*ಪ್ರಕರಣ ದಾಖಲಾದ 72 ಗಂಟೆಗಳಲ್ಲಿ ಆರೋಪಿ ಅಂದರ್*
ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಹಾಳ ಕೈಗಾರಿಕಾ ಪ್ರದೇಶದ ಬ್ಯಾಂಕ್ ವೃತ್ತದ ಬಳಿ ನಿಲ್ಲಿಸಿದ್ದ 14 ಲಕ್ಷ ಮೌಲ್ಯದ ಹೈಡ್ರಾಲಿಕ್ ಮೊಬೈಲ್ ಕ್ರೇನ್ ಕಳುವು ಮಾಡಿದ್ದ ಖತರ್ನಾಕ್ ಕಳ್ಳನನ್ನು ಇತ್ತೀಚೆಗೆ ರಾಮಸೇತು ಸಮುದ್ರ ಈಜಿ ಅಪರೂಪದ ಸಾಧನೆ ಮಾಡಿರುವ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ್ ತಂಡ ಹೆಡೆಮುರಿ ಕಟ್ಟಿದೆ.
ಹಳಿಯಾಳ ತಾಲೂಕಿನ ರಘುನಾಥ ಸುರೇಶ ಕದಂ ಅವರು ನೀಡಿದ ದೂರಿನ ಮೇರೆಗೆ ಚುರುಕಿನ ಕಾರ್ಯಾಚರಣೆ ನಡೆಸಿದ ತಂಡ ಬೆಳಗಾವಿ, ಕೊಲ್ಲಾಪೂರ, ಸತಾರಾ, ಕರಾಡಾ ಮತ್ತು ಉತ್ತರ
ಕನ್ನಡ ಜಿಲ್ಲೆಯಲ್ಲಿ ಪತ್ತೆ ಕಾರ್ಯ ಕೈಕೊಂಡು ಪ್ರಕರಣ ದಾಖಲಾದ 72 ಗಂಟೆಗಳಲ್ಲಿ ಪತ್ತೆ ಮಾಡಿ ಆರೋಪಿ ಖಾನಾಪುರ ತಾಲೂಕಿನ ನಂದಗಡದ ಸೈಪುಲ್ಲಾ ಕಮಾಲಸಾಹೇಬ ಮುಲ್ಲಾ ಈತನನ್ನು ಬಂಧಿಸಿದೆ .
ಎಸ್ಪಿ ಗೋಪಾಲ ಬ್ಯಾಕೋಡ ಸಹಿತ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಎಮ್ ಡಿ ಪಾಟೀಲ ಮತ್ತು ಠಾಣೆಯ ಅಪರಾಧ ದಳದ ಸಿಬ್ಬಂದಿ ಎಚ್ ಬಿ ಐಹೊಳೆ, ಅಬ್ರಾರ್ ಪಾಟೀಲ,ಅಬ್ದುಲ್ಲಾ ಕಾಕರ ಚನ್ನಪ್ಪ
ಬಳ್ಳೊಳ್ಳಿ, ಮಾಂತೇಶ ಮದ್ದೀನ, ಗಿರೀಶ ತಿಪ್ಪಣ್ಣವರ, ತಿಪ್ಪಣ್ಣ ಆಲೂರ ಮತ್ತು
ತಾಂತ್ರಿಕ ಸಿಬ್ಬಂದಿಯಾದ ಆರೀಪ್ ಗೋಲಂದಾಜ, ವಿಠ್ಠಲ ಡಂಗನವರ ಇವರನ್ನೊಳಗೊಂಡ
ತಂಡ ಕಾರ್ಯಾಚರಣೆ ನಡೆಸಿತ್ತು.
ಆರೋಪಿತನು ಹೈವೆದಲ್ಲಿ ಸುತ್ತಾಡದೇ ಹಳ್ಳಿಗಳ ರಸ್ತೆ ಮಾರ್ಗಗಳನ್ನು ಉಪಯೋಗಿಸಿ, ತಪ್ಪಿಸಿಕೊಂಡು ಸುತ್ತಾಡುತ್ತಿದ್ದವನನ್ನು ಸಿಸಿ ಟಿ.ವ್ಹಿ ಪುಟೇಜ್ಗಳ ಸಹಾಯದಿಂದ ಆರೋಪಿಯನ್ನು ವಶಕ್ಕೆ ಪಡೆದಿದೆ.