ಧಾರವಾಡ : ಗ್ರಾಹಕರ ಠೇವಣಿ ವಾಪಸ್ ಮಾಡದೆ ಸೇವಾ ನ್ಯೂನ್ಯತೆ ಎಸಗಿದ ಬೈಲಹೊಂಗಲ ಮೂಲದ ಕಿತ್ತೂರು ರಾಣಿ ಚೆನ್ನಮ್ಮ ಸೊಸೈಟಿಗೆ ದಂಡ ವಿಧಿಸಿ ಮತ್ತು ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಸೊಸೈಟಿಯ ಸದಸ್ಯರಾದ ದೂರುದಾರರು ಠೇವಣಿ ರೂಪದಲ್ಲಿ ಇಟ್ಟಂತಹ ಹಣವನ್ನು ಎದುರುದಾರರು ತಮ್ಮ ಸೊಸೈಟಿಯ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡಿದ್ದು, ಅಲ್ಲದೆ ಠೇವಣಿ ಅವಧಿ ಮುಗಿದಿದ್ದರೂ ದೂರುದಾರರು ಹಣವನ್ನು ಬಡ್ಡಿಯೊಂದಿಗೆ ಮರಳಿ ಕೊಡದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ತೀರ್ಪು ನೀಡಿ ಠೇವಣಿ ಇಟ್ಟ ದಿನಾಂಕಗಳಿಂದ ಶೇ.11 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ.
ಜೊತೆಗೆ ಸೇವಾ ನ್ಯೂನ್ಯತೆ ಯಿಂದ ದೂರುದಾರರಿಗೆ
ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗೆ ತಲಾ ರೂ.50,000 ಪರಿಹಾರ ಹಾಗೂ ತಲಾ ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡಲು ಸೊಸೈಟಿ ಚೇರಮನ್ ವಿರುಪಾಕ್ಷಿ ಶಿ. ಸಾದುನವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.
*ಹಿನ್ನೆಲೆ* : ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿಗಳಾದ ಅಮರೇಶ ಅಂಗಡಿ, ಆನಂದ ವಾಳವೇಕರ ಹಾಗೂ ಶಿವನಗೌಡ ಪಾಟೀಲ ಇವರು ಉಣಕಲ್ಲಿನಲ್ಲಿರುವ ಕಿತ್ತೂರು ಚೆನ್ನಮ್ಮ ಸೊಸೈಟಿಯಲ್ಲಿ 2024 ರಲ್ಲಿ ಒಂದು ವರ್ಷದಅವಧಿಗೆ ರೂ:4,59,000, ರೂ:4,00,000 ಹಾಗೂ ರೂ:2,00,000 ಮೊತ್ತವನ್ನು ಖಾಯಂ ಠೇವಣಿ ಇಟ್ಟಿದ್ದರು. ಆ ಠೇವಣಿ ಅವಧಿ 2025 ಕ್ಕೆ ಮುಕ್ತಾಯವಾಗುತ್ತಿತ್ತು. ಆದರೆ ಎದುರುದಾರರು ಠೇವಣಿ ಹಣವನ್ನು ಕೊಡದೆ ತಮಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತ ಹೇಳಿ ಸೊಸೈಟಿಯವರ ಮೇಲೆ ಕ್ರಮಕೈಗೊಂಡು ತಮ್ಮ ಠೇವಣಿ ಹಣ ಮರುಪಾವತಿಸುವಂತೆ ಮತ್ತು ತಮಗಾದ ತೊಂದರೆ ಮತ್ತು ಮಾನಸಿಕ ಹಿಂಸೆಗೆ ಈ ಪ್ರಕರಣದ ಖರ್ಚು ಸಮೇತ ಪರಿಹಾರ ಕೊಡಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿನಾಂಕ 21.04.2025 ದೂರು ಸಲ್ಲಿಸಿದ್ದರು.
ಸದರಿ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿ.ಅ.ಬೋಳಶೆಟ್ಟಿ ಸದಸ್ಯರು ಉಭಯತರ ವಾದ ಆಲಿಸಿ ತೀರ್ಪು ನೀಡಿದ್ದಾರೆ.