*ಹಿರಿಯರ ಮೂಲೆ ಗುಂಪು ಮಾಡುವ ಷಡ್ಯಂತ್ರ ನಡೆಯುತ್ತಲೇ ಇದೆ : ಶೆಟ್ಟರ್*
ಹುಬ್ಬಳ್ಳಿ : “ಕರ್ನಾಟಕ ಬಿಜೆಪಿಯು ಮುರಿದ ಮನೆಯಾಗಿದ್ಧು, ಅದನ್ನು ರಿಪೇರಿ ಮಾಡಲಾರದಷ್ಟು ಹದಗೆಟ್ಟಿದೆ”. ಹೀಗೆ ಹೇಳಿದವರು ಕಮಲ ಪಡೆಯ ಆಳ,ಅಗಲ ಬಲ್ಲ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್.
ಮಾಧ್ಯಮದವರ ಜೊತೆ ಗುರುವಾರ ಮಾತನಾಡಿದ ಅವರು,
ವಿಜಯೇಂದ್ರ ಪದಗ್ರಹಣಕ್ಕೆ ಯಾವೊಬ್ಬ ಕೇಂದ್ರ ನಾಯಕರು ಅಷ್ಟೇ ಅಲ್ಲದೆ ವೀಕ್ಷಕರು ಸಹ ಬಂದಿರಲಿಲ್ಲ ಇದು ವಾಸ್ತವವನ್ನು ಬಿಂಬಿಸುವುದು ಎಂದರು.
ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು, ಅದಕ್ಕೆ ವಿಜಯೇಂದ್ರರನ್ನು ಮಾಡಿದ್ದಾರೆ
ಆದರೆ ರಾಜ್ಯಾಧ್ಯಕ್ಷದ ಸ್ಥಾನಕಾಂಕ್ಷಿಗಳು ಯಾರೂ ಪದಗ್ರಹಣಕ್ಕೆ ಹೋಗಲಿಲ್ಲ ಎಂದರೆ ಏನರ್ಥವೆಂದು ಪ್ರಶ್ನಿಸಿದರು.
ಒಮ್ಮೆ ನೇಮಕವಾದ ಮೇಲೆ ಎಲ್ಲರೂ ಕೂಡಿ ಕೆಲಸ ಮಾಡಬೇಕೆಂಬ ಮನೋಭಾವ ಬರಬೇಕಿತ್ತು.ಅದು ಕಾಣುತ್ತಿಲ್ಲ. ಹೀಗಾಗಿ ಬಿಜೆಪಿಯ ಒಳ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಎಲ್ಲವನ್ನು ಕಾದು ನೋಡಿ, ಅಭಿ ಪಿಕ್ಚರ್ ಬಾಕಿ ಹೈ ಮುಂದೆ ನಿಮಗೆ ಗೊತ್ತಾಗುತ್ತದೆ ಎಂದರು.
ಬಿಜೆಪಿ ಆಪರೇಷನ್ ಕಮಲ ಪ್ರಕ್ರಿಯೆ ನಡೆದೆ ಇದೆ.ಈ ರೀತಿ ಮಾಡಿದ್ರೆ ಕೈ ಶಾಸಕರು ತಮ್ಮ ಪಕ್ಷಕ್ಕೆ ಬರ್ತಾರೆ ಅನ್ನುವ ಭ್ರಮೆಯಲ್ಲಿದ್ದಾರೆ ಅದು ಸಫಲವಾಗಲ್ಲ ಎಂದರು.
ಬಿಜೆಪಿಯಲ್ಲಿ ಹಿರಿಯರನ್ನು ದೂರವಿಡುವ ಕೆಲಸ ಬಹಳ ಹಿಂದಿನಿಂದಲೂ ನಡೆದಿದೆ.ಪಕ್ಷಕ್ಕಾಗಿ ಸಂಘಟನೆ ಮಾಡಿದವರನ್ನು, ದುಡಿದವರನ್ನು ಮೂಲೆ ಗುಂಪು ಮಾಡಲಾಗುತ್ತಿದೆ.
