*ಕಿರಣ್ ಕುಮಾರ್, ಉಮಾಶ್ರೀ, ರವಿವರ್ಮ ಕುಮಾರ್ ಸಹಿತ ಹದಿನೈದು ಸಾಧಕರ ಮುಡಿಗೆ ಹೆಮ್ಮೆಯ ಪುರಸ್ಕಾರ*
ಹುಬ್ಬಳ್ಳಿ: ಬೆಂಗಳೂರಿನ ಪ್ರತಿಷ್ಠಿತ ಬಸವ ಪರಿಷತ್ ನೀಡುವ 2025ನೇ ಸಾಲಿನ ಪ್ರತಿಷ್ಠಿತ ‘ಬಸವ ಪುರಸ್ಕಾರ’ಕ್ಕೆ ಹುಬ್ಬಳ್ಳಿಯ ಕೊಡುಗೈ ದಾನಿ ,ಉದ್ಯಮಿ ಡಾ. ಚಿಗುರುಪಾಟಿ ವಿ.ಎಸ್.ವಿ. ಪ್ರಸಾದ, 2025ನೇ ಸಾಲಿನ ಪ್ರತಿಷ್ಠಿತ ‘ಬಸವ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.
ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ನ್ಯಾಯಾಂಗ ಕ್ಷೇತ್ರದಿಂದ ಪ್ರೊ.ರವಿವರ್ಮ ಕುಮಾರ್, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಿಂದ ಎಸ್.ಆರ್.ಪಾಟೀಲ, ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಿಂದ ಉಮಾಶ್ರೀ, ‘ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದಿಂದ ಶಾಮನೂರು ಎಸ್. ಗಣೇಶ್, ಶಿಕ್ಷಣ ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ಬಸವರಾಜ್ ಎಸ್. ದೇಶಮುಖ ಸೇರಿದಂತೆ 15 ಮಂದಿ ಗಣ್ಯರು ಈ ಮಹತ್ವದ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕಳೆದ 10ವರ್ಷಗಳ ಹಿಂದೆ ಎಂಪಿ ಉಮಾದೇವಿ ನೇತೃತ್ವದಲ್ಲಿ ಸ್ಥಾಪನೆಗೊಂಡ ಬಸವ ಪರಿಷತ್ ಹತ್ತು ಹಲವು ಸಾಮಾಜಿಕ ಕಾರ್ಯಗಳಿಂದ ಹೆಸರುವಾಸಿಯಾಗಿ ಸಮಾನತೆ, ವೈಚಾರಿಕತೆ, ಜಾತ್ಯಾತೀತ ಮನೋಭಾವದಿಂದ ಕೂಡಿದ ಈ ಸಂಸ್ಥೆಯೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರನ್ನು ಗುರುತಿಸಿ ಕಳೆದ 4ವರ್ಷದಿಂದ ಬಸವ ಪುರಸ್ಕಾರ್ ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಡಾ.ಪ್ರಸಾದ್ ಅವರು ಉದ್ಯಮಿ ಮತ್ತು ಸಮಾಜ ಸೇವೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬಸವ ಪರಿಷತ್ ಅಧ್ಯಕ್ಷೆ ರೇಖಾ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಹಾತೇಶ ಹಿರೇಮಠ ತಿಳಿಸಿದ್ದಾರೆ.
ನಾಡಿದ್ದು ದಿ. 9ರಂದು ಬೆಂಗಳೂರಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದ ಕೊಂಡಜ್ಜಿ ಬಸವ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮೈಸೂರಿನ ಸುತ್ತೂರು ಕ್ಷೇತ್ರ ಜಗದ್ಗುರು ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಸಾನಿಧ್ಯದಲ್ಲಿ ನಡೆಯಲಿದೆ.ಕೊಡುವ ಕೈಯನ್ನು ಪಡೆದೇ ಬಂದಿರುವ ಡಾ.ಪ್ರಸಾದ ಅವರು ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಸ್ಥಾಪಿಸಿ ಅದರ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ಅತ್ಯಂತ ಸವಾಲಿನ ನಿರ್ಮಾಣ ಕಾಮಗಾರಿಗಳನ್ನು ಅತ್ಯಂತ ಗುಣಮಟ್ಟ ಮತ್ತು ಯಶಸ್ವಿಯಾಗಿ ಪೂರೈಸಿ ಸೈ ಎನಿಸಿಕೊಂಡರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರದ ಸೇವಾ ಕಾರ್ಯದಲ್ಲಿ ಇವರದ್ದು ಯಾವಾಗಲೂ ಎತ್ತಿದ ಕೈ.
ಡಾ. ಪ್ರಸಾದ ಅವರ ಈಗಾಗಲೇ ಶ್ರೀಲಂಕಾದ ಕೊಲಂಬೊ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ವಾಣಿಜ್ಯ ರತ್ನ, ಟೈಕಾನ್ನಿಂದ ಬೆಸ್ಟ್ ಎಂಟರ್ಪ್ರಿನರ್ ಆಫ್, ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಫಾಸ್ಟೆಸ್ಟ್ ಗ್ರೋವಿಂಗ್ ಲೀಡರ್ ಪ್ರಶಸ್ತಿ,
ಹು-ಧಾ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ಕರ್ನಾಟಕ ರತ್ನ ಪ್ರಶಸ್ತಿ, ರಾಜ್ಯ ಬೌಧ್ದ ಧರ್ಮದಿಂದ ಧಮ್ಮ ಮಹಾಮಂತ್ರಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಹೋಟೆಲ್ ಸಂಘದ ವತಿಯಿಂದ ಜನ ಮಾನಸ ಪ್ರಶಸ್ತಿ, ಗುದ್ಲೆಪ್ಪ ಹಳ್ಳಿಕೇರಿ ಪ್ರಶಸ್ತಿ,ಮದರ್ ಥೆರೆಸಾ ಪ್ರಶಸ್ತಿ ಹೀಗೆ ನೂರಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.