*ಹೋರಾಟಗಳ ಮೂಲಕವೇ ಮೇಲೇರಿದ* *ಹುಬ್ಬಳ್ಳಿಯ ಚಿಂತಕನಿಗೆ ಅರಸಿ ಬಂದ ಪುರಸ್ಕಾರ*
ಹುಬ್ಬಳ್ಳಿ : ವಿದ್ಯಾರ್ಥಿ ದೆಸೆಯಲ್ಲಿಯೇ ಡಾ ಬಾಬಾಸಾಹೇಬ ಅಂಬೇಡ್ಕರ್ ಕುರಿತು ಆಳವಾಗಿ ಅಧ್ಯಯನ ಮಾಡಿ ಅವರ ಕ್ಷಾತ್ರತೇಜ ಪ್ರಭಾವಳಿಯ ಬೆಳಕಿನಲ್ಲಿ, ಸಿದ್ದಾಂತದಲ್ಲಿಯೇ ಮುನ್ನಡೆಯುತ್ತ ಬಂದ ಹೋರಾಟಗಾರನಿಗೆ ಕರ್ನಾಟಕ ಸರ್ಕಾರದ 2025 ಸಾಲಿನ ಪ್ರತಿಷ್ಠಿತ ಡಾ.ಅಂಬೇಡ್ಕರ್ ಪ್ರಶಸ್ತಿ ಅರಸಿ ಬಂದಿದೆ .
ಹೌದು,ಹುಬ್ಬಳ್ಳಿಯ ಹಿರಿಯ ಚಿಂತಕ, ಹೋರಾಟಗಾರ ಎಫ್.ಎಚ್. ಜಕ್ಕಪ್ಪನವರ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅವರ ಸುಮಾರು ನಾಲ್ಕು ದಶಕಗಳ ಸಮಾಜಮುಖಿ ಸೇವೆ, ಸಾಧನೆಗೆ ಸಂದ ಗೌರವವಾಗಿದೆ.
ಜಕ್ಕಪ್ಪನವರ ಕ್ರಾಂತಿ ನಾಯಕ ಬಿ ಬಸವಲಿಂಗಪ್ಪನವರ ” ಭೂಸಾ ಬಂಡಾಯ” ಚಳುವಳಿಯಲ್ಲಿ ಧುಮುಕಿ,ನಂತರ ಪ್ರೊ ಬಿ ಕೃಷ್ಣಪ್ಪರವರು ಹುಟ್ಟುಹಾಕಿದ ದಲಿತ ಸಂಘರ್ಷ ಸಮಿತಿ ಜೊತೆ ಗುರುತಿಸಿಕೊಂಡರು. ಪದವೀ ಶಿಕ್ಷಣ ಮುಗಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆನರಾ ಬ್ಯಾಂಕ ಸೇವೆಗೆ ಸೇರಿದರು.
ಕೆನರಾ ಬ್ಯಾಂಕ ಸೇವೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಆಗುತ್ತಿದ್ದ ಜಾತೀ ತಾರತಮ್ಯಗಳ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರನ್ನು ಸಂಘಟಿಸಿ ಅಖಿಲ ಭಾರತ ಕೆನರಾ ಬ್ಯಾಂಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರರನ್ನು ಸಂಘಟಿಸಿ ಆ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿ ಕೆನರಾ ಬ್ಯಾಂಕ ಸೇವೆಯಲ್ಲಿ ಬಡ್ತಿ ನೇಮಕಾತಿಯಲ್ಲಿ ಮೀಸಲಾತಿ ಮತ್ತು ಇತರ ರಿಯಾಯಿತಿಗಳನ್ನು ಜಾರಿಗೊಳಿಸುವ ಹೋರಾಟದಲ್ಲಿ ಯಶಸ್ವಿಯಾದರು. ಉಳಿದ ರಾಷ್ಟ್ರೀಕೃತ ಬ್ಯಾಂಕಗಳ ಸೇವೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರರಿಗೆ ಈ ಸೌಲಭ್ಯ ಒದಗಿಸಿಕೊಟ್ಟರು. ಕೆನರಾ ಬ್ಯಾಂಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಪತ್ತಿನ ಸಹಕಾರ ಸಂಘ ಸ್ಥಾಪಿಸಿದ ಇವರು 1984- 1989 ಅವಧಿಯಲ್ಲಿ ” ಅಂಬೇಡಕರ ಜ್ಯೊತಿಯನ್ನು ಓಟದ ಮೂಲಕ ಕನ್ಯಾಕುಮಾರಯಿಂದ ದೆಹಲಿಯವರೆಗೆ ಭಾರತ ತುಂಬ ಸಂಚರಿಸಿ ಡಾ ಬಾಬಾಸಾಹೇಬ ಅಂಬೇಡಕರವರ ಹೋರಾಟ- ಸಂವಿಧಾನ ರಚನೆ – ಸಂವಿಧಾನ ಆಶೆಗಳನ್ನು ಪ್ರಚಾರ ಮಾಡಿದರು.
