*ನಾಳೆ ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ ಕಥಾಮೃತ ಗ್ರಂಥದ ಭವ್ಯ ಶೋಭಾಯಾತ್ರೆ*
*20ಕ್ಕೆ ರಾಮದೇವ್ ಬಾಬಾರಿಂದ ಉದ್ಘಾಟನೆ*,*ಮಾ.1ರವರೆಗೂ ವಿವಿಧ ಕಾರ್ಯಕ್ರಮ, 54 ಗ್ರಂಥಗಳ ಲೋಕಾರ್ಪಣೆ*, *ಸಂಗೀತದ ಸಮಾರಾಧನೆ*
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದಾಡಿದ ದೇವರಾದ ಶ್ರೀ ಸಿದ್ಧಾರೂಢರ 190ನೇ ಜಯಂತ್ಯುತ್ಸವ, ಗುರುನಾಥಾರೂಢರ 115ನೇ ಜಯಂತ್ಯುತ್ಸವ, ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ ಅಂಗವಾಗಿ ದಿ.20ರಿಂದ 26ರ ವರೆಗೆ ಸಿದ್ಧಾರೂಢ ಮಠದಲ್ಲಿ ವಿಶ್ವವೇದಾಂತ ಪರಿಷತ್ ಕಾರ್ಯಕ್ರಮಗಳು ಅರ್ಥ ಪೂರ್ಣವಾಗಿ ನಡೆಯಲಿದೆ.
20ರಂದು ಬೆಳಿಗ್ಗೆ 9 ಗಂಟೆಗೆ ಪತಂಜಲಿ ಯೋಗಾಶ್ರಮದ ಸ್ವಾಮಿ ರಾಮದೇವ ಬಾಬಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಠದಿಂದ ಪ್ರಕಟಿಸಲಾದ 54 ಗ್ರಂಥಗಳನ್ನು ಲೋಕಾರ್ಪಣೆ ಗೊಳಿಸಲಾಗುವುದು.21ರಿಂದ ಮಾರ್ಚ್ 1ರ ವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, 26ರ ಸಂಜೆ ರಥೋತ್ಸವ ಜರುಗಲಿದೆ.
ಸಿದ್ಧಾರೂಢರ ಕಥಾಮೃತದ ಭವ್ಯ ಮೆರವಣಿಗೆಯ ಶೋಭಾಯಾತ್ರೆ ನಾಳೆ ದಿ.19ರಂದು ನಡೆಯಲಿದ್ದು, ಬೆಳಿಗ್ಗೆ 9ಗಂಟೆಗೆ ಐರಣಿ ಸಂಸ್ಥಾನದ ಬಸವರಾಜ ದೇಶೀಕೇಂದ್ರ ಸ್ವಾಮೀಜಿ ಚಾಲನೆ ನೀಡುವರು.ಇಂಚಲ ಸಾಧು ಸಂಸ್ಥಾನಮಠದ ಜಗದ್ಗುರು ಡಾ. ಶಿವಾನಂದ ಭಾರತಿ ಮಹಾಸ್ವಾಮೀಜಿ, ಬೀದರಿನ ಸಿದ್ಧಾರೂಠ ಮಠ ಚಿದಂಬರಾಶ್ರಮದ ಜಗದ್ಗುರು ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಚಿತ್ರದುರ್ಗದ ಕಬೀರಾನಂದ ಆಶ್ರಮದ ಜಗದ್ಗುರು ಶಿವಲಿಂಗಾನಂದ ಸ್ವಾಮೀಜಿ, ಹುಕ್ಕೇರಿಯ ಗುರುಶಾಂತೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು.
ಮಹಾಪೌರ ರಾಮಣ್ಣ ಬಡಿಗೇರ ಹಾಗೂ ಉಪಮಹಾಪೌರ ದುರ್ಗಮ್ಮ ಬಿಜವಾಡ ಮೆರವಣಿಗೆಯ ಪೂಜಾ ಸಮಾರಂಭವನ್ನು ನೆರವೇರಿಸುವರು. ಪಾಲಿಕೆ ಸದಸ್ಯೆ ಮಂಗಳಮ್ಮ ಗೌರಿ ಮತ್ತು ಇತರೆ ಸದಸ್ಯರು ಉಪಸ್ಥಿತರಿರುವರು.
ಸಕಲ ವಾದ್ಯ ಮೇಳ ಹಾಗೂ 1008 ಮಹಿಳೆಯರ ಪೂರ್ಣಕುಂಭ ಹಾಗೂ ಆರತಿ ಸಹಿತ ಸಿದ್ಧಾರೂಢರು ಹಾಗೂ ಗುರುನಾಥಾರೂಢರ ಮೂರ್ತಿಯನ್ನು 105 ಕೆ.ಜಿ ತೂಕದ ಬೆಳ್ಳಿ ಅಂಬಾರಿ ಮೇಲೆ ಕೂರಿಸಿ ಆನೆಯ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು.
ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮಗಳಲ್ಲಿ ಕಾಶಿ, ಹರಿದ್ವಾರ, ತಿರುಪತಿ, ಆದಿಚುಂಚನಗಿರಿ, ಉಡುಪಿ, ಮಂತ್ರಾಲಯ, ಸುತ್ತೂರು ಮಠದ ಶ್ರೀಗಳು ಒಳಗೊಂಡು ಸುಮಾರು 250 ಸ್ವಾಮೀಜಿಗಳು. ಸಿಎಂ ಸಿದ್ದರಾಮಯ್ಯ ಸಹಿತ ಗಣ್ಯರು, ಸಚಿವರು ಪಾಲ್ಗೊಳ್ಳಲಿದ್ದಾರೆ.
ಉತ್ಸವದಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಪ್ರಸಿದ್ಧ ಸಂಗೀತಗಾರರಿಂದ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಿನಾಲೂ ಮಧ್ಯಾಹ್ನ , ಸಂಜೆ ಜರುಗಲಿವೆ.
ನೂರಾರು ಸಾಧು ಸಂತರು, ಮಠಾಧೀಶರು ಮತ್ತು ಸ್ವಾಮೀಜಿಗಳುಆಗಮಿಸಿದ್ದು ಈಗಾಗಲೇ ಮಠ ಹೊಸ ಕಳೆಯಿಂದ ಕಂಗೊಳಿಸುತ್ತಿದೆ.
ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣ ಶೆಟ್ಟರ್, ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ,
ವೈಸ್ ಚೇರಮನ್ ಮಂಜುನಾಥ ಮುನವಳ್ಳಿ, ಸಂಗೀತ ಸಮಿತಿ ಅಧ್ಯಕ್ಷ ಡಾ.ಗೋವಿಂದ ಮಣ್ಣೂರ, ದಾಸೋಹ ಸಮಿತಿ ಅಧ್ಯಕ್ಷ ಬಾಳು ಮಗಜಿಕೊಂಡಿ, ಗೌ.ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಟ್ರಸ್ಟಿಗಳಾದ ವಸಂತ ಸಾಲಗಟ್ಟಿ, ಚನ್ನವೀರ ಮುಂಗರವಾಡಿ, ಕುಂಬೋತ್ಸವ ಸಮಿತಿಯ ಗೀತಾ ಕಲಬುರ್ಗಿ, ವ್ಯವಸ್ಥಾಪಕ ಈರಣ್ಣ ತುಪ್ಪದ ಸಹಿತ ಇನ್ನಿತರರು ಕಳೆದ ಒಂದು ತಿಂಗಳಿನಿಂದ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.