*ಭಕ್ತಿ ಸಂಗೀತ ಸುಧೆಗೆ ಸಚಿವ ಜೋಶಿ ಸಾರಥ್ಯ* *ದೇಶಪಾಂಡೆ ನಗರದ ಜಿಮಖಾನ ಮೈದಾನದಲ್ಲಿ ವಿಶ್ವನಾಥ ಮಾದರಿ ಶಿವಲಿಂಗ ಪ್ರತಿಷ್ಠಾಪನೆ*
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಈಗ ಕೈಲಾಸ ಅಧಿಪತಿ ಮಹಾದೇವನ ಭಕ್ತಿ ವೈಭವದ ಮಹೋತ್ಸವಕ್ಕೆ ಸಿದ್ಧವಾಗುತ್ತಿದೆ.
ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಮಹೋತ್ಸವದ ವಿಶಿಷ್ಠ ಆಚರಣೆ ಕ್ಷಮತಾ ಸಂಸ್ಥೆ ಮತ್ತು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ನಡೆಯಲಿದ್ದು, ಕ್ಷೇತ್ರದ ಭಕ್ತರಿಗೆ ಈ ಬಾರಿ ಹುಬ್ಬಳ್ಳಿಯಲ್ಲೇ ಶ್ರೀ ಕಾಶಿ ವಿಶ್ವನಾಥೇಶ್ವರ ದರ್ಶನಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಹುಬ್ಬಳ್ಳಿ ದೇಶಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಈ ಬಾರಿ ಭಕ್ತರಿಗೆ ಶ್ರೀ ಕಾಶಿ ವಿಶ್ವನಾಥೇಶ್ವರ ಮಾದರಿ ಶಿವಲಿಂಗ ದರ್ಶನವಾಗಲಿದೆ. ಮಹಾ ಶಿವರಾತ್ರಿ ಪ್ರಯುಕ್ತ ಹನ್ನೆರೆಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯಲ್ಲೇ ಶಿವಲಿಂಗ ಪ್ರತಿಷ್ಠಾಪನೆಗೆ ಸಚಿವ ಪ್ರಲ್ಹಾದ ಜೋಶಿ ಅವರ ಸಾರಥ್ಯದಲ್ಲಿ ಅಗತ್ಯ ಸಿದ್ಧತೆ ನಡೆದಿದೆ.
ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಅಂದು ದಿನವಿಡೀ ಒಂದರ ಮೇಲೊಂದು ಶಿವನಾಮ ಆರಾಧನೆ, ಭಕ್ತಿ ಸಮರ್ಪಣೆ ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ ಮಹಾದೇವನಿಗೆ ವಿಶೇಷ ಪೂಜೆ – ಪುನಸ್ಕಾರಗಳು ನೆರವೇರಿದರೆ, ಸಂಜೆ ಬಳಿಕ ಪ್ರಸಿದ್ಧ ಕಲಾವಿದರಿಂದ ಭಕ್ತಿಸುಧೆ ಹರಿಯಲಿದೆ.
ಸಂಜೆ 6 ಗಂಟೆಗೆ “ಸಂಗೀತದೊಂದಿಗೆ ಶಿವನಾಮ ಸ್ಮರಣೆ” ಆರಂಭಗೊಳ್ಳಲಿದೆ. ವಿದುಷಿ ಸುಜಾತ ಗುರುವ್ ಅವರು ಹಿಂದೂಸ್ತಾನಿ ಮತ್ತು ಶಾಸ್ತ್ರೀಯ ಸಂಗೀತ ನುಡಿಸುವರು. ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿಯ ಕಲಾವಿದರು “ಶಿವವಚನ ವಾಣಿ ನೃತ್ಯ” ಪ್ರದರ್ಶಿಸಲಿದ್ದಾರೆ.
ಪ್ರಮುಖ ಆಕರ್ಷಣೆಯಾಗಿ ಕನ್ನಡದ ಖ್ಯಾತ ಗಾಯಕರಾದ ಚೇತನ ನಾಯಕ ಹಾಗೂ ಸಿಂಚನ ದೀಕ್ಷಿತ ಅವರಿಂದ ಸಂಗೀತ ಸಂಜೆ ಹಾಗೂ ಹುಬ್ಬಳ್ಳಿಯ ಬ್ಯಾಂಡ್ ಕಲ್ಕಿ ತಂಡದಿಂದ ಸಂಗೀತ ಸುಧೆ ಕಾರ್ಯಕ್ರಮ ಮಹಾಶಿವರಾತ್ರಿಯ ಈ ಮಹೋತ್ಸವಕ್ಕೆ ಮೆರುಗು ನೀಡಲಿದೆ.