1990- 1991ರ ಸಮಯದಲ್ಲಿ ಡಾ ಬಾಬಾಸಾಹೇಬರ ಶತಮಾನೋತ್ಸವ ಸಂದರ್ಭದಲ್ಲಿ 365 ದಿನಗಳ ವರೆಗೆ ಕರ್ನಾಟಕ ರಾಜ್ಯದಲ್ಲಿ ಸಂಚರಿಸಿದ ಸ್ವಾಭಿಮಾನಿ ಜಾಥಾದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂದು ಕರ್ನಾಟಕ ಸರ್ಕಾರ ಈ ಕಾರ್ಯಕ್ರಮ ಮೆಚ್ಚಿ ಬೆಂಗಳೂರಿನ ಮಾಗಡಿ ರಸ್ತೆಯ ಹೇರೊಹಳ್ಳಿಯಲ್ಲಿ 37 ಎಕರೆ ಜಮೀನು ಮಂಜೂರು ಮಾಡಿದರು. ಸ್ಪೂರ್ತಿ ಧಾಮ ಹೆಸರಿನ ಈ ಪ್ರತಿಷ್ಠಿತ ಸಂಸ್ಥೆಯ ಟ್ರಸ್ಟಿಗಳಾಗಿ ಜಕ್ಕಪ್ಪನವರ ಸೇವೆ ಸಲ್ಲಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಕಾಗವಾಡ ಪಕ್ಕದ ಮುಖವಾಡ-ಕುಸನಾಳ ಭೂರಹಿತ ದಲಿತರಿಗೆ 500 ಎಕರೆ ಸರ್ಕಾರಿ ಜಮೀನು ಕೊಡಿಸಲು ಯಶಸ್ವೀ ಹೋರಾಟ ಮಾಡಿದ್ದಾರಲ್ಲದೇ 2000-2001 ವಿಶ್ವ ಸಂಸ್ಥೆ ದಕ್ಷಿಣ ಆಫ್ರಿಕಾದ ದರ್ಬಾನ್ ಮತ್ತು ಜಿನೇವಾದಲ್ಲಿ ಎರ್ಪಡಿಸಿದ್ಧ ಜಾಗತಿಕ ವರ್ಣ ವಿರೋಧಿ ಸಮ್ಮೇಳನದಲ್ಲಿ ಜಕ್ಕಪ್ಪನವರ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಡಾ ಅಂಬೇಡಕರ ಪ್ರತಿಷ್ಠಾನದ 2011- 13 ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ಧಾರೆ.
ಹರಿಹರದಲ್ಲಿ ಬಾಬಾಸಾಹೇಬ ಅಂಬೇಡಕರ ಚಾರಟಿ ಟ್ರಸ್ಟ ಸ್ಥಾಪಿಸಿ ಪ್ರಾಥಮಿಕ ಶಾಲೆಯಿಂದ ಪದವೀ ಕಾಲೇಜವರೆಗೆ ಶಾಲಾ ಕಾಲೇಜು ಪ್ರಾರಂಭಿಸಿ ಪರಿಶಿಷ್ಟರ ಶಿಕ್ಷಣೋನ್ನತಿ ಕಾರಣೀಭೂತರಾಗಿದ್ದಾರೆ.
ಡಾ ಬಾಬಾಸಾಹೇಬ ಅವರು ಧಾರವಾಡದಲ್ಲಿ 1929 ಸ್ಥಾಪಿಸಿದ ಸಂಸ್ಥೆಯ ಶಿಕ್ಷಣ ಸಂಸ್ಥೆಗಳ್ನು ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದಾರೆ.ಬೃಹತ್ತಾದ ಬುದ್ಧ ವಿಹಾರ ಕಟ್ಟಿ ಅನೇಕ ಚಿಂತಕರೊಂದಿಗೆ ಸೇರಿ ಸಂವಿಧಾನ ಶಿಲ್ಪಿಯ ಬೃಹತ್ ಗ್ರಂಥಾಲಯ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ.
ವೃತ್ತಿಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಮೂಲತಃ ಈಗಿನ ಅಣ್ಣಿಗೇರಿ ತಾಲ್ಲೂಕಿನ ನಾವಳ್ಳಿ ಗ್ರಾಮದವರಾದ ಜಕ್ಕಪ್ಪನವರ ಹವ್ಯಾಸಿ ಕೃಷಿಕರಾಗಿದ್ದಾರೆ. ದಲಿತ ಆದಿವಾಸಿಗಳು ಮೀಸಲಾತಿಯಿಂದಾಚೆ ಸ್ವಾಭಿಮಾನಿ- ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬುದಕ್ಕೆ ಅವರೇ ದೊಡ್ಡ ಉದಾಹರಣೆಯಾಗಿದ್ಧಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇರಿದಂತೆ ಅನೇಕ ಆಯಕಟ್ಟಿನ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಅನೇಕ ನೌಕರರ ಸಂಘಟನೆಗಳ ಮುಖ್ಯಸ್ಥರಾಗಿರುವ ಜಕ್ಕಪ್ಪನವರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಕಳೆದ 27ವರ್ಷಗಳಿಂದ ಸೇವೆ ಮಾಡುತ್ತಾ ರಸ್ತೆ ಸಾರಿಗೆ ಸಂಸ್ಥೆಯ ಸೇವೆಯಲ್ಲಿ 30000 ಹಿಂಬಾಕಿ ಹುದ್ದೆಗಳನ್ನು ತುಂಬಿಸಲು ಹೋರಾಟ ನಡೆಸಿದ್ದಾರೆ; ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರಿಗಾಗೆ ಸ್ವಂತ ಕಟ್ಟಡ ಉಳ್ಳ ಬೃಹತ್ ಕೆಎಸ್ ಆರ್ ಟಿ ಸಿ ಎಸ್ ಸಿ ಎಸ್ ಟಿ ನೌಕರರ ಪತ್ತಿನ ಸಹಕಾರ ಸೊಸೈಟಿಯ ಸಂಸ್ಥಾಪಕರು ಹೌದು.
ಜಕ್ಕಪ್ಪನವರ ಉತ್ತಮ ಲೇಖಕರು ಮತ್ತು ಅಂಬೇಡ್ಕರ್ ಬದುಕು ,ಬರಹ, ಸಿದ್ದಾಂತ, ಸಂವಿಧಾನದ ಕುರಿತಾಗಿ ದೃಢವಾಗಿ ಮಾತನಾಡಬಲ್ಲ ರಾಜ್ಯದ ಬೆರಳೆಣಿಕೆಯ ಭಾಷಣಕಾರರಲ್ಲಿ ಒಬ್ಬರು. ಈಗ ಅವರ ಮುಡಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ತನ್ನ ಅನುಕರಣೀಯ ದೈವದ ಹೆಸರಿನ ಪ್ರಶಸ್ತಿಯೇ ಹುಡುಕಿಕೊಂಡು ಬಂದಿದೆ.