*ಕೈ ಪಾಳಯದಲ್ಲೂ ಪೈಪೋಟಿ / ಆಪರೇಷನ್ ಗೆ ಬಿಜೆಪಿ ಕಸರತ್ತು*
ಧಾರವಾಡ : ಇಲ್ಲಿನ ಕೆಸಿಸಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ನರಗುಂದ ತಾಲೂಕಿನ ಫಲಿತಾಂಶವನ್ನು ಗುರುವಾರ ಪ್ರಕಟಗೊಳ್ಳುವದರೊಂದಿಗೆ ನೂತನ ಆಡಳಿತ ಮಂಡಳಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಮಹಾಬಳೇಶ್ವರಗೌಡ ಶಿದ್ಧನಗೌಡ ಪಾಟೀಲ 13 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಮಲ್ಲನಗೌಡ ತಿಮ್ಮನಗೌಡರ 8 ಮತಗಳನ್ನು ಪಡೆದು ಸೋಲನುಭವಿಸಿದರು.1 ಮತ ತಿರಸ್ಕೃತವಾಯಿತು.
ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಸಶಾಅಲಂ ಹುಸೇನ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು.
ಕಳೆದ ಸೆಪ್ಟೆಂಬರ 30 ರಂದು ಆಡಳಿತ ಮಂಡಳಿಯ 20 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆದರೆ ವಿವಿಧ ಕಾರಣಗಳಿಂದ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದರಿಂದ, ಕೆಲವು ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಲು ವಿಳಂಬವಾಗಿತ್ತು.
ಇದೇ ತಿಂಗಳು 8ಕ್ಕೆ ಹಾಲಿ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡಿದ್ದು, ನೂತನ ಆಡಳಿತ ಮಂಡಳಿ ಇದೀಗ ಅಸ್ತಿತ್ವಕ್ಕೆ ಬಂದಂತಾಗಿದೆ.
ಈ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇದೇ ದಿ.23 ರಂದು ನಡೆಯಲಿದ್ದು,
ಈ ಸಂಬಂಧ ಆಡಳಿತ ಮಂಡಳಿ ಸದಸ್ಯರಿಗೆ ಅಧೀಕೃತ ಮಾಹಿತಿ ಕೂಡ ರವಾನೆಯಾಗಿದೆ.
ಬ್ಯಾಂಕ್ ಅವಿಭಜಿತ ಧಾರವಾಡ ಜಿಲ್ಲೆಯ ವ್ಯಾಪ್ತಿ ಹೊಂದಿರುವುದರಿಂದ ಸಹಜವಾಗಿ ಮೂದು ಜಿಲ್ಲೆಯಲ್ಲಿನ ಆಕಾಂಕ್ಷಿಗಳಲ್ಲಿ ಆಸೆ ಗರಿಗೆದರಿದೆ.
ಬ್ಯಾಂಕಿನ 20ಸದಸ್ಯರಲ್ಲಿ 11 ಕಾಂಗ್ರೆಸ್ ಬೆಂಬಲಿತರಿದ್ದು,9 ಜನ ಬಿಜೆಪಿ ಬೆಂಬಲಿತರಿದ್ದಾರೆ.ಅಲ್ಲದೇ ಬ್ಯಾಂಕ್ ಕೇಂದ್ರ ಕಚೇರಿ ಹೊಂದಿರುವ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯಲ್ಲಿ
ಮತಾಧಿಕಾರ ಹೊಂದಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಆಡಳಿತ ಹೊಂದಿರುವ
ಕಾಂಗ್ರೆಸ್ ಬೆಂಬಲಿತರ ಬಳಿ ಸಧ್ಯಕ್ಕೆ 12 ಸಂಖ್ಯಾಬಲ ಇರುವುದರಿಂದ ಕೈ ಬೆಂಬಲಿಗರು
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೇರುವುದು ಮೇಲ್ನೋಟಕ್ಕೆ ನಿಶ್ಚಿತವಾಗಿದೆ.
ಕಾಂಗ್ರೆಸ್ ಪಕ್ಷದ ಕೊಟ್ರೇಶಪ್ಪ ಬಸೇಗಣ್ಣಿ (ಹಾವೇರಿ), ಶಿವಕುಮಾರಗೌಡ ಪಾಟೀಲ (ಗದಗ) ಮತ್ತು ಮಂಜುನಾಥಗೌಡ ಮುರಳ್ಳಿ ( ಧಾರವಾಡ) ಅಧ್ಯಕ್ಷ ಗಾದಿಯ ರೇಸ್ ನಲ್ಲಿ ಇದ್ದಾರೆ.
ಅಧ್ಯಕ್ಷ ಸ್ಥಾನದ ಕಣ್ಣಿಟ್ಟಿರುವ ಕೊಟ್ರೇಶಪ್ಪ ಬಸೇಗಣ್ಣಿ ಮತ್ತು ಶಿವಕುಮಾರಗೌಡ ಪಾಟೀಲರಿಗೆ ಸಚಿವ ಎಚ್.ಕೆ.ಪಾಟೀಲರ ಬಲವಿದೆ.
