*ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಪ್ರಸಾದ್, ಕೋರೆ, ಮುನವಳ್ಳಿ, ಮಜೇತಿಯಾ, ರಾಮನಗೌಡರ ತಂಡ*
ಹುಬ್ಬಳ್ಳಿ: ನಾಳೆ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿಯಿಂದ ಎಂಟು ಮಂದಿ ರಾಮ ಭಕ್ತರ ತಂಡ ವಿಶೇಷ ವಿಮಾನದ ಮೂಲಕ ಅಯೋಧ್ಯೆಗೆ ಪ್ರಯಾಣಿಸಿದೆ.
ಸ್ವರ್ಣ ಸಮೂಹದ ಮಾಲಿಕರು , ಸಮಾಜ ಸೇವೆಯಲ್ಲಿ ದೊಡ್ಡ ಹೆಸರಾದ ಡಾ. ಚಿಗರುಪಾಟಿ ವಿ.ಎಸ್.ವಿ ಪ್ರಸಾದ, ಕೆಎಲ್ಇ ಸಂಸ್ಥೆಯ ಚೇರಮನ್ ಪ್ರಭಾಕರ ಕೋರೆ, ಕೆಎಲ್ಇ ನಿರ್ದೇಶಕರು, ಗಣ್ಯ ವ್ಯಾಪಾರಸ್ಥರಾದ
ಶಂಕರಣ್ಣ ಮುನವಳ್ಳಿ, ವಿಶ್ವಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಡಾ. ಎಂ.ಆರ್.ರಾಮನಗೌಡರ, ಖ್ಯಾತ ಉದ್ಯಮಿ ಜಿತೇಂದ್ರ ಮಜೇಥಿಯಾ ರಾಮನ ಊರಿಗೆ ತೆರಳಿದವರಾಗಿದ್ದಾರೆ.
ಡಾ.ಪ್ರಸಾದ ಅವರು ಕಳೆದ ಅನೇಕ ವರ್ಷಗಳಿಂದ ಅಯ್ಯಪ್ಪನ ವೃತ ಆಚರಣೆ ಮಾಡುತ್ತಿದ್ದು. ಆ ವೃತ ಮುಗಿಸಿ ರಘುರಾಮನ ದರ್ಶನಕ್ಕೆ ಹೊರಟಿದ್ದಾರೆ .ಈ ವೇಳೆ ಮಾತನಾಡಿದ ಅವರು,
ಕೋಟ್ಯಂತರ ಹಿಂದೂಗಳ ಐದುನೂರು ವರ್ಷಗಳ ಕನಸು ನಾಳೆ ನನಸಾಗುತ್ತಿದೆ.ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದೆ. ಇಂದು ನನ್ನ ಪಾಲಿಗೆ ಪೂರ್ವ ಜನ್ಮದ ಪುಣ್ಯವೋ ಎನ್ನುವಂತಿದೆ.ಈ ಅವಕಾಶ ನಮಗೆ ದೊರೆತಿರುವುದು ನಿಜಕ್ಕೂ ಸೌಭಾಗ್ಯ ಎಂದು ಭಾವಿಸುವೆ. ಅಲ್ಲದೇ ಸರ್ವ ಜನಾಂಗದ ಜನತೆಯೂ ಕಳೆದ
15 ದಿನಗಳಿಂದ ರಾಮನ ಪ್ರತಿಷ್ಠಾಪನೆಯನ್ನು ಮನೆಯ ಕಾರ್ಯಕ್ರಮವೆಂಬಂತೆ ಆಚರಿಸುತ್ತಿದ್ದು ಭಾರತ ವಿಶ್ವದಲ್ಲಿ ನಂ.1 ಆಗಲಿ ಎಂದು ಶ್ರೀರಾಮನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಭಾಗವಹಿಸುತ್ತಿರುವುದು ನಮ್ಮ ಪಾಲಿಗೆ ನಿಜಕ್ಕೂ ಸಂತಸದ ವಿಚಾರ ಎಂದು ಡಾ.ಕೋರೆ ಹೇಳುತ್ತಾರೆ.
ನಾಳಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನನ್ನ ಸುಯೋಗವೇ ಸರಿ. 3 ಸಾವಿರ ಆಹ್ವಾನಿತರಲ್ಲಿ ನಾವೂ ಇರುತ್ತೇವೆ ಎಂದು ಕನಸಲ್ಲಿ ಸಹ ಎಣಿಸಿರಲಿಲ್ಲ. ಭಗವಾನ್ ಶ್ರೀರಾಮ ಸಕಲರಿಗೂ ಒಳ್ಳೆಯದನ್ನು ಮಾಡಲಿ, ದೇಶ ಸುಭೀಕ್ಷದಿಂದ ಕೂಡಿರಲಿ ಎಂದು ಶಂಕ್ರಣ್ಣ ಮುನವಳ್ಳಿ ಸಂತಸ ವ್ಯಕ್ತಪಡಿಸಿದರು.
ನಾಳಿನ ಅಮೃತ ಕ್ಷಣಗಳಿಗೆ ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಡಾ.ರಾಮನಗೌಡರ ಹೇಳುತ್ತಾರೆ. ಉದ್ಯಮಿ ಜಿತೇಂದ್ರ ಮಜೇಥಿಯಾ ನಾಳೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಜೀವನದ ಅತ್ಯಂತ ವಿಶೇಷ ಕ್ಷಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಎಲ್ಲ ಗಣ್ಯರ ಆಪ್ತರು, ಕುಟುಂಬವರ್ಗದವರು,ಹಿತೈಷಿಗಳು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು.
ರಾಮಮಂದಿರ ನಿರ್ಮಾಣಕ್ಕಾಗಿ ಈ ಗಣ್ಯರು ದೊಡ್ಡ ದೇಣಿಗೆಯನ್ನು ಸಹ ನೀಡಿದ್ದರು.
*ಬಂದೋಬಸ್ತ್* :ವಾಣಿಜ್ಯ ನಗರಿ ಹುಬ್ಬಳ್ಳಿ, ಪೇಡಾ ನಗರಿ ಧಾರವಾಡ ಎರಡು ನಗರಗಳು ರಾಮೋತ್ಸವದ ಹಿನ್ನೆಲೆಯಲ್ಲಿ ಬಹುತೇಕ ಕೇಸರಿಮಯವಾಗಿದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.