*ಎಂಟನೆ ತರಗತಿಯಲ್ಲಿ ಫೇಲಾಗಿ ಮುಂಬೈಗೆ ರೈಲು ಹತ್ತಿದ ಉಡುಪಿ ಮೂಲದ ಹುಡುಗನ ಯಶೋಗಾಥೆ*/ *ಕೇಶ್ವಾಪುರದಲ್ಲಿ ಹನ್ನೊಂದನೇ ರೆಸ್ಟೋರೆಂಟ್ ಲೀಲಾವತಿ ಗ್ರಾಂಡ್ ಉದ್ಘಾಟನೆ*
ಹುಬ್ಬಳ್ಳಿ : ಮಾಯಾನಗರಿ ಮುಂಬೈನ ವಿಶ್ವ ಪ್ಯಾಲೇಸ್ ಹೊಟೇಲಿನಲ್ಲಿ ಕೆಲಸ ಮಾಡುವಾಗ ಹಗಲೆಲ್ಲಾ ದುಡಿದು ರಾತ್ರಿ ಟೆರೆಸ್ ಮೇಲೆ ಚಾಪೆ ಮೇಲೆ ಮಲಗಿ ಆಕಾಶದಲ್ಲಿನ ನಕ್ಷತ್ರಗಳನ್ನು ಕಣ್ತುಂಬಿಕೊಳ್ಳುತ್ತ ತಾನೂ ಇಂತಹದ್ದೊಂದು ಭವ್ಯ ಹೊಟೆಲ್ ಮಾಡಬೇಕೆಂಬ ಕನಸು ಕಾಣುತ್ತಿದ್ದ ಹುಡುಗನೊಬ್ಬ ತನ್ನ ಪರಿಶ್ರಮದಿಂದಲೇ ಹಂತ ಹಂತವಾಗಿ ಮೇಲೆರುತ್ತ ಬಂದು
ಯಶಸ್ವಿ ಹೊಟೆಲ್ ಉದ್ಯಮಿಯಾಗಿ ಹುಬ್ಬಳ್ಳಿಯ ವಾಸ್ತು ಪ್ರಶಸ್ತ ಹಿರಿಮೆಯ ಕೇಶ್ವಾಪುರದಲ್ಲಿ ದಿ. 11ರಂದು ಹನ್ನೊಂದನೇ ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ.
ಹೌದು, ತಾನು ಪ್ರೀತಿಸಿದ ಹೊಟೆಲ್ ವೃತ್ತಿಯನ್ನೇ ಉಸಿರಾಗಿಸಿಕೊಂಡು, ಬದುಕಾಗಿಸಿಕೊಂಡು ಹಲವರ ತುತ್ತಿನ ಚೀಲಕ್ಕೆ ಆಧಾರ ಆದವರು ಉಡುಪಿ ಮೂಲದವರಾದರೂ ಹುಬ್ಬಳ್ಳಿಯವರೇ ಆಗಿರುವ ಹೊಟೆಲ್ ಉದ್ಯಮಿ ರಾಜೇಂದ್ರ ಶೆಟ್ಟಿ.
ಮೂರುವರೆ ದಶಕಗಳ ಹಿಂದೆ ಎಂಟನೆ ತರಗತಿಯಲ್ಲಿ ಫೇಲಾಗಿ ಉಡುಪಿ ಜಿಲ್ಲೆಯ ಹಳ್ಳಿಯೊಂದರಿಂದ ಮುಂಬೈಗೆ ರೈಲು ಹತ್ತಿ ,ಕೆಲಸಕ್ಕಾಗಿ ಸುಮಾರು 60ಕ್ಕೂ ಹೆಚ್ಚು ಹೊಟೆಲ್ಗಳ ಬಾಗಿಲು ಬಡಿದಿದ್ದ ರಾಜೇಂದ್ರ ಶೆಟ್ಟಿ ಇಂದು ಸಾವಿರಕ್ಕೂ ಹೆಚ್ಚು ಹೊಟೆಲ್ ಕಾರ್ಮಿಕರ ಒಡೆಯನಾಗಿದ್ದಾರಲ್ಲದೇ ನೆರೆಯ ಮಹಾರಾಷ್ಟ್ರದಲ್ಲಿನ ಪುಣೆಯ ಬಳಿ ತಂದೆಯ ಹೆಸರಲ್ಲಿ ದೊಡ್ಡದಾದ ವಿಶ್ವನಾಥ್ ಪ್ಯಾಲೇಸ್ ಹೊಟೆಲ್ ಆರಂಭಿಸಿ ಸಾಧನೆ ಮಾಡಿದ್ದಾರೆ.