ಇತ್ತ ಧಾರವಾಡದ ಮಂಜುನಾಥಗೌಡ ಮುರಳ್ಳಿ ಅವರ ಬೆನ್ನಿಗೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಇದ್ದಾರೆ.
ಗದಗ ಮತ್ತು ಹಾವೇರಿ ಜಿಲ್ಲೆಯ ಸಚಿವರು ಮತ್ತು ಶಾಸಕರು ಕೊಟ್ರೇಶಪ್ಪ ಬಸೇಗಣ್ಣಿ ಯತ್ತ ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಆದರೆ, ಮಾಜಿ ಸಹಕಾರ ಸಚಿವ ಎಸ್.ಎಸ್.ಪಾಟೀಲರ ಪುತ್ರ, ಬ್ಯಾಂಕಿಗೆ ಆರನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿ ರುವ
ಶಿವಕುಮಾರಗೌಡ ಮತ್ತೊಮ್ಮೆ ಅಧ್ಯಕ್ಷ ಗಾದಿಗೇರುವ ಉತ್ಸಾಹದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಶಿವಕುಮಾರಗೌಡ ತಮಗೆ ಪೂರಕ ವಾತಾವರಣ ಸೃಷ್ಢಿಸಿಕೊಳ್ಳುವ ತಂತ್ರ ರೂಪಿಸುತ್ತಿದ್ದಾರೆ.
ಆದರೆ, ಸಚಿವ ಸಂತೋಷ ಲಾಡ್ ಅವರು ತಮ್ಮ ಆಪ್ತನನ್ನೇ ಅಧ್ಯಕ್ಷ ಕುರ್ಚಿಯಲ್ಲಿ ಕೂಡ್ರಿಸಬೇಕು ಎಂದು ಪ್ರತಿಷ್ಢೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
*ಬಿಜೆಪಿ ಪ್ರತಿತಂತ್ರ*
ಇತ್ತ ಬಿಜೆಪಿಯ ಹಿರಿಯ ಸಹಕಾರಿ ಧುರೀಣ ಜಿ.ಪಿ.ಪಾಟೀಲ ಹಾಗೂ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಸುಮ್ಮನೆ ಕುಳಿತಿಲ್ಲ.
ಈ ಹಿಂದೆ ಅಧ್ಯಕ್ಷರಾಗಿ, ನಿಸ್ವಾರ್ಥ ದಿಂದ ಬ್ಯಾಂಕಿನ ಪ್ರಗತಿಗೆ ಶ್ರಮಿಸಿದ ದಿ.ಪಿ.ಎಲ್. ಪಾಟೀಲರ ಪುತ್ರರಾದ ಜಿ.ಪಿ.ಪಾಟೀಲ ಈ ಬಾರಿ ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯುವ ತವಕದಲ್ಲಿದ್ದಾರೆ. ತಂದೆಯವರ ಆದರ್ಶ ಮತ್ತು ತಮ್ಮ ಸರಳತೆಯಿಂದ ಸಹಕಾರಿ ವಲಯದಲ್ಲಿ ಜಿಪಿ ಅಜಾತಶತ್ರು ಎನಿಸಿದ್ದಾರೆ. ತಮಗಿರುವ ಇಮೇಜ್ ನ್ನೇ ಮುಂದಿಟ್ಟುಕೊಂಡು
ಪ್ರಯತ್ನ ಮುಂದುವರೆಸಿದ್ದಾರೆ.
ಗೆಲುವಿಗೆ ಅಗತ್ಯ ಬಲ ಕ್ರೋಢೀಕರಿಸುವ ದಿಸೆಯಲ್ಲಿ ಆಕಾಂಕ್ಷಿಗಳು ತಮ್ಮ ರಾಜಕೀಯ ಗಾಡ್ ಫಾದರ್ ಮೂಲಕ ಶತಪ್ರಯತ್ನ ಮಾಡುತ್ತಿದ್ದಾರೆ.
ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡರು ಕೆಸಿಸಿ ಬ್ಯಾಂಕ್ ಆಡಳಿತ ಕೈವಶ ಮಾಡಿಕೊಳ್ಳಲು ಹೊರಟಿದ್ದರೆ, ಪ್ರತಿತಂತ್ರದ ಮೂಲಕ ಕಾಂಗ್ರೆಸ್ಸಿಗರ ಆಸೆಗೆ ತಣ್ಣಿರೇರೆಚಲು ಕಮಲ ಪಾಳಯ ಸಜ್ಜಾಗಿದೆ.
ಹೀಗಾಗಿ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯು ಮೂರು ಜಿಲ್ಲೆಯ ಮುಖಂಡರ ರಾಜಕೀಯ ಬಲಾಬಲದ ಪರೀಕ್ಷೆಯ ಅಖಾಡ ಆಗಿ ಪರಿಣಮಿಸಿದೆ.