ಧಾರವಾಡ : ಕುಟುಂಬ ನ್ಯಾಯಾಲಯದಲ್ಲಿ ನಡೆದ ರಾಜಿ ಪ್ರಕ್ರಿಯೆಯಲ್ಲಿ ಸುಮಾರು 55 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡವು. ಅವುಗಳಲ್ಲಿ ಪ್ರಮುಖವಾಗಿ 15 ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪುನರ್ಮಿಲನಗೊಂಡು ಮತ್ತೆ ಒಂದಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ.

ಮತ್ತೆ ಜೊತೆಯಾದ ದಂಪತಿಗಳಿಗೆ ಹಾರ ಬದಲಾಯಿಸಿ ಶುಭಾಶಯ ಕೋರಲಾಯಿತು. ಕುಟುಂಬದ ಸದಸ್ಯರು ಹಾಗೂ ನ್ಯಾಯಾಲಯದ ಸಿಬ್ಬಂದಿ ಈ ಬೆಳವಣಿಗೆಯನ್ನು ಸಂತಸದ ಕ್ಷಣವೆಂದು ಸ್ವಾಗತಿಸಿದರು. ಪರಸ್ಪರ ಹೊಂದಾಣಿಕೆ ಮತ್ತು ಸಂವಾದದ ಮೂಲಕ ದಾಂಪತ್ಯ ಜೀವನವನ್ನು ಮುಂದುವರಿಸಲು ದಂಪತಿಗಳು ಒಪ್ಪಿಕೊಂಡಿದ್ದು, ಸಂತೋಷದಿಂದ ತಮ್ಮ ಮನೆಗಳಿಗೆ ತೆರಳಿದರು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್. ವಿ. ವಿಜಯ್ ಅವರು ಹೇಳಿದರು.
ಇಂದು (ಜು.11) ಬೆಳಿಗ್ಗೆ ಧಾರವಾಡ ಜಿಲ್ಲಾ ನ್ಯಾಯಾಲಯದ 2ನೇ ಮಹಡಿಯಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ನಾಗರಾಜಪ್ಪ. ಎ.ಕೆ ಅವರು ಮಾತನಾಡಿ, ಕುಟುಂಬ ನ್ಯಾಯಾಲಯದಲ್ಲಿ ನಡೆದ ರಾಜಿ ಪ್ರಕ್ರಿಯೆಯಲ್ಲಿ 15 ಜೋಡಿಗಳು ಪುನರ್ಮಿಲನಕ್ಕೆ ಒಪ್ಪಿಕೊಂಡು ಮತ್ತೆ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಕೆಲವು ಜೋಡಿಗಳು 5, 10 ಹಾಗೂ 16 ವರ್ಷಗಳಿಂದ ಬೇರೆ ಬೇರೆ ವಾಸಿಸುತ್ತಿದ್ದರೆ, ಮತ್ತೊಂದು ಪ್ರಕರಣದಲ್ಲಿ ಕೇವಲ ಮೂರು ತಿಂಗಳ ಸಂಸಾರದ ಬಳಿಕ ದೂರವಾಗಿದ್ದ ದಂಪತಿಯೂ ಪುನರ್ಮಿಲನಗೊಂಡಿದ್ದಾರೆ ಎಂದು ಹೇಳಿದರು.
ಕುಟುಂಬದ ಕಲಹಗಳು ಯಾವುದೇ ಮನೆಯಲ್ಲೂ ಉಂಟಾಗಬಹುದು. ಆದರೆ ಸಮಸ್ಯೆಗಳನ್ನು ಮರೆತು ಪರಸ್ಪರ ಅರ್ಥೈಸಿಕೊಂಡು ಜೀವನ ನಡೆಸುವ ಮಹತ್ವವನ್ನು ದಂಪತಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಒಟ್ಟಾಗಿ ಬದುಕಿದರೆ ಜೀವನ ಹೇಗೆ ಸುಂದರವಾಗಿರುತ್ತದೆ ಹಾಗೂ ಬೇರೆ ಬೇರೆ ಇದ್ದರೆ ಎದುರಾಗುವ ಸಂಕಷ್ಟಗಳ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಈ ಪ್ರಯತ್ನಕ್ಕೆ ಧಾರವಾಡದ ವಕೀಲರು ಹಾಗೂ ಪಿಡಿಜೆ (ಪ್ರಧಾನ ಜಿಲ್ಲಾ ಮತ್ತು ಸತ್ರ) ನ್ಯಾಯಾಧೀಶರ ಸಹಕಾರವೂ ದೊರೆತಿದ್ದು, ಎಲ್ಲರ ಸಹಯೋಗದಿಂದ 15 ಜೋಡಿಗಳು ಸಂತೋಷದಿಂದ ಪುನರ್ಮಿಲನಗೊಂಡು ಹೊಸ ಜೀವನ ಆರಂಭಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಲ್ಲಪ್ಪ ಎಂ.ಬಡಿಗೇರ, ವಕೀಲರು ಇದ್ದರು.




