*ಆಹ್ವಾನಿತ ಪಂದ್ಯಾವಳಿಗಳಲ್ಲಿ ರನ್ಗಳ ಮಳೆ ಸುರಿಸಿರುವ ಏಳನೇ ತರಗತಿ ವಿದ್ಯಾರ್ಥಿ/ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ಹಿರಿಯ ಕೋಚ್ ದಯಾನಂದ ಶೆಟ್ಟಿಯವರಿಂದ ಸೂಕ್ಷ್ಮತೆಯ ಸೂಕ್ತ ಮಾರ್ಗದರ್ಶನ*
ಹುಬ್ಬಳ್ಳಿ: ‘ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು’ ಎಂಬ ಮಾತಿನಂತೆ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಹನ್ನೆರಡು ವರ್ಷದ ಬಾಲಕನೊಬ್ಬ ಬಲಗೈ ಬ್ಯಾಟ್ಸ್ಮನ್ ಆಗಿ ಹದಿನಾಲ್ಕು ವರ್ಷದೊಳಗಿನ ಆಹ್ವಾನಿತ, ಶಾಲಾ ಪಂದ್ಯಗಳಲ್ಲಿ ರನ್ಗಳ ಮಳೆಯನ್ನೇ ಹರಿಸುತ್ತಿದ್ದಾನಲ್ಲದೇ, ಮಧ್ಯಮ ವೇಗಿ ಬೌಲರ್ ರೂಪದಲ್ಲಿ ಕೂಡ ವಿಕೆಟ್ಗಳ ಗೊಂಚಲನ್ನು ತನ್ನದಾಗಿಸಿಕೊಂಡು ಮುಂಬರುವ ದಿನಗಳಲ್ಲಿ ಭರವಸೆಯ ಆಲ್ರೌಂಡರ್ ಆಗುವ ಎಲ್ಲ ಲಕ್ಷಣ ತೋರಿಸಿದ್ದಾನೆ.
ಹೌದು, ಹುಬ್ಬಳ್ಳಿ ನಗರದ ಸೇಂಟ್ ಅಂಥೋನಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ ಸಿದ್ದಾರ್ಥ್ ತೇರದಾಳ ಚಿಕ್ಕ ವಯಸ್ಸಿನಲ್ಲೇ ತನ್ನ ಪ್ರತಿಭೆ ಮೂಲಕ ಮಿಂಚುತ್ತಿದ್ದಾನೆ. ಆತನಿಗೆ ತಿಳುವಳಿಕೆ ಬರುವ ಮುಂಚೆಯೇ ಕ್ರಿಕೆಟ್ ಮೋಹಕ್ಕೆ ಒಳಗಾಗಿದ್ದು, ಆತನ ರಕ್ತದ ಪ್ರತಿಕಣದಲ್ಲೂ ಕ್ರಿಕೆಟ್ ಇದೆ ಎನ್ನುವಷ್ಟರ ಮಟ್ಟಿಗೆ ಆತ ಆಟದ ಬಗೆಗೆ ಪ್ರೀತಿ ಬೆಳೆಸಿಕೊಂಡಿದ್ದಾನೆ.
ಆತ ಪ್ರಸಕ್ತ ವರ್ಷ ಇಲ್ಲಿಯವರೆಗೆ ಸುಮಾರು ಇಪ್ಪತ್ತೆಂಟಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಿದ್ದು, ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ಕ್ರೀಸ್ಗೆ ಅಂಟಿಕೊಂಡು ತನ್ನ ತಂಡವನ್ನು ಗೆಲುವಿನ ದಡ ತಲುಪಿಸಿದ್ದಾನೆ. 71 ಎಸೆತಗಳಲ್ಲಿ 84ರನ್ ಗಳಿಸಿದ್ದು ಆತನ ಇತ್ತೀಚಿಗಿನ ಉತ್ತಮ ಸಾಧನೆಯಾದರೆ, ಎಂಟು-ಹತ್ತು ಅರ್ಧ ಶತಕಗಳ ಮೂಲಕ ಕ್ರಿಕೆಟ್ ಕ್ಷೇತ್ರದಲ್ಲಿ ಸದ್ದು ಮಾಡಿದ್ದಾನೆ.