ಸದಾನಂದ ಗೌಡರನ್ನು ದೆಹಲಿಗೆ ಕರೆಯಿಸಿ ಮೂರು ದಿನ ಕಾಯಿಸಿದರು. ಐದು ನಿಮಿಷ ಮಾತನಾಡುವಷ್ಟು ಸೌಜನ್ಯವನ್ನು ತೋರಲಿಲ್ಲ ಇದು ಬಿಜೆಪಿ ಹಿರಿಯರನ್ನು ನಡೆಸಿಕೊಳ್ಳುವ ರೀತಿಗೆ ಇದೊಂದು ತಾಜಾ ಉದಾಹರಣೆ. ಹಿಂದೆ
ಎಲ್ ಕೆ ಅಡ್ವಾಣಿ, ಮುರುಳಿಮನೋಹರ ಜೋಷಿ ಮೊದಲಾದವರಿಗೆ ರಾಜಕೀಯ ನಿವೃತ್ತಿ ಕೊಟ್ಟುಬಿಟ್ಟರು.ನನಗೆ, ಲಕ್ಷ್ಮಣ್ ಸವದಿ ಮತ್ತು ಈಶ್ವರಪ್ಪಗೆ ಕರ್ನಾಟಕದಲ್ಲಿ ಟಿಕೆಟ್ ಕೊಡಲಿಲ್ಲ. ನನಗೆ ಟಿಕೆಟ್ ತಪ್ಪಿಸಲು ಏನು ಕಾರಣ ಅಂತ ಇದುವರೆಗೂ ಹೇಳಿಲ್ಲ.ಇದರ ಪರಿಣಾಮ ಏನಾಯ್ತು ಅಂತ ಇಡೀ ಜಗತ್ತಿಗೆ ಗೊತ್ತಿದೆ ಎಂದರು.
ಬಿಜೆಪಿ ವರಿಷ್ಠರಿಗೆ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಅನ್ನೋ ಆಸೆ.ಪಂಚ ರಾಜ್ಯಗಳ ಚುನಾವಣೆಯಲ್ಲಿ ಹಿರಿಯರಿಗೆ ಮಣೆ ಹಾಕಲಾಗಿದೆ 75- 80 ವಯಸ್ಸಾದವರಿಗೂ ಟಿಕೆಟ್ ನೀಡಲಾಗಿದೆ. ಅವರಿಗೆ ಯಾಕೆ ಟಿಕೆಟ್ ಕೊಟ್ಟರು ಎಂಬುದನ್ನು ಆ ಪಕ್ಷದ ವರಿಷ್ಠರೇ ಹೇಳಬೇಕು. ನಿಯಮ ಎಲ್ಲರಿಗೂ ಒಂದೇ ಅನ್ವಯ ಆಗಬೇಕಲ್ಲವೇ ಎಂದು ಪ್ರಶ್ನಿಸಿದರಲ್ಲದೇ ತಮ್ಮ ಪರಿಣಾಮ ಪಂಚ ರಾಜ್ಯಗಳ ಚುನಾವಣೆ ಮೇಲೂ ಆಗಿದೆ.ಅಧಿಕಾರ ಆಸೆಯಲ್ಲಿ ಅವರು ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಾರೆ ಎಂದು ಹೇಳಿದರು.
ಅವರು ಹೇಳಿದ್ದು ಧಾರವಾಡ ಜಿಲ್ಲೆಯ ಮಟ್ಟಿಗೆ ನೂರಕ್ಕೆ ನೂರು ನಿಜವಾಗಿದೆ. ವಿಜಯೇಂದ್ರ ಪದಗ್ರಹಣಕ್ಕೆ ಯಡಿಯೂರಪ್ಪ ಬೀಗರಾದ ಎಸ್.ಐ. ಚಿಕ್ಕನಗೌಡರ ಹಾಜರಾಗಿಲ್ಲ.ಅವರು ಕಾಂಗ್ರೆಸ್ ಹೊಸ್ತಿಲಲ್ಲಿ ನಿಂತಿದ್ದಾರೆ. ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಬೆಂಗಳೂರು ಕಡೆ ಮುಖ ಮಾಡಿಲ್ಲ. ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ , ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ ಹೋಗಿಲ್ಲವಾಗಿದೆ. ಕೇಂದ್ರ ಸಚಿವ ಜೋಷಿಯವರ ಶಿಷ್ಯರಾದ ಕುಂದಗೋಳ ಶಾಸಕ ಎಂ. ಆರ್. ಪಾಟೀಲ್, ಸಂತೋಷ್ ಜಿ ಆಪ್ತ ಮಹೇಶ್ ಟೆಂಗಿನಕಾಯಿ ಮಾತ್ರ ಅಭಿನಂದಿಸಿ ಬಂದಿದ್ದಾರೆ.