ಹುಬ್ಬಳ್ಳಿ : ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಪಾರ್ಕ್ ಪ್ರವೇಶ ದರ ಮೊತ್ತದ ಒಟ್ಟೂ 6,62,410 ರೂಪಾಯಿ ಸರ್ಕಾರಿ ಖಾತೆಗೆ ಜಮಾ ಮಾಡದೇ ದುರ್ಬಳಕೆ ಮಾಡಿಕೊಂಡ ಹುಬ್ಬಳ್ಳಿ ಪ್ರಾದೇಶಿಕ ಅರಣ್ಯ ವಲಯದ ಪ್ರಥಮ ದರ್ಜೆ ಸಹಾಯಕ ವಿಶ್ವನಾಥ್. ಬ.ಮಹಾಜನ ಎಂಬುವವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶ್ ಕುಮಾರ್ ದಿ.21ರಂದು ಕರ್ನಾಟಕ ನಾಗರೀಕ ಸೇವಾ ನಿಯಮಗಳ ಉಲ್ಲಂಘನೆ ಹಿನ್ನಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ ವರದಿ ಆಧರಿಸಿ ಅಮಾನತು ಮಾಡಿದ್ದಾರೆ.
ಮಹಾಜನ 20-05-2024ರಿಂದ 19-01-2025ರವರೆಗಿನ ಅವಧಿಯಲ್ಲಿ ಸಂಗ್ರಹವಾದ ಪಾರ್ಕ್ ಪ್ರವೇಶ ಶುಲ್ಕ ಆರು ಲಕ್ಷ ಅರವತ್ತೆರಡು ಸಾವಿರ ನಾಲ್ಕು ನೂರಾ ಹತ್ತು ರೂಪಾಯಿ ಸರ್ಕಾರಿ ಖಾತೆಗೆ ಜಮಾ ಮಾಡದೇ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಅಶೋಕ್ ನಗರ ಠಾಣೆಯಲ್ಲಿ ದೂರು ದಾಖಲಾಗಿ (0016/2025) 04-03-2025ರಂದು ಈತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು.
ಇತರೆ ಮಹತ್ವದ ಸುದ್ದಿಗಳು*
ಎನ್ಕೌಂಟರ್ ಸ್ಥಳಕ್ಕೆ ಸಿಐಡಿ ಎಡಿಜಿಪಿ*
1) ಬಾಲಕಿ ಹತ್ಯೆಗೈದ ಆರೋಪಿ ಎನ್ಕೌಂಟರ್ ಪ್ರಕರಣದ ಹಿನ್ನೆಲೆಯಲ್ಲಿ ಪ್ರಕರಣದ ಮಾಹಿತಿ ಪಡೆಯಲು ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್. ಈಗಾಗಲೇ ಪ್ರಕರಣದ ಮತ್ತಷ್ಟು ಮಾಹಿತಿ ಪಡೆಯಲು CID ಎಡಿಜಿಪಿ ಬಿ.ಕೆ.ಸಿಂಗ್ ಅವರು ಹುಬ್ಬಳ್ಳಿಗೆ ಆಗಮಿಸಿ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಕೃತ್ಯ ಎಸಗಿದ ಘಟನಾ ಸ್ಥಳಕ್ಕೆ ಮತ್ತು ಎನ್ಕೌಂಟರ್ ನಡೆದ ಸ್ಥಳಕ್ಕೆ
ಭೇಟಿ ನೀಡಿ ಪರಿಶೀಲನೆ ಮಾಡಿದರು. ಸಿಐಡಿ ಎಸ್ಪಿ ವೆಂಕಟೇಶ ಮತ್ತು ಎಸಿಪಿ ಶಿವಪ್ರಕಾಶ್ ನಾಯಕ್ ರಿಂದ ಮಾಹಿತಿ ಪಡೆದರು
*ಜಮ್ಮು ಗುಂಡಿನ ದಾಳಿಗೆ ಶಿವಮೊಗ್ಗ ಉದ್ಯಮಿ ಬಲಿ*
2). ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ನಡೆಸಿದ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ (47) ಮೃತ ಪಟ್ಟಿದ್ದಾರೆ. 19 ರಂದು ಶಿವಮೊಗ್ಗದಿಂದ ಕಾಶ್ಮೀರ ಪ್ರವಾಸಕ್ಕೆ ಮಂಜುನಾಥ್ ಕುಟುಂಬಸ್ಥರು ತೆರಳಿದ್ದರು.ಅವರ ಪತ್ನಿ ಪಲ್ಲವಿ ಹಾಗೂ ಪುತ್ರ ಸುರಕ್ಷಿತವಾಗಿದ್ದಾರೆ.
*ಗುಂಡಿನ ದಾಳಿ : ಸಿಎಂ ಮಹತ್ವದ ಸಭೆ*
3) ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಯವರು ತಕ್ಷಣ ಕಾರ್ಯಪ್ರವತ್ತರಾಗುವಂತೆ ಸೂಚನೆ ನೀಡಿದರು.
ಸಿಎಂ ಅವರ ಸೂಚನೆ ಮೇರೆಗೆ ಅಧಿಕಾರಿಗಳ ಒಂದು ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಪೊಲೀಸ್ ಅಧಿಕಾರಿಗಳೂ ತೆರಳಿದ್ದಾರೆ.