ಕಾರುಗಳ ಮಾರಾಟದ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ವಿದ್ಯಾಧರ ತೇರದಾಳ ಅವರು ತಮ್ಮ ಮಗ ಸಿದ್ಧಾರ್ಥನಲ್ಲಿನ ಕ್ರಿಕೆಟ್ ಆಸಕ್ತಿ ಗುರುತಿಸಿ, ಹಿಟ್ಮ್ಯಾನ ಎಂದೇ ಕರೆಯಲ್ಪಡುವ ದಿಗ್ಗಜ ಕ್ರಿಕೇಟಿಗ ರೋಹಿತ್ ಶರ್ಮಾ ಉದ್ಘಾಟನೆ ಮಾಡಿದ ಹುಬ್ಬಳ್ಳಿಯ ಹೊಸ ಕೋರ್ಟ್ ಸಂಕೀರ್ಣ ಬಳಿಯ ಉದ್ಯಮಿ ವೀರೇಶ ಉಂಡಿ ಮಾಲಿಕತ್ವದ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಸಿದರು. ಅಲ್ಲಿನ ತರಬೇತುದಾರರಾದ ಹುಬ್ಬಳ್ಳಿಯ ಹಿರಿಯ ಆಟಗಾರ ದಯಾನಂದ ಶೆಟ್ಟಿ ಈತನ ಪ್ರತಿಭೆಗೆ ನೀರೆರೆಯತ್ತಿದ್ದು, ಬ್ಯಾಟಿಂಗ್ ತಂತ್ರಗಾರಿಕೆ, ಬೌಲಿಂಗ್ ಕೌಶಲ್ಯಕ್ಕೆ ಒತ್ತು ನೀಡಿದ್ದು ಫಲಕಾರಿಯಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿನ ವಿವಿಧ ಆಹ್ವಾನಿತ ಪಂದ್ಯಾವಳಿಯ ಪಂದ್ಯಗಳಲ್ಲಿ ರನ್ಗಳ ಹೊಳೆ ಹರಿಸಿ, ಸಿದ್ಧಾರ್ಥ ಭರವಸೆಯ ಬಾಲ ಕ್ರಿಕೆಟ್ ಆಟಗಾರನಾಗಿ ಹೊರಹೊಮ್ಮಿದ್ದಾನೆ.
ಈಗಾಗಲೇ ಇದೇ ಅಕಾಡೆಮಿಯಲ್ಲಿ ತರಬೇತಿ ಪಡೆದು, ರಾಜ್ಯ ಮಟ್ಟದ, ವಲಯ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್, ಮಿಂಚಿನ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆದ, ಸ್ವತಃ ರಾಹುಲ್ ದ್ರಾವಿಡ್ ಅವರಿಂದಲೂ ಬೆನ್ನು ತಟ್ಟಿಸಿಕೊಂಡ ಜಾಯ್ ಸುಳ್ಳದ ಸಹ ಸಿದ್ದಾರ್ಥನ ಏಕಾಗ್ರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, “ಸಿದ್ಧಾರ್ಥ ಉತ್ತಮ ಆಲ್ರೌಂಡರ್ ಆಗುವದು ನಿಶ್ಚಿತ” ಎಂಬ ಭರವಸೆ ವ್ಯಕ್ತಪಡಿಸಿದ್ದಾನೆ.
ಸಿದ್ಧಾರ್ಥನ ಕ್ರಿಕೆಟ್ ಆಟದ ಆಸೆಗೆ ನೀರೆರೆದು, ಪೋಷಿಸಿದವರಲ್ಲಿ ಆತನ ತಾಯಿ ದೀಪಾ ತೇರದಾಳ ಅವರದು ಮಹತ್ತರ ಕೊಡುಗೆ ಇದೆ. ನಸುಕಿನಲ್ಲಿಯೇ ಎಚ್ಚರಿಸಿ, ತಯಾರಿ ಮಾಡಿ, ಸರಿಯಾದ ಸಮಯಕ್ಕೆ ಆತನನ್ನು ಆಟದ ಮೈದಾನಕ್ಕೆ ಕರೆದುಕೊಂಡು ತಂದು ಬಿಡುವುದನ್ನು ಪ್ರತಿನಿತ್ಯ ಅವರು ಒಂದು ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ. ಪಂದ್ಯಗಳು ಎಲ್ಲಿಯೇ ನಡೆಯಲಿ, ತಮ್ಮ ಎಲ್ಲ ಕೆಲಸಗಳನ್ನು ಬದಿಗೊತ್ತಿ ಆತನ ಜೊತೆಯಾಗಿ ನಿಲ್ಲುತ್ತಿದ್ದಾರೆ ಆತನ ತಂದೆ ವಿದ್ಯಾಧರ.
