ಹುಬ್ಬಳ್ಳಿ: ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ದಿ.15ರಂದು
ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ(ರಿ) ಹಾಲಾಡಿ ಕುಂದಾಪುರ ತಾಲೂಕು ಹಾಗೂ ಮಯ್ಯ ಯಕ್ಷ ಬಳಗದ ವತಿಯಿಂದ “ಮುರಳಿಮೋಹನ ಶ್ರೀ ಕೃಷ್ಣಾಸ್ತಮಾನ” ಯಕ್ಷಗಾನ ಪ್ರದರ್ಶನ ನಡೆಯಲಿದೆ.
ರವಿವಾರ ಸಂಜೆ 4 ಗಂಟೆಯಿಂದ ನಗರದ ಇಂದಿರಾ ಗ್ಲಾಸ್ ಎದುರಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬಡಗುತಿಟ್ಟಿನ ಮೇರು ಭಾಗವತರಾದ ಸ್ವರ ರಾಗ ಸಿರಿ ಹಿರಿಮೆಯ ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ ಶಂಕರನಾರಾಯಣ ಇವರ ಹಿಮ್ಮೇಳದಲ್ಲಿ ಅಪರೂಪದ ಕಥಾನಕ ಪ್ರದರ್ಶನಗೊಳ್ಳಲಿದೆ.
ರಮೇಶ್ ಭಂಡಾರಿ ಕಡತೋಕಾ, ಗುರುರಾಜ ಪಡಿಯಾರು ಮದ್ದಲೆ, ಚೆಂಡೆ ಸಾಥ್ ನೀಡುವರು.
ಮುಮ್ಮೇಳದಲ್ಲಿ ಖ್ಯಾತ ಕಲಾವಿದರಾದ ಉಜಿರೆ ಅಶೋಕ್ ಭಟ್, ಚಂದ್ರಹಾಸ ಹೊಸಪಟ್ಟಣ ಕೃಷ್ಣರ ಪಾತ್ರದಲ್ಲಿ,
ಬಲರಾಮನಾಗಿ ಪ್ರಸನ್ನ ಶೆಟ್ಟಿಗಾರ್,ಅಸಿಕೆಯಾಗಿ ಸುಧೀರ್ ಉಪ್ಪೂರು,ಪಂಚಜನನಾಗಿ ಕೋಡಿ ವಿಶ್ವನಾಥ್ ಗಾಣಿಗ , ಅರ್ಜುನನಾಗಿ ಕೋಟ ಸುರೇಶ ಬಂಗೇರ, ಮೃತ್ಯು ಮಾಲಿನಿಯಾಗಿ ಮಾಧವ ನಾಗೂರ ಸಹಿತ ಇತರ ಕಲಾವಿದರು ಪಾತ್ರ ನಿರ್ವಹಿಸಲಿದ್ದಾರೆ.
ಮೇರು ಭಾಗವತರಾದ ದಿ. ಗುಂಡ್ಮಿ ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರರ ನಂತರ ಅನೇಕ ವರ್ಷ ಸ್ಟಾರ್ ಭಾಗವತರಾಗಿ ಮಿಂಚಿದ ಮಯ್ಯ ಅವರು ಒಂದು ದಶಕದ ನಂತರ ಅವಳಿನಗರದಲ್ಲಿ ‘ಯಕ್ಷ’ಗಾನ ಸವಿ ಉಣಬಡಿಸಲಿದ್ದಾರೆ.