‘
ಹುಬ್ಬಳ್ಳಿ : ಮೂರು ತಿಂಗಳ ಹಿಂದಿನವರೆಗೆ ಮರುಭೂಮಿಯ ರಾಜ್ಯದಲ್ಲಿ ಈ ಬಾರಿ ಆಡಳಿತ ಪಕ್ಷದ ಅಧಿಕಾರ ಮುಂದುವರಿಯದು ಎಂಬ ಸಂಪ್ರದಾಯಕ್ಕೆ ಎಳ್ಳು ನೀರು ಗ್ಯಾರಂಟಿ ಎಂಬ ಹಂತದಲ್ಲಿ ಕಳೆದ ಅಗಸ್ಟ ತಿಂಗಳಲ್ಲಿ ರಾಜಸ್ತಾನದ ಬಿಜೆಪಿ ಉಸ್ತುವಾರಿಯಾಗಿ ನಿಯುಕ್ತಿಗೊಂಡ ಹುಬ್ಬಳ್ಳಿಯ ಹಿರಿಮೆ ,ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಲ್ಲಾ ಲೆಕ್ಕಾಚಾರ ತಲೆ ಕೆಳಗು ಮಾಡಿ ರಾಜಸ್ತಾನದಲ್ಲಿ ಮತ್ತೆ ಕಮಲ ಪತಾಕೆ ಹಾರಿಸಿದ್ದು ಇಂದು ತವರಿಗೆ ಆಗಮಿಸಿದ ಅವರನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಲಾಯಿತು.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪಂಚರಾಜ್ಯಗಳ ಫಲಿತಾಂಶದ ನಂತರ ಮೊದಲ ಬಾರಿಗೆ ಆಗಮಿಸಿದ ಮಹಾನಗರ ಬಿಜೆಪಿ ಘಟಕದ ವತಿಯಿಂದ ಭವ್ಯವಾಗಿ ಸ್ವಾಗತಿಸಿ ಕರೆ ತರಲಾಯಿತಲ್ಲದೇ ಪ್ರಧಾನಿ ಮೋದಿ , ಪ್ರಹ್ಲಾದ ಜೋಶಿ ಜಿಂದಾಬಾದ್ ಘೋಷಣೆಗಳು ಮುಗಿಲು ಮುಟ್ಟಿತ್ತು.
ಹೌದು, ರಾಜಸ್ತಾನದಲ್ಲಿ ಮೂರು ತಿಂಗಳು ಮೊದಲು ರಾಜಸ್ತಾನ ಬಿಜೆಪಿಯಲ್ಲೂ ಕಾಂಗ್ರೆಸ್ನಂತೆ ಆಂತರಿಕ ಕಚ್ಚಾಟ ತೀವ್ರವಾಗಿತ್ತು. ಆಗ ಉಸ್ತುವಾರಿ ವಹಿಸಿಕೊಂಡ ಜೋಶಿಯವರು ಬಹುತೇಕ ಬಹುತೇಕ ಸಮಯವನ್ನು ಅಲ್ಲಿಗೇ ಮೀಸಲಿರಿಸಿ ಪಕ್ಷದಲ್ಲಿನ ವಸುಂದರಾ ರಾಜೇ ಸಹಿತ ಎಲ್ಲ ಹಿರಿಯ ಕಿರಿಯ ನಾಯಕರನ್ನು ಒಂದುಗೂಡಿಸಿ ಗುಂಪುಗಾರಿಕೆಗೆ ಬ್ರೇಕ್ ಹಾಕಿ, ಟಿಕೆಟ್ ವಂಚಿತರನ್ನು ಬಂಡಾಯ ಬಾವುಟ ಹಾರಿಸದಂತೆ ಮನವೊಲಿಸಿ ಮತದಾನದ ಮುನ್ನಾ ದಿನದವರೆಗೂ ಅಲ್ಲಿಯೇ ಮೊಕ್ಕಾಂ ಹೂಡಿ ಕಮಲ ಪಡೆಯನ್ನು ದಡ ಮುಟ್ಟಿಸಿ, ಮೋದಿಯವರ ಗೆಲುವಿನ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದ್ದಾರೆ.
