ಧಾರವಾಡ: ಆಟ ಆಡಲು ಹೋದ ಮೂರು ವರ್ಷ ವಯಸ್ಸಿನ ಅವಳಿ ಮಕ್ಕಳು ಕೆರೆಯಲ್ಲಿ ಬಿದ್ದು ಮೃತಪಟ್ಟ ದಾರುಣ ಘಟನೆ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಗ್ರಾಮದ ಮುದಸ್ಸಿರ್ ಶರೀಫಸಾಬ ಚಂದುಖಾನವರ ಹಾಗೂ ಮುಜಮ್ಮಿಲ್ ಶರೀಫಸಾಬ ಚಂದುಖಾನವರ ಎಂಬ ಅವಳಿ ಮಕ್ಕಳೇ ಮೃತಪಟ್ಟವರು.ಮಕ್ಕಳಿಬ್ಬರ ತಂದೆ ಶರೀಫಸಾಬ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದು, ತಾಯಿ ಮಕ್ಕಳಿಗೆ ಊಟ ಮಾಡಿಸಿ ಕೆಲಸಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ.ಮನೆ ಕೆರೆಯ ದಂಡೆ ಮೇಲಿರುವುದರಿಂದ ಆಡುತ್ತಿದ್ದಾಗಲೇ ದುರಂತ ನಡೆದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ತಹಶೀಲ್ದಾರ ರಾಜು ಮಾವರಕರ, ಸಿಪಿಐ ಶಿವಾನಂದ ಅಂಬಿಗೇರ, ತಾ.ಪಂ. ಇಒ ಜಗದೀಶ ಕಮ್ಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.