*ಧಾರವಾಡ ಲೋಕಸಭಾಕ್ಕೆ ಕೇಂದ್ರ ಸಚಿವರೇ ಬಿಜೆಪಿ ಹುರಿಯಾಳು ಪಕ್ಕಾ*/ *ವದಂತಿಗಳಿಗೆ ಬಿತ್ತು ತೆರೆ*
ಹುಬ್ಬಳ್ಳಿ : ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಇಡೀ ರಾಜ್ಯದಲ್ಲೇ ಬಿಜೆಪಿಯ ಮೊದಲ ಟಿಕೆಟ್ ಅನಧಿಕೃತವಾಗಿ ಘೋಷಣೆಯಾಗಿದ್ದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತೊಮ್ಮೆ ಕಣಕ್ಕಿಳಿಯುವುದು ಖಚಿತವಾಗಿದ್ದು ಇಂದು ಅವರ ಹತ್ತು ವರ್ಷದ ಸಾಧನೆ ಗಳ ಪುಸ್ತಕವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ ಬಿಡುಗಡೆ ಮಾಡುವ ಮೂಲಕ ಸ್ಪಷ್ಟ ಸಂದೇಶ ರವಾನೆಯಾಗಿದ್ದು ಅಲ್ಲದೇ ಅವಳಿನಗರಗಳಲ್ಲಿ ಚುನಾವಣಾ ಕಾರ್ಯಾಲಯ ಸಹ ಈಗಾಗಲೇ ಆರಂಭಗೊಂಡಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘರ್ ವಾಪಸಿಯಾದ ನಂತರ ಅವರೂ ಆಕಾಂಕ್ಷಿ ಅವರಿಗೆ ಟಿಕೆಟ್ ನಿಶ್ಚಿತ ಎನ್ನುವಂತಹ ಗುಸು ಗುಸು ಸ್ವಲ್ಪ ಕಾರ್ಯಕರ್ತರ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿತ್ತಾದರೂ ಕಳೆದ ಒಂದು ವಾರದಿಂದ ಚಿತ್ರಣವೇ ಬದಲಾಗಿದ್ದು ಕೇಂದ್ರ ಸಚಿವ ಜೋಶಿಯವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.
ಜೋಶಿಯವರನ್ನು ರಾಜ್ಯ ಸಭೆ ಸದಸ್ಯರನ್ನಾಗಿ ಮಾಡಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿಸುವರೆಂಬ ವದಂತಿ, ನೆರೆಯ ಉತ್ತರಕನ್ನಡಕ್ಕೆ ಅಭ್ಯರ್ಥಿಯೆಂಬ ಗಾಳಿ ಸುದ್ದಿಗಳು ಹರಿದಾಡುತ್ತಿದ್ದರೂ ಶೆಟ್ಟರ್ ಮರಳಿ ಪಕ್ಷಕ್ಕೆ ವಾಪಸಾಗಿ ನನಗೆ ಎಲ್ಲಿ ಅಗೌರವವಾಗಿದೆಯೋ ಅಲ್ಲೇ ಗೌರವ ದೊರೆಯುವಂತಾಗಬೇಕು ಎಂಬಂತಹ ಮಾತುಗಳು ಅಲ್ಲದೇ ಹೈಕಮಾಂಡ್ ಸೂಚಿಸಿದಂತೆ ನಡೆಯುವುದಾಗಿ ಹೇಳಿದ ಮಾತುಗಳು ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿದ್ದರೂ ಕಳೆದ ಒಂದು ವಾರದಿಂದ ಜೋಶಿಯವರ ಚಟುವಟಿಕೆ ಅವರೇ ಮತ್ತೊಮ್ಮೆ ಕಣಕ್ಕಿಳಿಯುವುದು ಪಕ್ಕಾ ಎಂಬುದನ್ನು ಖಚಿತಪಡಿಸಿದೆ. ಸಂಘ ಪರಿವಾರದ/ ಡಾ.ಮಲ್ಲಿಕಾರ್ಜುನ ಬಾಳಿಕಾಯಿ ಹೆಸರೂ ಸಹ ದಿಢೀರ ಅಗಿ ಚಾಲ್ತಿಗೆ ಬಂದಿತ್ತು.
ಕಾಂಗ್ರೆಸ್ನಿಂದ ಯಾರು ಸ್ಪರ್ಧೆಗಿಳಿಯುತ್ತಾರೆಂಬುದು ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಪಾಟೀಲ, ಮಾಜಿ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ,ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ ಪಾಟೀಲ ಮತ್ತು ಲೋಹಿತ್ ನಾಯ್ಕರ ಇವರ ಹೆಸರುಗಳು ಶಾರ್ಟ ಲೀಸ್ಟನಲ್ಲಿದೆ ಎನ್ನಲಾಗಿದೆ.
2004ರಿಂದ 2019ರವರೆಗೆ ನಾಲ್ಕು ಬಾರಿಯೂ ಪ್ರತಿ ಚುನಾವಣೆಯಲ್ಲಿ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಲೆ ಬಂದಿರುವ ಜೋಶಿಯವರು ಈ ಬಾರಿ ಐತಿಹಾಸಿಕ ದಾಖಲೆಯ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ – ಕಮಲ ಎರಡೂ ತಲಾ 4 ಶಾಸಕರ ಬಲ ಹೊಂದಿದ್ದು, ಕಾಂಗ್ರೆಸ್ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಜೋಶಿಯವರಿಗೆ ಕೈ ಕೊಡುತ್ತವೆ ಎಂಬುದನ್ನು ನೋಡಬೇಕಾಗಿದೆ.
ಇದೇ ಮೊದಲ ಬಾರಿಗೆ ಶೆಟ್ಟರ್ ಜೋಶಿಯವರ ಕಾರ್ಯಕ್ರಮದಲ್ಲಿ ಮರು ಸೇರ್ಪಡೆ ನಂತರ ಕಾಣಿಸಿಕೊಂಡರು.