ಈ ಹಿಂದೆ ಉತ್ತರಾಖಂಡದ ಉಸ್ತುವಾರಿಯಾಗಿ ಅವರು ಪಕ್ಷದ ವಿರುದ್ದ ಆಡಳಿತ ವಿರೋಧಿ ಅಲೆ ಇದ್ದರೂ ಅದನ್ನು ಮೀರಿ ಗೆಲುವು ತಂದುಕೊಟ್ಟಿದ್ದರು. ಅಸಾಧ್ಯ ಎಂಬುದನ್ನು ಸಾಧ್ಯವಾಗಿಸಿದ ಜೋಶಿಯವರಿಗೆ ಉತ್ತರಾಖಂಡ ಗೆಲುವು ತಂದು ಕೊಟ್ಟಾಗಲು ಭಾರೀ ಸ್ವಾಗತ ಮಾಡಲಾಗಿತ್ತು. ಈ ಬಾರಿ ಮತ್ತೆ ಪಕ್ಷಕ್ಕೆ ರಾಜಸ್ತಾನದಲ್ಲಿ ತಮ್ಮ ತಂತ್ರಗಾರಿಕೆಯ ಮೂಲಕ ಜಯದ ಸಿಂಚನ ತಂದಿದ್ದು ಕಾರ್ಯಕರ್ತರು, ಮುಖಂಡರು ಪಾಲ್ಗೊಂಡು ಅಭಿನಂದಿಸಿದರಲ್ಲದೇ ಮುಂಬರುವ ಲೋಕಸಭಾ ಚುನಾವಣೆಯ ಮೊದಲ ಪ್ರಚಾರ ರ್ಯಾಲಿ ಇಂದೇ ಆರಂಭಗೊಂಡಂತಾಯಿತು.
*ಮೋದಿ ಬೈಯ್ಯದಿದ್ದರೆ ಸಿಎಂಗೆ ಊಟ ಸೇರಲ್ಲ*
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ೧೦ ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಇತರ ರಾಜ್ಯ ಸರ್ಕಾರಗಳಿಗೆ ನೀಡಿರುವ ಅನುದಾನದ ಬಗ್ಗೆ ಸದ್ಯದಲ್ಲಿಯೇ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು’ ಎಂದರು.ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
’ಹಿಂದಿನ ಯುಪಿಎ ಸರ್ಕಾರ ೧೦ ವರ್ಷಗಳಲ್ಲಿ ರಾಜ್ಯಗಳಿಗೆ ನೀಡಿರುವ ಅನುದಾನದ ಪ್ರಮಾಣವನ್ನು ಹೋಲಿಕೆ ಮಾಡಿ, ಪ್ರಸ್ತುತ ಕೇಂದ್ರ ಸರ್ಕಾರ ನೀಡಿರುವ ಅನುದಾನದ ಮಾಹಿತಿಯನ್ನು ನೀಡಲಾಗುವುದು’ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಕ್ಕೆ ಸಂಬಂಧಿಸಿ ಸೂಕ್ತ ತನಿಖೆ ನಡೆಸುವುದರ ಹೊರತಾಗಿ ಸಿದ್ದರಾಮಯ್ಯ ಬಾಲಿಷ್ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೌಲ್ವಿ ತನ್ವೀರ್ ಹಾಶ್ಮೀ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವ ಭಾವಚಿತ್ರವನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ಆದರೆ ಆ ಭೇಟಿ ಸಂದರ್ಭದಲ್ಲಿ ಹಶ್ಮೀ ಅವರಿಗೆ ಇರುವ ನಂಟಿನ ಕುರಿತು ಗುಪ್ತ ಮಾಹಿತಿ ಇತ್ತೋ ಇಲ್ಲವೋ ಎಂಬುದು ತಿಳಿದಿಲ್ಲ. ಈ ಎಲ್ಲ ವಿಷಯ ಕುರಿತು ಸೂಕ್ತ ತನಿಖೆಯಾಗಿ ಮಾಹಿತಿ ಹೊರಬರಬೇಕಿದೆ ಎಂದರು.
ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯ್ಯದಿದ್ದರೇ ಊಟ ರುಚಿಸದು ಎಂದರು.
ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಮಹಾನಗರ ಅಧ್ಯಕ್ಷ ಸಂಜಯ ಕಪಟಕರ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ ಇತರರು ಇದ್ದರು.
ಚಿತ್ರನಟಿ ಲೀಲಾವತಿ ನಿಧನದ ಕಾರಣ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯನ್ನು ಸ್ಥಗಿತಗೊಳಿಸಲಾಯಿತು.ಸ್ವಾಗತದ ನಂತರ ದಿ.ಸದಾಶಿವ ಶೆಟ್ಟರ 56ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.