸೇನೆ ಯತ್ನ ನಡೆಸಿದ್ದು . ಸಶಸ್ತ್ರ ಪಡೆಗಳು ಸೂಕ್ತವಾಗಿ ಪ್ರತಿಕ್ರಿಯಿಸಿವೆ.ಪಾಕಿಸ್ತಾನವು ಶ್ರೀನಗರ, ಅವಂತಿಪುರ ಮತ್ತು ಉಧಂಪುರಗಳಲ್ಲಿನ ಶಾಲೆ ಮತ್ತು ವೈದ್ಯಕೀಯ ಸೌಲಭ್ಯಗಳ ಮೇಲೂ ದಾಳಿ ಮಾಡಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದರು.
ತ್ವರಿತ ಮತ್ತು ನಿಖರವಾದ ಪ್ರತಿಕ್ರಿಯೆಯಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಗುರುತಿಸಲಾದ ಮಿಲಿಟರಿ ಗುರಿಗಳ ಮೇಲೆ ಮಾತ್ರ ನಿಖರವಾದ ದಾಳಿ ನಡೆಸಿದವು. ಭಾರತದ ಎಸ್-400 ವ್ಯವಸ್ಥೆಯ ನಾಶ, ಸೂರತ್ ಮತ್ತು ಸಿರ್ಸಾದಲ್ಲಿನ ವಾಯುನೆಲೆಗಳ ಧ್ವಂಸ ಮಾಡಿದ್ದೇವೆಂದು ಪಾಕಿಸ್ತಾನವು ನಿರಂತರ ದುರುದ್ದೇಶಪೂರಿತ ತಪ್ಪು ಮಾಹಿತಿ ಹರಡಲು ಪ್ರಯತ್ನಿಸಿದೆ. ಪಾಕಿಸ್ತಾನ ಹರಡುತ್ತಿರುವ ಈ ಸುಳ್ಳು ಹೇಳಿಕೆಗಳನ್ನು ಭಾರತ ನಿಸ್ಸಂದೇಹವಾಗಿ ತಿರಸ್ಕರಿಸುತ್ತದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದರು.
ಪಾಕಿಸ್ತಾನ 26 ಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಯುದಳದ ಮೂಲಕ ನುಸುಳಲು ಪ್ರಯತ್ನಿಸಿತು. ಉಧಮ್ಪುರ, ಭುಜ್, ಪಠಾಣ್ಕೋಟ್, ಬಟಿಂಡಾದಲ್ಲಿನ ವಾಯುಪಡೆಯ ನೆಲೆಗಳಲ್ಲಿ ನಮ್ಮ ಉಪಕರಣಗಳು ಮತ್ತು ಸಿಬ್ಬಂದಿಯನ್ನು ಹಾನಿಗೊಳಿಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಮಾಹಿತಿ ನೀಡಿದರು.
ಪಾಕಿಸ್ತಾನವು ಪಂಜಾಬ್ನ ವಾಯುನೆಲೆಯನ್ನು ಗುರಿಯಾಗಿಸಲು ಬೆಳಗಿನ ಜಾವ 1:40 ಕ್ಕೆ ಅತಿ ವೇಗದ ಕ್ಷಿಪಣಿಗಳನ್ನು ಬಳಸಿದರು. ಅವರು ಆರೋಗ್ಯ ಸೌಲಭ್ಯಗಳು ಮತ್ತು ಶಾಲೆಗಳ ಮೇಲೆಯೂ ದಾಳಿ ಮಾಡಿದರು ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದರು.
ಇನ್ನೊಂದು ಕಡೆ ಕೇದಾರನಾಥಕ್ಕೆ ಹೆಲಿಕಾಪ್ಟರ್ ಸೇವೆ ಸ್ಥಗಿತಗೊಳಿಸಲಾಗಿದೆ.
*ಯೋಧರು ಹೋರಾಡುತ್ತಿರುವಾಗ ನನ್ನ ಜನ್ಮದಿನಾಚರಣೆ ಬೇಡ: ಡಿಸಿಎಂ ಮನವಿ*
ಬೆಂಗಳೂರು:ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ಮೇ 15 ರಂದು ಯಾರೂ ನನ್ನ ಜನ್ಮದಿನಾಚರಣೆ ಮಾಡುವುದು ಬೇಡ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
“ನನ್ನ ಜನ್ಮದಿನದ ಹೆಸರಿನಲ್ಲಿ ಯಾರೊಬ್ಬರೂ ಸಂಭ್ರಮಾಚರಣೆ ಮಾಡಬಾರದು. ಅಂದು ನಾನು ಊರಿನಲ್ಲಿ ಇರುವುದಿಲ್ಲ. ಅಂದು ನನ್ನನ್ನು ಭೇಟಿ ಮಾಡಲು ಯಾರೂ ನನ್ನ ನಿವಾಸ, ಕಚೇರಿಗೆ ಬರುವುದು ಬೇಡ. ಯಾರೂ ಅನ್ಯತಾ ಭಾವಿಸಬಾರದು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು” ಎಂದು ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ವಿನಂತಿ ಮಾಡಿದ್ದಾರೆ.
ಜನ್ಮದಿನದ ಶುಭ ಕೋರುವ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕುವುದಾಗಲಿ, ಜಾಹೀರಾತುಗಳನ್ನು ನೀಡುವುದಾಗಲಿ ಮಾಡಬಾರದು ಎಂದು ಅಭಿಮಾನಿಗಳು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.