ಮುಂಬೈಗೆ ತೆರಳಿ ಡಬ್ಬಾ ಅಂಗಡಿಯಲ್ಲಿ ಚಹಾ ಮಾರಿ, ವೇಟರ್, ಕ್ಲೀನರ್ ಮುಂತಾದ ಕೆಲಸ ಯಾವುದೇ ಕೀಳರಿಮೆಯಿಲ್ಲದೇ ಮಾಡಿ ನಂತರ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವದೊಂದಿಗೆ ಧಾರವಾಡದ ಟೋಲ್ನಾಕಾ ಬಳಿ ಚಿಕ್ಕದಾದ ಪಂಜುರ್ಲಿ ಹೊಟೆಲ್ ಆರಂಭಿಸಿದ ಇವರು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತ ಮುನ್ನಡೆಯುತ್ತ ಬಂದ ನಂತರ ಮತ್ತೆ ಹಿಂದಿರುಗಿ ನೋಡಲಿಲ್ಲ.
ಹುಬ್ಬಳ್ಳಿ-ಧಾರವಾಡದಲ್ಲಿ ಪಂಜುರ್ಲಿ ಸಮೂಹ ಮಾಂಸಾಹಾರಿ ವಿಭಾಗದಲ್ಲಂತೂ ತನ್ನದೇ ಆದ ವಿಶಿಷ್ಟ ರುಚಿಯಿಂದ ಮನೆ ಮಾತಾಗಿದೆ. 2019ರಲ್ಲಿ ಗೋಕುಲ ರೋಡ್ನಲ್ಲಿ ಆರಂಭವಾದ ತಾಯಿ ಹೆಸರಿನಲ್ಲಿ ಆರಂಭಿಸಿದ ಸಂಪೂರ್ಣ ಶಾಖಾಹಾರಿ ಹೊಟೆಲ್ ಲೀಲಾವತಿ ಪ್ಯಾಲೇಸ್ ತನ್ನದೇ ಖ್ಯಾತಿ ಪಡೆದಿದೆ. ಬೆಳಗಾವಿ, ದಾವಣಗೆರೆ ಮುಂತಾದೆಡೆ ಸಹ ಹೊಟೆಲ್ ಆರಂಭಿಸಿದ್ದಾರೆ.
ಗ್ರಾಹಕರಿಗೆ ಸರಿಯಾದ ನ್ಯಾಯ ಒದಗಿಸಿಲ್ಲ ಅಂದರೆ ನನ್ನ ತಾಯಿಗೇ ಮಾಡಿದ ಅನ್ಯಾಯ ಎನ್ನುವ ಮನೋಭಾವದ ರಾಜೇಂದ್ರ ಶೆಟ್ಟಿ ಅವರು, ಗ್ರಾಹಕರ ಆಶೀರ್ವಾದ, ಪಂಜುರ್ಲಿ ದೈವದ ಬಲದಿಂದ ಈ ಸಾಧನೆ ಮಾಡಲು ಆರಂಭಿಸಲು ಸಾಧ್ಯವಾಯಿತೇ ಹೊರೆತು ನನ್ನ ಪಾತ್ರ ಏನಿಲ್ಲ ಎಂದು ನಯವಾಗಿ ಹೇಳುತ್ತಾರೆ.
ಅಲ್ಲದೆ ಪ್ರತಿ ಹೊಟೆಲ್ ನಲ್ಲಿಯೂ ಹಲವು ಸಾಮಾಜಿಕ ಸಂದೇಶ, ಅಲ್ಲದೇ ಮರೆಯಲಾಗದ ಮಹಾನುಭಾವರ ಸಂದೇಶ ಊಟೋಪಚಾರಕ್ಕೆ ಬರುವ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇವರ ಪರಿಶ್ರಮದ ಜೀವನಗಾಥೆ ಹೊಸದಾಗಿ ಹೊಟೆಲ್ ಉದ್ಯಮಕ್ಕೆ ಬರುವವರಿಗೆ ಅಕ್ಷರಶಃ ಪ್ರೇರಣಾದಾಯಕ.
ರಾಜೇಂದ್ರ ಅವರನ್ನು ರಾಜ್ಯ ಮಟ್ಟದ ಸೇರಿದಂತೆ ಹಲವು ಹತ್ತು ಪುರಸ್ಕಾರಗಳು ಅರಸಿ ಬಂದಿದ್ದು,ಇವರು ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಸಹ ಕಾರ್ಯದರ್ಶಿಯೂ ಹೌದು.
ರವಿವಾರ ನಡೆದ ನೂತನ ಲೀಲಾವತಿ ಗ್ರಾಂಡ್ ಅದ್ದೂರಿ ಉದ್ಘಾಟನೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಪ್ರದೀಪ್ ಶೆಟ್ಟರ್, ಮಹೇಶ ಟೆಂಗಿನಕಾಯಿ, ಎಸ್.ವಿ.ಸಂಕನೂರ ಸೇರಿದಂತೆ ನೂರಾರು ಗಣ್ಯರು, ಪ್ರಮುಖರು ಸಾಕ್ಷಿಯಾದರು. ಮಾಲಿಕರಾದ ರಾಜೇಂದ್ರ ಶೆಟ್ಟಿ , ಶಶಿಕಾಂತ ಶೆಟ್ಟಿ,, ರವಿಕಾಂತ ಶೆಟ್ಟಿ, ರಾಜೇಶ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದರು.