*ಹಾಡು ನಿಲ್ಲಿಸಿದ ಹಾಲಕ್ಕಿ ಸಮುದಾಯದ ಮೇರು ಪ್ರತಿಭೆ ಬಗಡಗೇರಿಯ ಸುಕ್ರಜ್ಜಿ*
ಅಂಕೋಲಾ : ಜಾನಪದ ಕೋಗಿಲೆ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ (91)ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸುಕ್ರಿ ಬೊಮ್ಮ ಗೌಡ ಇಂದು, ಗುರುವಾರ ಮುಂಜಾನೆ 3:30ಕ್ಕೆ ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕಳೆದ ಕೆಲ ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು.
ಉಸಿರಾಟದ ಸಮಸ್ಯೆಯೂ ಸೇರಿದಂತೆ ಹಲವು ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಳೆದ ಎರಡು ದಿನದ ಹಿಂದೆಯೂ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು.
ನಾಡೋಜ, ರಾಜ್ಯೋತ್ಸವ, ಜಾನಪದ ಶ್ರೀ ಪ್ರಶಸ್ತಿ ಪಡೆದಿದ್ದ ಸುಕ್ರಜ್ಜಿ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.
ಜಾನಪದ ಹಾಡುಗಳ ಮೂಲಕ ಸಮುದಾಯದ ಮಹಿಳೆಯ ಪರಿಚಯಿಸುವ ಕಾರ್ಯ ನಿರ್ವಹಿಸಿದ್ದ ಸುಕ್ರಜ್ಜಿ ಉತ್ತರಕನ್ನಡ ಜಿಲ್ಲೆಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ, ತಮ್ಮೂರನ್ನು ಸರಾಯಿ ಮುಕ್ತ ಗ್ರಾಮವನ್ನಾಗಿಸಲು ಹೋರಾಟಗಳ ಮೂಲಕ ಮುಂಚೂಣಿಯಲ್ಲಿ ಇರುತ್ತಿದ್ದರು.ಇತ್ತೀಚೆಗೆ ಹಾಲಕ್ಕಿ ಒಕ್ಕಲಿಗ ಸಮುದಾಯದವರೇ ಆಗಿದ್ದ ವೃಕ್ಷಮಾತೆ ತುಳಸಿ ಗೌಡ ಕೂಡ ನಿಧನರಾಗಿದ್ದರು. ಇವರಿಬ್ಬರು ಅಕ್ಕತಂಗಿಯರಂತೆ ಸಮುದಾಯಕ್ಕೆ ಪದ್ಮಶ್ರೀ ಪುರಸ್ಕೃತ ರಾಗಿ ಹಿರಿಮೆ ತಂದಿದ್ದರು.ಮೃತರ ಅಂತ್ಯಕ್ರಿಯೆ ಬಗಡಗೇರಿಯಲ್ಲಿ ನಡೆಯಲಿದೆ.