ಹುಬ್ಬಳ್ಳಿ : ನೆಲಮಂಗಲ ಬಳಿ ನಡೆದ ದುರಂತದಲ್ಲೀ ಒಂದೇ ಕುಟುಂಬದ 6 ಸದಸ್ಯರು ಸಾವನ್ನಪ್ಪಿರುವ ಘಟನೆ ಮಾಸುವ ಮೊದಲೇ ಎರಡು ಕಾರುಗಳ ಮಧ್ಯೆ ಢಿಕ್ಕಿ ಸಂಭವಿಸಿ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ತಡಸ ಕ್ರಾಸ್ ಬಳಿ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ತಡಸ್ ಕ್ರಾಸ್ ಸಮೀಪದ ತಿಮ್ಮಾಪುರದ ಬಳಿ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಎಸ್ಯುವಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ.
ಢಿಕ್ಕಿಯ ರಭಸಕ್ಕೆ ಒಂದು ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಾರಿನಲ್ಲಿದ್ದ ಚಾಲಕ ಹಾಗೂ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೃತರನ್ನು ಬೆಂಗಳೂರು ಚಾಮರಾಜಪೇಟೆಯ ಚಂದ್ರಮ್ಮ (59), ಹರಿಹರದ ಮೀನಾ (38), ಮಹೇಶಕುಮಾರ ಸಿ (41) ಹಾಗೂ ಧನ್ವೀರ್ (11) ಎಂದು ಹೇಳಲಾಗಿದೆ.