*ನಾಳೆ ಕೇಂದ್ರದ 35 ಮಕ್ಕಳ ಸಾಮೂಹಿಕ ಜನ್ಮದಿನ*/ *ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಜಗ್ಗೇಶ*
ಹುಬ್ಬಳ್ಳಿ : ಅಪ್ಪ ಇಲ್ಲ; ಅಮ್ಮ ಗೊತ್ತಿಲ್ಲ… ಇಲ್ಲವೇ ಅಮ್ಮ ಗೊತ್ತು ಅಪ್ಪ..ಎಲ್ಲಿ…? ಕಾಡುವ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವದು ಬಲು ಕಷ್ಟವೇ.? ಅಂಥ ಮಕ್ಕಳು ಸಮಾಜದಲ್ಲಿ ಬೆಳೆಯುತ್ತಿದ್ದಾರೆ. ಸಮಾಜವೇ ಅವರಿಗೆ ಆಶ್ರಯದಾತರಾಗಿ ಅಮ್ಮ ಅಪ್ಪ ಆಗಬೇಕು. ವಾತ್ಸಲ್ಯ ಪ್ರೀತಿ ಮಮಕಾರಗಳು ದೊರೆಯಬೇಕು. ಕೊರತೆ ಎನ್ನಿಸದ ಪ್ರೀತಿ ದೊರಕಬೇಕು ಎಂಬ ಸಂಕಲ್ಪದೊಂದಿಗೆ.
ಹೌದು. ಈ ನಿಟ್ಟಿನಲ್ಲಿ ಸೇವಾ ಭಾರತಿ ಟ್ರಸ್ಟ್ ಹುಬ್ಬಳ್ಳಿಯ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರ ಸದ್ದಿಲ್ಲದೇ ನಿಸ್ಪೃಹತೆಯಿಂದ ಅನಾಥ ಮಕ್ಕಳಿಗೆ ವಾತ್ಸಲ್ಯವನ್ನು ಧಾರೆಯೆರೆಯುತ್ತಿದೆ.
ಸಮಾಜದಲ್ಲಿನ ಗಣ್ಯ ವ್ಯಕ್ತಿಗಳ ಮಾತೆಯರೂ ಕೂಡ ತಾವೇ ಹೆತ್ತ ಮಕ್ಕಳಂತೆ ಪ್ರೀತಿ ತೋರುತ್ತಿದ್ದಾರೆ.ತಾಯಿ ಪ್ರೀತಿ ಕೊಡಲು ಈ ಕೇಂದ್ರದ ಹೃದಯ ತೆರೆದುಕೊಂಡಿದೆ.
ಈ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದಲ್ಲಿ ಇರುವ ಅನಾಥ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಸಂಸ್ಕಾರ ಪ್ರೀತಿ ಧಾರೆ ಎರೆಯಲು ಮಾತಾಜಿ ರತ್ನಮ್ಮ ಅಲ್ಲಿಯೇ ಸೇವೆ ಸಲ್ಲಿಸುತ್ತಲಿದ್ದಾರೆ.
ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಅಧ್ಯಕ್ಷರಾಗಿ ಶ್ರೀಮತಿ ಕಮಲಾ ಜೋಶಿ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ. ಅಲ್ಲದೇ ಅವರೊಂದಿಗೆ ಸೇವೆಯ ಸಂಕಲ್ಪ ತೊಟ್ಟಂತೆ ಅಹಿರ್ನಿಶೆ ನಿಸ್ಪೃಹರಾಗಿ ದುಡಿಯುತ್ತಲಿದ್ದಾರೆ ಮತ್ತವರ ತಂಡ.
ಪ್ರತಿ ವರ್ಷ ವಸಂತ ಪಂಚಮಿ ಸರಸ್ವತಿ ಜಯಂತಿ ಪ್ರತಿ ವರ್ಷ ಈ ದಿನದಂದು ಕೇಂದ್ರದಲ್ಲಿರುವ ಎಲ್ಲ ಮಕ್ಕಳಿಗೆ ಹುಟ್ಟುಹಬ್ಬದ ಸಂಭ್ರಮ. ಕೇಂದ್ರದಲ್ಲಿ ಸದಸ್ಯ 35ಮಕ್ಕಳಿದ್ದು, ಅಂದು ಸಮಾಜದ ಅಂತಃಕರಣವುಳ್ಳ ಮಾತೆಯರು ಬೆಳಗ್ಗೆಯೇ ಬಾಲಕೇಂದ್ರಕ್ಕೆ ತೆರಳಿ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಾರೆ. ಅಂಥದರಲ್ಲಿ ಪುಳಕ ಅನುಭವಿಸುತ್ತಾರೆ. ಬೆಳೆಯುವ ಮಕ್ಕಳಿಗೆ ತಾಯಿಯಾದವಳಿಗೆ ಎಲ್ಲಿಯ ಭೇದ ಭಾವ..?
ಈ ತಾಯಂದಿರು ಮಕ್ಕಳಿಗೆ ಪ್ರೀತಿ ಕೊಡುವದಲ್ಲದೇ ಹೊಸ ಅರಿವೆಗಳನ್ನು ತೊಡಿಸುತ್ತಾರೆ. ಸಿಹಿ ಉಣಿಸುತ್ತಾರೆ. ಅಲ್ಲದೇ ಸಂಜೆ ಭಾರತೀಯ ಪರಂಪರೆಯಂತೆ ಅಲ್ಲಿನ ಎಲ್ಲ ಮಕ್ಕಳಿಗೆ ಆರತಿ ಎತ್ತಿ ಆಶೀರ್ವದಿಸುತ್ತಾರೆ.
