ಹುಬ್ಬಳ್ಳಿ: ಮಾತು ಬೆಳ್ಳಿ, ಮೌನ ಬಂಗಾರ, ಉದಾತ್ತ ವಿಚಾರ,ಸರಳ ಬದುಕು ಈ ಮಾತುಗಳಿಗೆ ಮಾದರಿಯಾಗಿ ಸೇವೆ, ಸಂಘಟನೆ, ಎರಡನ್ನೂ ಸಮತೋಲವಾಗಿ ಮಾಡಿಕೊಂಡು ಕಳಂಕ ರಹಿತ ಬದುಕಿಗೆ ಜ್ವಲಂತ ಉದಾಹರಣೆಯಾಗಿ ಹುಬ್ಬಳ್ಳಿಯಲ್ಲಿ ಹಿರಿಯಣ್ಣನ ಸ್ಥಾನದಲ್ಲಿ ನಿಲ್ಲುವವವರು ಶಂಕ್ರಣ್ಣ ಮುನವಳ್ಳಿಯವರು.
ಏನೇ ಬಂದರೂ ಎದುರಿಸುವ ಧೈರ್ಯ ಇದ್ದವರು ಮಾತ್ರ ವ್ಯವಹಾರ ರಂಗದಲ್ಲಿ ಇರಬೇಕು ಎಂಬ ಮಾತಿಗೆ ಅನ್ವರ್ಥವಾಗಿ ಮುನ್ನಡೆಯುತ್ತಿರುವ ಅವರು ಶಿಕ್ಷಣ, ಸಹಕಾರ, ಉದ್ಯಮ , ಪಾರಂಪರಿಕ ವ್ಯಾಪಾರ, ರಾಜಕೀಯದಲ್ಲಿ ತೊಡಗಿಸಿಕೊಂಡು
ಉತ್ತರ ಕರ್ನಾಟಕದ ಪ್ರತಿಷ್ಟಿತ ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ ಅವರು ನಾಳೆ 75ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜೂ. 1ರಂದು ಸಂಜೆ 5 ಗಂಟೆಗೆ ನಗರದ ಗೋಕುಲ ರಸ್ತೆಯ ಡೆನಿಸನ್ಸ್ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹಾಗೂ ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಉದ್ಯಮಿ ಡಾ.ವಿಜಯ ಸಂಕೇಶ್ವರ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಂಕ್ರಣ್ಣ ಎಂದೇ ಪ್ರಸಿದ್ಧಿ ಪಡೆದಿರುವ ಮುನವಳ್ಳಿಯವರು 1983ರಲ್ಲಿ ಹುಬ್ಬಳ್ಳಿ ಎಪಿಎಂಸಿ ಸದಸ್ಯರಾಗಿ ಸಾಮಾಜಿಕ ಬದುಕಿಗೆ ಬಲಗಾಲಿಟ್ಟವರು. ಕೃಷಿ, ವ್ಯಾಪಾರ ಕುಟುಂಬದಿಂದ ಬಂದ ಅವರು ತದನಂತರ ತಮ್ಮ ಸಮರ್ಪಿತ ಕೆಲಸಗಳ ಮೂಲಕ ಮೂಲಕ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯನ್ನು ಎರಡು ಬಾರಿ ಅಧ್ಯಕ್ಷರಾಗಿ ಮುನ್ನಡೆಸಿದ್ದು(2003-2007) ವ್ಯಾಪಾರ, ಕೈಗಾರಿಕಾ ಚಟುವಟಿಕೆಗಳ ಉತ್ತೇಜನ ನೀಡಿದ್ದಾರೆ. 1989ರಿಂದ ಸತತವಾಗಿ ಕೆ.ಎಲ್.ಇ ಸಂಸ್ಥೆಯ ನಿರ್ವಹಣಾ ಮಂಡಳಿ ಸದಸ್ಯರಾಗಿ 310ಕ್ಕೂ ಹೆಚ್ಚು ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಆರ್ಥಿಕವಾಗಿ 2004ರ ಅವಧಿಯಲ್ಲಿ ಪ್ರತಿಷ್ಠಿತ ಶ್ರೀ ಗುರುಸಿದ್ದೇಶ್ವರ ಸಹಕಾರಿ ಬ್ಯಾಂಕ್ ನ ಪುನಶ್ಚೇತನದಲ್ಲಿ ಇವರ ಪಾತ್ರ ಹಿರಿದಾಗಿದ್ದು ಇಂದಿಗೂ ಅವರೇ ಅಧ್ಯಕ್ಷರಾಗಿದ್ದಾರೆ.
ಬಡವರ, ದೀನ ದಲಿತರ, ಅನುಕೂಲಕ್ಕೆ ನೂರಾರು ಆರೋಗ್ಯ ಶಿಬಿರ,2001ರಿಂದ ಇದುವರೆಗೆ ಬಡ, ನಿರ್ಗತಿಕ ಕುಟುಂಬಗಳಿಗೆ ಸಹಾಯ ಮಾಡಲು ನಾಲ್ಕು ಬಾರಿ ಬೃಹತ್ ಸಾಮೂಹಿಕ ವಿವಾಹ ಆಯೋಜಿಸಿದ್ದಲ್ಲದೇ ತಮ್ಮ ಮಕ್ಕಳ ವಿವಾಹವನ್ನು ಅಲ್ಲಿಯೇ ನೆರವೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ರಾಜ್ಯ ಸರ್ಕಾರದಿಂದ ಸಹಕಾರ ರತ್ನ ಪ್ರಶಸ್ತಿಗೂ ಭಾಜನರಾಗಿರುವ ಮುನವಳ್ಳಿಯವರು ಹುಬ್ಬಳ್ಳಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರದ ಭಾರತೀಯ ಆಹಾರ ನಿಗಮದ ನಿರ್ದೇಶಕರಾಗಿದ್ದಾರಲ್ಲದೇ ವಿಶ್ವನಾಥ ಕಲ್ಯಾಣ ಮಂಟಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಂದಾಳತ್ವ ವಹಿಸಿದ್ದಾರೆ.
ಎಪ್ಪತ್ತೈದರ ಹರೆಯದಲ್ಲಿಯೂ ಸದಾ ಚಟುವಟಿಕೆಯಿಂದ ಕೂಡಿರುವ ‘ಅಣ್ಣಾವ್ರು’ ಎಷ್ಟೇ ಎತ್ತರಕ್ಕೆ ಏರಿದರೂ ವಿನಯ, ಪ್ರಾಮಾಣಿಕತೆ, ಸರಳತೆಯನ್ನು ಬಿಟ್ಟುಕೊಟ್ಟವರಲ್ಲ. ಅವರು ಆರೋಗ್ಯಕಾಯರಾಗಿರಲಿ, ನೂರ್ಕಾಲ ಸಂತಸದಿಂದ ಇರಲಿ. ಅವರ ಬಹುಮುಖದ ಆದರ್ಶ ಬದುಕು ಯುವ ಪೀಳಿಗೆಗೆ ಮಾರ್ಗದರ್ಶಕವಾಗಲಿ ಎಂಬುದು “ಕನ್ನಡ ಧ್ವನಿ” ಯ ಹಾರೈಕೆಯಾಗಿದೆ.
ಮೇ