*ನೀಲಕಂಠ ಅಸೂಟಿ ಪ್ರಧಾನ ಕಾರ್ಯದರ್ಶಿ, ಪ್ರಭಣ್ಣ ಗೌರವಾಧ್ಯಕ್ಷ* / *ಎಲ್ಲಾ ಹಳೆಯ ಘಟಕಗಳ ವಿಸರ್ಜನೆ*
ಹುಬ್ಬಳ್ಳಿ: ಬಿಜೆಪಿಯಿಂದ ಬಸನಗೌಡ ಪಾಟೀಲ್ ಉಚ್ಚಾಟನೆ, ಅವರನ್ನು ಜಯ ಮೃತ್ಯುಂಜಯ ಸ್ವಾಮೀಜಿ ಬೆಂಬಲಿಸಿದ ನಂತರ ಪ್ರಬಲ ಪಂಚಮಸಾಲಿ ಸಮುದಾಯದಲ್ಲಿ ಉದ್ಭವಿಸಿದ ಹಲವು ಗೊಂದಲ, ವಾಕ್ಸಮರದ ಮಧ್ಯೆಯೇ ಗುರುವಾರ
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಟ್ರಸ್ಟ್ನ
ಸರ್ವ ಸದಸ್ಯರ ಸಭೆ ನಡೆದು ಯುವ ಮುಖಂಡರಿಗೆ ಮುಂದಾಳತ್ವ ನೀಡಿದ್ದು, ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ಡಾ. ವಿಜಯಾನಂದ ಕಾಶಪ್ಪನವರ್ ಮತ್ತು ಕಾರ್ಯಾಧ್ಯಕ್ಷರಾಗಿ ಹುಬ್ಬಳ್ಳಿಯ ಪ್ರಭಾವಿ ಮುಖಂಡ ರಾಜಶೇಖರ್ ಮೆಣಸಿನಕಾಯಿ ಆಯ್ಕೆಯಾಗಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾಜದ ಟ್ರಸ್ಟ್ನ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು,
ಪ್ರಧಾನ ಕಾರ್ಯದರ್ಶಿಯಾಗಿ ನೀಲಕಂಠ ಅಸೂಟಿ, ಹಾಗೂ ಇದುವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಪ್ರಭಣ್ಣ ಹುಣಸಿಕಟ್ಟಿ ಅವರನ್ನು ಗೌರವ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಹಿಂದೆ ನೇಮಕಗೊಳಿಸಿದ ರಾಷ್ಟ್ರೀಯ ಘಟಕ, ರಾಜ್ಯ ಯುವ ಘಟಕ, ಮಹಿಳಾ ಘಟಕ ಸೇರಿದಂತೆ ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷ, ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಧರ್ಮದರ್ಶಿ ಎಸ್.ಡಿ. ಕೊಳ್ಳಿ ತಿಳಿಸಿದ್ದಾರೆ.
ಇದೇ ವೇಳೆ ಜಯ ಮೃತ್ಯುಂಜಯ ಸ್ವಾಮೀಜಿ ನಡೆ ಕುರಿತು ಚರ್ಚಿಸಲು ಶೀಘ್ರ ಕೂಡಲಸಂಗಮದಲ್ಲಿ ಸಭೆ ನಡೆಸಲು,ಶ್ರೀಮಠದ ಅಡಿಗಲ್ಲು ಸಮಾರಂಭ, ಸಮಾಜದ ಸಂಘಟನೆ ಬಲಪಡಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ಆರಂಭದಲ್ಲಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪ್ರಭಣ್ಣ ಹುಣಸಿಕಟ್ಟಿ ರಾಜೀನಾಮೆ ಸಲ್ಲಿಸಿದ ನಂತರ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಟ್ರಸ್ಟ್ನ ಕಾರ್ಯದರ್ಶಿ ನಂದಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.