“ಸಿದ್ಧಾರ್ಥನನ್ನು ನನ್ನ ಮಗ ಎಂದು ಗುರುತಿಸುವುದಕ್ಕಿಂತ, ನಾನು ಸಿದ್ಧಾರ್ಥನ ತಂದೆ ಎಂದು ಜನ ಗುರುತಿಸುವಂತಾಗಬೇಕು. ಆ ಮಟ್ಟಕ್ಕೆ ನನ್ನ ಮಗ ಸಾಧನೆ ಮಾಡಬೇಕು. ಅಂದಾಗ ಮಾತ್ರ ನಮ್ಮ ಶ್ರಮ ಸಾರ್ಥಕವಾಗುತ್ತದೆ,” ಎನ್ನುವ ವಿಧ್ಯಾಧರ, “ಸಿದ್ಧಾರ್ಥನ ಆಟದ ಗಟ್ಟಿತನ, ಶೈಲಿ ಕಂಡು ಬೇರೆ ಬೇರೆ ತಂಡಗಳ ತರಬೇತುದಾರರು ‘ ಸಿದ್ಧಾರ್ಥನನ್ನು ತಮ್ಮ ತಂಡಗಳಿಗೆ ಆಡಲು ಕಳಿಸಿ’ ಎಂದು ಪ್ರೀತಿಯಿಂದ ಕೇಳುವಾಗ ನನಗೆ ಹೆಮ್ಮೆ ಎನಿಸುತ್ತದೆ,” ಎನ್ನುತ್ತಾರೆ.
ವಾಣಿಜ್ಯ ರಾಜಧಾನಿಯ ಅನೇಕ ಪ್ರತಿಭೆಗಳು ರಾಜ್ಯ ಪ್ರತಿನಿಧಿಸಿ ಹೆಸರು ಮಾಡಿವೆ. ಸದ್ಯ ಸಿದ್ಧಾರ್ಥನ ಪ್ರತಿಭೆ, ಸಾಮರ್ಥ್ಯ ನೋಡಿದಲ್ಲಿ ಒಂದೆರಡು ವರ್ಷಗಳಲ್ಲಿ ನೂರಕ್ಕೆ ನೂರರಷ್ಟು ಆತ ರಾಜ್ಯ ಪ್ರತಿನಿಧಿಸುತ್ತಾನೆ. “ಆಟದ ಬಗೆಗಿನ ಆತನ ಪ್ರೀತಿ, ಆಟದಲ್ಲಿನ ತನ್ಮಯತೆ, ಬ್ಯಾಟಿಂಗ್ ಮತ್ತು ವಿಕೆಟ್ ಪಡೆದುಕೊಳ್ಳುವಲ್ಲಿನ ಸ್ಥಿರತೆ ಮತ್ತು ಆಕ್ರಮಣಕಾರಿ ಗುಣ, ಮತ್ತು ಫೀಲ್ಡಿಂಗ್ ನಲ್ಲಿ ತೋರುವ ಬದ್ಧತೆ ಇವೆಲ್ಲವೂ ಆತನ ದೊಡ್ಡ ಶಕ್ತಿ. ಇವೇ ಗುಣಗಳು ಆತ ಒಳ್ಳೆಯ ಆಟಗಾರನಾಗಿ ಬೆಳೆಯಬಲ್ಲ ಎನ್ನುವುದಕ್ಕೆ ಸಾಕ್ಷಿ,” ಎನ್ನುವ ಭರವಸೆಯ ಮಾತುಗಳಿಂದ ಬೆನ್ನು ತಟ್ಟುತ್ತಾರೆ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಕೋಚ್ ಹಾಗೂ ಮೆಂಟರ್ ದಯಾನಂದ ಶೆಟ್ಟಿ.
ಸ್ನೇಹಿತರು ಆತನನ್ನು ಸೌಥ್ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಬವುಮಾ ಗೆ ಹೋಲಿಸುತ್ತಿದ್ದು, ಇನ್ನಷ್ಟು ತರಬೇತಿ ಪಡೆದು ಮುಂದಿನ ದಿನಗಳಲ್ಲಿ ಈತ ಅಂಡರ್ 16 ಹಾಗೂ ಇತರೆ ಪಂದ್ಯಗಳಲ್ಲಿ ಮಿಂಚಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಿದ್ಧಾರ್ಥ ಅವಕಾಶ ಪಡೆಯಲಿ ಎಂಬುವುದೇ ನಮ್ಮ ಹಾರೈಕೆ.