*ಕನ್ನಡಿಗರ ಕರೆ ತರಲು ವಿಶೇಷ ವಿಮಾನ ವ್ಯವಸ್ಥೆ / ಕೇಂದ್ರ ಗೃಹ ಸಚಿವರಿಗೆ ಸಚಿವ ಲಾಡ್ ವಿವರಣೆ / ಮೃತ ದೇಹಗಳಿಗೆ ಗೌರವ ನಮನ /ಮೂರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ*
ಪಹಲ್ಗಾಮ್ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನ ಬೈಸರಾನ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28ಕ್ಕೂ ಹೆಚ್ಚು ನಿರಪರಾಧಿ ಪ್ರವಾಸಿಗರು ಬಲಿಯಾಗಿದ್ದು, ಇವರಲ್ಲಿ ಮೂವರು ಕರ್ನಾಟಕದವರಾಗಿದ್ದಾರೆ.
ದಾಳಿಯಲ್ಲಿ ಸಂತ್ರಸ್ತರಾದವರ ರಕ್ಷಣೆಗೆ ಕರ್ನಾಟಕದಿಂದ ಧಾವಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ವಿವರಣೆ ನೀಡಿದರು.
ಕನ್ನಡಿಗರ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪಹಲ್ಗಾಮ್ ಗೆ ಸಂತೋಷ್ ಲಾಡ್ ಅವರು ಬಂದಿಳಿದಿದ್ದಾರೆ. ಬೆಳಗ್ಗಿನಿಂದಲೇ ಲಾಡ್ ಅವರು ಮೃತದೇಹವನ್ನು ಇರಿದಿರುವ ಸ್ಥಳಗಳಿಗೆ ತೆರಳಿ ಮೃತದೇಹ ಗುರುತಿಸಲು ಸಂಬಂಧಿಕರಿಗೆ ಸಹಾಯ ಮಾಡುತ್ತಿದ್ದು, ರಾಜ್ಯದ ಮೂವರು ಅಸು ನೀಗಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.
ಮೃತರನ್ನು ಶಿವಮೊಗ್ಗದ ಮಂಜುನಾಥ, ಬೆಂಗಳೂರಿನ ಭರತ ಭೂಷಣ, ಮಧುಸೂದನ ಎನ್ನಲಾಗಿದೆ.
150ಕ್ಕೂ ಹೆಚ್ಚು ಕನ್ನಡಿಗರು ಕಾಶ್ಮೀರದಲ್ಲಿದ್ದು ಅವರೆಲ್ಲರನ್ನೂ ವಿಶೇಷ ವಿಮಾನದಲ್ಲಿ ಕರೆ ತರಲಾಗುವುದು, ಮೃತ ದೇಹ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಲಾಡ್ ಹೇಳಿದರು.
ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಮಾತನಾಡಿದ ಲಾಡ್ ಅವರು, ರಕ್ಷಣಾ ಕಾರ್ಯದ ಬಗ್ಗೆ ವಿವರಣೆ ನೀಡಿದರು. ಉಗ್ರರ ದಾಳಿಯಲ್ಲಿ ಮೃತರಾದವರ ಪಾರ್ಥಿವ ಶರೀರವನ್ನು ಶ್ರೀನಗರದಲ್ಲಿ ಇರಿಸಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಸಚಿವ ಲಾಡ್ ಮೃತದೇಹಗಳಿಗೆ ನಮನ ಸಲ್ಲಿಸಿದರು.
ಕೃತ್ಯ ಎಸಗಿದ್ದಾರೆ ಎನ್ನಲಾದ ಮೂವರು ಭಯೋತ್ಪಾದಕರಾದ ಆಸೀಫ್, ಸುಲೇಮಾನ್, ಅಬೂಬ್ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಸ್ವತಃ ಗೃಹ ಸಚಿವ ಪಹಲ್ಗಾಮಕ್ಕೆ ಭೇಟಿ ನೀಡಲಿದ್ದು, ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಭಧ್ರತಾ ಸಮಿತಿ ನಡೆಯಲಿದೆ.