ಅರಿಯದ ವಯಸ್ಸಲ್ಲಿ ದಿಕ್ಕು ತೋಚದೆ ದಿಕ್ಕೆಟ್ಟು ಹೋದ ಮಕ್ಕಳಿಗೆ ಮೈದವಡಿ ರಟ್ಟೆ ಹಿಡಿದು ಎಬ್ಬಿಸಿದ್ದು ಸೇವಾ ಭಾರತಿ. ಮೂರೊತ್ತು ಮೃಷ್ಟಾನ್ನ ತಿನ್ನಿಸಿ, ಸಂಸ್ಕಾರದ ಜತೆಗೆ ಶಿಕ್ಷಣ ನೀಡುತ್ತಿರುವುದು ಬಾಲಕಲ್ಯಾಣ ಕೇಂದ್ರ. ಪ್ರಾಪ್ತೆಯಾದಾಗ ಹಸೆಮಣೆ ಏರಿಸಿ, ಸಪ್ತಪದಿ ತುಳಿಸುತ್ತಿರುವುದು ಸೇವಾಸದನ. ತವರಿಲ್ಲದಾ ಕೂಸಿಗೆ ತವರಿನಾ ವಾತ್ಸಲ್ಯ ತೋರಿಸಿದ್ದು ಮಾತೃಛಾಯಾ… ಅನಾಥ ಮಕ್ಕಳಿಗೆ ಮಾತೃಛಾಯ ತವರು ಮನೆ. ಅಲ್ಲಿಯೇ ಆಡಿ, ಬೆಳೆದ ಮಕ್ಕಳಿಗೆ ಅಲ್ಲಿದ್ದ ಮಾತೆಯರೇ ಅಮ್ಮಂದಿರು. 1999ರಲ್ಲಿ ಆರಂಭವಾದ ಈ ಕೇಂದ್ರ ಹಲವರಿಗೆ ಆಸರೆಯಾಗಿದೆ. ಈಗಾಗಲೇ 6 ಜನ ಯುವತಿಯರು ಹಸೆಮಣೆ ಏರಿ ಸಂತಸದ ಬದುಕು ಕಟ್ಟಿಕೊಂಡಿದ್ದಾರೆ. ನಾಳೆ ನಡೆಯುವ ವಸಂತ ಪಂಚಮಿ ಕಾರ್ಯಕ್ರಮದಲ್ಲಿ ಈ ಕೇಂದ್ರದ ಮಕ್ಕಳು ಅಳಿಯಂದಿರೇ ಸತ್ಯನಾರಾಯಣ ಪೂಜೆ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಇದಕ್ಕೆಲ್ಲಾ ಬೆಂಗಾವಲಾಗಿ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಕಮಲಾ ಜೋಶಿ, ಸೇವಾಭಾರತಿ ಟ್ರಸ್ಟ್ ಅಧ್ಯಕ್ಷ ಪೂರ್ಣಚಂದ್ರ (ಬಾಬುರಾವ್) ಘಂಟಸಾಲಾ ಮತ್ತು ಕಾರ್ಯದರ್ಶಿ ಡಾ. ರಘು ಅಕಮಂಚಿ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಕೃಷ್ಣನ್ ಆಗಿದ್ದಾರೆ. ಸೇವಾಭಾರತಿ ಕೇಂದ್ರದಲ್ಲಿ ಸೇವಾ ಮನೋಭಾವ ಹೊಂದಿರುವ ತಾಯಂದಿರು ಇರುವವರೆಗೆ ಯಾರೂ ಅನಾಥರಲ್ಲ’ ಎಂಬ ಧ್ಯೇಯದೊಂದಿಗೆ ಮಾತೃ ಛಾಯಾ ಬಾಲಕಲ್ಯಾಣ ಕೇಂದ್ರ ಹುಬ್ಬಳ್ಳಿ ಸಾಮೂಹಿಕ ಹುಟ್ಟುಹಬ್ಬ ಆಚರಿಸುತ್ತಿದೆ.
ಇಲ್ಲಿನ ಕೇಶ್ವಾಪುರ ಬನಶಂಕರಿ ಬಡಾವಣೆಯ 2ನೇ ಅಡ್ಡರಸ್ತೆಯಲ್ಲಿನ ಸೇವಾ ಸದನದಲ್ಲಿ ದಿ. 14 ರಂದು ಸಂಜೆ 6.೦೦ಕ್ಕೆ ಬಾಲ ಕಲ್ಯಾಣ ಕೇಂದ್ರದ ಮಕ್ಕಳಿಗೆ ಸಾಮೂಹಿಕ ಹುಟ್ಟುಹಬ್ಬ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ನಟ ಹಾಗೂ ರಾಜ್ಯಸಭೆ ಸದಸ್ಯ ಜಗ್ಗೇಶ್ ಹಾಗೂ ಖ್ಯಾತ ಉದ್ಯಮಿ ವಿಷ್ಣು ಮೆಹರವಾಡೆ ಆಗಮಿಸಲಿದ್ದಾರೆ. ಮಕ್ಕಳಿಗೆ ಅಲ್ಲೇ ಕಲಾ ಸುಜಯದ ವಿದ್ವಾನ್ ಸುಜಯ ಶಾನಭಾಗ ಮತ್ತು ತಂಡದಿಂದ ಚಿಂತನ ರಾಮಾಯಣ ನೃತ್ಯ ರೂಪಕ ಪ್ರದರ್ಶನವಾಗಲಿದೆ.